ಅನುಮೋದನೆ ನಂತರವೂ ಜಿಎಸ್ಟಿ ಬಗ್ಗೆ ಕಾಂಗ್ರೆಸ್ ಅಪಸ್ವರ
ನವದೆಹಲಿ, ಆಗಸ್ಟ್ 5: ಮೊನ್ನೆ ಮೊನ್ನೆಯಷ್ಟೇ ರಾಜ್ಯಸಭೆಯಲ್ಲೂ ಅನುಮೋದನೆ ಪಡೆದುಕೊಂಡಿದ್ದ ಸರಕು ಮತ್ತು ಸೇವಾ ತೆರಿಗೆ (GST) ವಿಧೇಯಕದ ಬಗ್ಗೆ ಕಾಂಗ್ರೆಸ್ ಮತ್ತೆ ಪ್ರತಿರೋಧ ತೋರಿಸುವ ಸಾಧ್ಯತೆಯಿದೆಯೇ?
ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ನೀಡಿರುವ ಹೇಳಿಕೆಯನ್ನು ಗಮನಿಸುವುದಾದರೆ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಿಂದ ಮತ್ತೆ ವಿಧೇಯಕದ ಬಗ್ಗೆ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ. (ಜಿಎಸ್ಟಿ, ಯಾವುದು ಏರಿಕೆ ಯಾವುದು ಇಳಿಕೆ)
ಈಗಾಗಲೇ ತಮಿಳುನಾಡು ಹೊರತು ಪಡಿಸಿ ಇತರ ರಾಜ್ಯಗಳು ಏಕರೂಪ ತೆರಿಗೆಗೆ ಒಪ್ಪಿಗೆ ಸೂಚಿಸಿವೆ. ದೇಶದಲ್ಲಿ ಹಣದುಬ್ಬರ ಕಡಿಮೆಯಾಗಬೇಕಿದ್ದರೆ ತೆರಿಗೆ ಪ್ರಮಾಣ ಕಡಿಮೆ ಇರಬೇಕು ಎಂದು ಜೈರಾಂ ರಮೇಶ್ ಹೇಳಿದ್ದಾರೆ.
ಜಿಎಸ್ಟಿ ಶೇ. 18ಕ್ಕಿಂತ ಹೆಚ್ಚಿದ್ದ ಪಕ್ಷದಲ್ಲಿ ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತ ಪಡಿಸಲಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಜಿಎಸ್ಟಿ ಜಾರಿಗೆಗೆ ಒಪ್ಪಿಗೆ ಸಿಗಲಾರದು ಎಂದು ಜೈರಾಂ ರಮೇಶ್ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಗುರುವಾರ (ಆ 4) ಮಾತನಾಡುತ್ತಿದ್ದ ರಾಜ್ಯಸಭಾ ಸದಸ್ಯ ಜೈರಾಂ ರಮೇಶ್, ಜಿಎಸ್ಟಿ ಗ್ರಾಹಕ ಸ್ನೇಹಿಯಾಗಿರಬೇಕು. ಇದರಿಂದ ತೆರಿಗೆ ಸಂಬಂಧ ಯಾವುದೇ ದೂರುಗಳು ದಾಖಲಾಗುವುದು ಕಮ್ಮಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. (ಜಿಎಸ್ಟಿ ಎಂದರೇನು)
ಅತ್ಯಂತ ಪ್ರಮುಖವಾದ ವಿಧೇಯಕವೊಂದು ಚರ್ಚೆಗೆ/ಅನುಮೋದನೆಗೆ ಬರುವ ವೇಳೆ ಪ್ರಧಾನಮಂತ್ರಿಗಳು ಸಂಸತ್ತಿನಲ್ಲಿ ಹಾಜರಿರಬೇಕಾಗಿರುತ್ತದೆ. ಆದರೆ ರಾಜ್ಯಸಭೆಯಲ್ಲಿ ಜಿಎಸ್ಟಿ ಮಸೂದೆ ಮಂಡನೆಯ ವೇಳೆ ಪ್ರಧಾನಿ ಮೋದಿ ಹಾಜರಿರಲಿಲ್ಲ ಎಂದು ಜೈರಾಂ ರಮೇಶ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಮೋದಿಯವರು ವಿದೇಶ ಪ್ರವಾಸದಲ್ಲಿ ಏನೂ ಇರಲಿಲ್ಲ. ವಿಧೇಯಕ ಮಂಡನೆಯ ವೇಳೆ ಐದು ನಿಮಿಷವಾದರೂ ರಾಜ್ಯಸಭೆಯಲ್ಲಿ ಹಾಜರಿರಬಹುದಿತ್ತು. ಇದು ' ಪಿಎಂ ಮುಕ್ತ್ ಪಾರ್ಲಿಮೆಂಟ್' ಎಂದು ಜೈರಾಂ ರಮೇಶ್ ಲೇವಡಿ ಮಾಡಿದ್ದಾರೆ.