ಚುನಾವಣೆ ವೇಳೆಯೇ ಕಾಂಗ್ರೆಸ್ಗೆ ಆಘಾತ: ಪಕ್ಷಕ್ಕೆ ಪ್ರಿಯಾಂಕಾ ಗುಡ್ಬೈ
ನವದೆಹಲಿ, ಏಪ್ರಿಲ್ 19: ಲೋಕಸಭೆ ಚುನಾವಣೆ ನಡೆಯುತ್ತಿರುವ ಮುಖ್ಯಘಟ್ಟದಲ್ಲಿಯೇ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಆಘಾತ ಎದುರಿಸಿದೆ. ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಗುರುವಾರ ರಾತ್ರಿ ಪಕ್ಷಕ್ಕೆ ಗುಡ್ಬೈ ಹೇಳಿದ್ದಾರೆ. ಇದರಿಂದ ಮಹಿಳೆಯರ ಸಬಲೀಕರಣ, ಗೌರವದ ಕುರಿತು ಪದೇ ಪದೇ ಪ್ರಸ್ತಾಪಿಸುತ್ತಿದ್ದ ಕಾಂಗ್ರೆಸ್ಗೆ ತೀವ್ರ ಮುಜುಗರ ಉಂಟಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಎರಡು ದಿನಗಳ ಹಿಂದಷ್ಟೇ ಪಕ್ಷದಲ್ಲಿನ ಬೆಳವಣಿಗೆಗಳ ಕುರಿತು ನಾಯಕತ್ವದ ವಿರುದ್ಧ ಹರಿಹಾಯ್ದಿದ್ದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ, ತಮ್ಮ ಆಕ್ಷೇಪದ ಬಳಿಕವೂ ಅದರ ಬಗ್ಗೆ ನಾಯಕರು ದಿವ್ಯ ನಿರ್ಲಕ್ಷ್ಯ ವಹಿಸಿದ್ದರಿಂದ ಬೇಸರಗೊಂಡು ಪಕ್ಷ ತ್ಯಜಿಸಿದ್ದಾರೆ.
ಅಸಭ್ಯವಾಗಿ ವರ್ತಿಸಿದ್ದ ಮುಖಂಡರಿಗೆ ಮನ್ನಣೆ: ಕಾಂಗ್ರೆಸ್ ವಿರುದ್ಧ ಪ್ರಿಯಾಂಕಾ ಆಕ್ರೋಶ
ಉತ್ತರ ಪ್ರದೇಶದಲ್ಲಿ ಕಳೆದ ವರ್ಷ ಪ್ರಿಯಾಂಕಾ ಚತುರ್ವೇದಿ ಅವರೊಂದಿಗೆ ಪಕ್ಷದ ಕೆಲವು ಮುಖಂಡರು ಅಸಭ್ಯವಾಗಿ ವರ್ತಿಸಿದ್ದರು. ಇದು ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಆದರೆ, ಈಗ ಚುನಾವಣೆ ಸಂದರ್ಭದಲ್ಲಿ ಈ ಮುಖಂಡರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಂಡಿರುವುದಲ್ಲದೆ, ಅವರಿಗೆ ಅದೇ ಹುದ್ದೆಗಳನ್ನು ನೀಡಲಾಗಿದೆ. ಇದು ಪ್ರಿಯಾಂಕಾ ಅವರಲ್ಲಿ ಅಸಮಾಧಾನ ಮೂಡಿಸಿತ್ತು. ಈ ಬಗ್ಗೆ ಅವರು ಟ್ವಿಟ್ಟರ್ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಕ್ಯೂಂಕಿ ಮಂತ್ರಿ ಭಿ ಕಭಿ ಗ್ರಾಜ್ಯುವೇಟ್ ಥಿ : ಸ್ಮೃತಿ ವಿದ್ಯಾರ್ಹತೆ ವಿಡಂಬನೆ
ಆದರೆ, ಪ್ರಿಯಾಂಕಾ ಅವರ ಆಕ್ಷೇಪಕ್ಕೆ ಕಾಂಗ್ರೆಸ್ ಯಾವುದೇ ಮಾನ್ಯತೆ ಕೊಟ್ಟಿಲ್ಲ. ಇದರಿಂದ ಮನನೊಂದಿರುವ ಅವರು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
|
ಹತ್ತು ವರ್ಷದ ಹಿಂದೆ ಸೇರ್ಪಡೆ
'ಭಾರವಾದ ಹೃದಯದಿಂದ ರಾಜೀನಾಮೆಯನ್ನು ಬರೆಯುತ್ತಿದ್ದೇನೆ. ಪಕ್ಷದ ಸಿದ್ಧಾಂತದಲ್ಲಿ ಮತ್ತು ಎಲ್ಲರನ್ನು ಒಳಗೊಳ್ಳುವ, ಮುಕ್ತ ಮತ್ತು ಪ್ರಗತಿಪರ ರಾಜಕೀಯದಲ್ಲಿನ ನಿಮ್ಮ ದೃಷ್ಟಿಕೋನಗಳಲ್ಲಿ ನಂಬಿಕೆಯಿರಿಸಿ ಹತ್ತು ವರ್ಷದ ಹಿಂದೆ ಮುಂಬೈನಲ್ಲಿ ಯುವ ಕಾಂಗ್ರೆಸ್ ಸೇರ್ಪಡೆಯಾಗಿದ್ದೆ.
ಪಕ್ಷ ವೇದಿಕೆ, ಅವಕಾಶ ನೀಡಿದೆ
ಈ ಹತ್ತು ವರ್ಷಗಳಲ್ಲಿ ಪಕ್ಷವು ನನಗೆ ರಾಜಕೀಯವಾಗಿ/ಸಾರ್ವಜನಿಕವಾಗಿ ಬೆಳೆಯಲು ಮತ್ತು ಕಲಿಯಲು ಸಾಕಷ್ಟು ವೇದಿಕೆಗಳನ್ನು ಕಲ್ಪಿಸಿದೆ. ಈ ಸಂದರ್ಭದಲ್ಲಿ ನಾನು ಪಕ್ಷದ ನಿಲುವುಗಳು ಮತ್ತು ಸಂದೇಶಗಳನ್ನು ಮುಂದಕ್ಕೆ ಕೊಂಡೊಯ್ದಿದ್ದೇನೆ. ಶೇ 100ಕ್ಕಿಂತಲೂ ಅಧಿಕ ಬದ್ಧತೆ, ಒಲವು ಮತ್ತು ಆಸಕ್ತಿಯಿಂದ ಪಕ್ಷ ನನಗೆ ವಹಿಸಿದ ಎಲ್ಲ ಕೆಲಸಗಳನ್ನು ನಿಭಾಯಿಸಲು ಪ್ರಯತ್ನಿಸಿದ್ದೇನೆ. ಈ ಕಳೆದ ವರ್ಷಗಳಲ್ಲಿ ಪಕ್ಷದೊಂದಿಗಿನ ನನ್ನ ಒಡನಾಟದಲ್ಲಿ ಪಕ್ಷ ಅತ್ಯಂತ ಕೆಳಮಟ್ಟಕ್ಕೆ ಕುಸಿದ ಸಂದರ್ಭದಲ್ಲಿ ಪಕ್ಷವನ್ನು ವಿವಿಧ ವೇದಿಕೆಗಳಲ್ಲಿ ಪ್ರತಿನಿಧಿಸಿದ್ದೇನೆ.
|
ಬೆದರಿಕೆಗಳು ಬಂದಿದ್ದವು
ಪಕ್ಷದ ಸೇವೆಯ ಸಂದರ್ಭದಲ್ಲಿ ನನಗೆ ಮತ್ತು ನನ್ನ ಮಕ್ಕಳು ಸೇರಿದಂತೆ ಕುಟುಂಬಕ್ಕೆ ಎದುರಾದ ವೈಯಕ್ತಿಕ ಬೆದರಿಕೆಗಳು, ನಿಂದನೆಗಳ ಬಗ್ಗೆ ನಿಮಗೆ ನೆನಪಿಸುವ ಅಗತ್ಯವೂ ಇಲ್ಲ. ನನ್ನ ಮಹತ್ವಾಕಾಂಕ್ಷೆಗಳನ್ನು ಪಕ್ಷ ಹಾಗೂ ಅದರ ನಾಯಕತ್ವ ಈಡೇರಿಸುತ್ತದೆ ಎಂಬ ಭರವಸೆಯಲ್ಲಿ ಯಾವುದೇ ಪದವಿಗಳನ್ನು ನನಗಾಗಿ ಕೇಳಿರಲಿಲ್ಲ.
ಆತ್ಮಗೌರವಕ್ಕೆ ಧಕ್ಕೆ
ಕಳೆದ ಕೆಲವು ಘಟನೆಗಳು ಪಕ್ಷದಲ್ಲಿ ನನ್ನ ಸೇವೆಗೆ ಬೆಲೆಯಿಲ್ಲ ಮತ್ತು ನಾನು ರಸ್ತೆಯ ತುದಿಗೆ ತಲುಪಿದ್ದೇನೆ ಎಂದು ನನ್ನಲ್ಲಿ ತಿಳಿವಳಿಕೆ ಮೂಡಿಸಿವೆ. ಇದೇ ವೇಳೆ ಸಂಸ್ಥೆಯಲ್ಲಿ ನನ್ನ ಆತ್ಮಗೌರವ ಹಾಗೂ ಘನತೆಯನ್ನು ಬಲಿಕೊಟ್ಟು ಹೆಚ್ಚು ಸಮಯ ಕಳೆದಿದ್ದೇನೆ ಎಂದು ನನಗೂ ಅನಿಸಿದೆ.
ಅಗೌರವ ಉಂಟುಮಾಡಿದೆ
ನನಗೆ ಅತೀವ ದುಃಖ ತಂದಿರುವುದು ಏನೆಂದರೆ ಪಕ್ಷದಿಂದ ಮಹಿಳೆಯರ ಸುರಕ್ಷತೆ, ಘನತೆ, ಸಬಲೀಕರಣ ಬಗ್ಗೆ ಪ್ರಚಾರ ನೀಡಿಯೂ ಮತ್ತು ಅದರ ಬಗ್ಗೆ ನೀವು ಕರೆ ನೀಡಿದ್ದರೂ ಪಕ್ಷದಲ್ಲಿ ಕೆಲವು ಸದಸ್ಯರು ಅದನ್ನು ಪಾಲಿಸುತ್ತಿಲ್ಲ ಎಂಬುದು. ನಾನು ಅಧಿಕೃತ ಕರ್ತವ್ಯದಲ್ಲಿ ಇರುವ ಸಂದರ್ಭದಲ್ಲಿ ಪಕ್ಷದ ಕೆಲವು ಮುಖಂಡರು ನನ್ನ ಜತೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿತ್ತು. ಇದನ್ನು ಚುನಾವಣೆಗಾಗಿ ಅವರ ನೆರವು ಅಗತ್ಯವಿರುವುದರಿಂದ ಪಕ್ಷವು ನಿರ್ಲಕ್ಷಿಸಿದೆ. ಈ ಘಟನೆ ನನಗೆ ಅಗೌರವ ಉಂಟುಮಾಡಿದ್ದು, ಪಕ್ಷದಿಂದ ಹೊರಗೆ ಹೋಗುವಂತೆ ಮಾಡಿದೆ.
ನಿಮ್ಮ ಬಗ್ಗೆ ಅಪಾರ ಗೌರವವಿದ್ದು ಒಳಿತಾಗಲಿ ಎಂದು ಹಾರೈಸುತ್ತೇನೆ. ನನಗೆ ಮಾರ್ಗದರ್ಶನ ನೀಡಿದ, ಪ್ರೋತ್ಸಾಹ ನೀಡಿದ ಹಿರಿಯ ಮುಖಂಡರಿಗೆ ಧನ್ಯವಾದ. ನನ್ನನ್ನು ಪ್ರೀತಿಸಿದ, ನನ್ನ ಜತೆ ನಿಂತ, ಹುರುಪು ತುಂಬಿದ ಮತ್ತು ಉತ್ತೇಜನ ನೀಡಿದ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಕೃತಜ್ಞತೆಗಳು ಎಂದು ಪ್ರಿಯಾಂಕಾ ಬರೆದಿದ್ದಾರೆ.
ಶಿವಸೇನಾ ಸೇರ್ಪಡೆ
ಕಾಂಗ್ರೆಸ್ನ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿ ಹೊರಬಂದಿರುವ ಪ್ರಿಯಾಂಕಾ ಚತುರ್ವೇದಿ ಅವರು ಶಿವಸೇನಾ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. ರಾಜೀನಾಮೆ ಸಲ್ಲಿಸುವುದಕ್ಕೂ ಮುನ್ನ ಪ್ರಿಯಾಂಕಾ, ತಮ್ಮ ಟ್ವಿಟ್ಟರ್ ಖಾತೆಯಲ್ಲಿದ್ದ 'ಎಐಸಿಸಿ ರಾಷ್ಟ್ರೀಯ ವಕ್ತಾರೆ' ಎಂಬ ಹುದ್ದೆಯ ಹೆಸರನ್ನು ತೆಗೆದುಹಾಕಿದ್ದರು.