ಆಂತರಿಕ್ಷ್ ದೇವಾಸ್ ಹಗರಣ: ಕಾಂಗ್ರೆಸ್ ಉತ್ತರಿಸಬೇಕಿದೆ ಎಂದ ನಿರ್ಮಲಾ
ನವದೆಹಲಿ, ಜನವರಿ 18: ಆಂತರಿಕ್ಷ್ 2005ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ದೇವಾಸ್ ಜತೆ ಒಪ್ಪಂದ ಮಾಡಿಕೊಂಡಿತ್ತು, ಅದೊಂದು ವಂಚನೆಯ ಒಪ್ಪಂಂದವಾಗಿತ್ತು, 2011ರಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದೇವಾಸ್ ವಂಚನೆ ಹಗರಣದಲ್ಲಿ ಕಾಂಗ್ರೆಸ್ ಮಾಸ್ಟರ್ ಗೇಮ್ ಪ್ಲೇಯರ್ ಆಗಿದ್ದು, ಕಾಂಗ್ರೆಸ್ ಆ ಸಮಯದಲ್ಲಿ ಸಚಿವ ಸಂಪುಟವನ್ನು ಹೇಗೆ ಕತ್ತಲಿನಲ್ಲಿಟ್ಟಿತ್ತು ಎಂಬುದನ್ನು ಕಾಂಗ್ರೆಸ್ ಹೇಳಬೇಕಿದೆ, ಆದರೆ ಮಾತನಾಡಲು ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದಿದ್ದಾರೆ.
ಬೆಂಗಳೂರು ಮೂಲದ ನವೋದ್ಯಮ ದೇವಾಸ್ ಮಲ್ಟಿಮೀಡಿಯಾವನ್ನು ಮುಚ್ಚುವಂತೆ ಕೋರಿ ಕೇಂದ್ರ ಸರ್ಕಾರದ ಸ್ವಾಮ್ಯತ್ವ ಹೊಂದಿರುವ ಆಂತರಿಕ್ಷ್ ಕಾರ್ಪೊರೇಷನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್ಸಿಎಲ್ಎಟಿ) ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
ಎನ್ಸಿಎಲ್ಎಟಿ ತೀರ್ಪಿನ ವಿರುದ್ಧ ದೇವಾಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠ ವಜಾಗೊಳಿಸಿತು. ಆ ಮೂಲಕ ದೇವಾಸ್ ನವೋದ್ಯಮವನ್ನು ಬರಖಾಸ್ತುಗೊಳಿಸುವ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್ಸಿಎಲ್ಟಿ) ಬೆಂಗಳೂರು ಪೀಠದ ಈ ಹಿಂದಿನ ಆದೇಶವನ್ನು ಅದು ಎತ್ತಿಹಿಡಿಯಿತು.
ದೇವಾಸ್ ಪರವಾಗಿ ಐಸಿಸಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿದ್ದ ತೀರ್ಪಿನ ಲಾಭವನ್ನು ತಾನು ಪಡೆಯದಂತೆ ಮಾಡುವುದು ದೇವಾಸ್ ಅನ್ನು ಆಂತರಿಕ್ಷ್ ಮುಚ್ಚಲು ಕೋರಿರುವುದರ ಹಿಂದಿನ ಉದ್ದೇಶ ಎಂಬ ದೇವಾಸ್ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು. ಇಂತಹ ಯತ್ನದಿಂದ ಕೇಂದ್ರ ಸರ್ಕಾರದ ಸಂಪೂರ್ಣ ಒಡೆತನವುಳ್ಳ ಆಂತರಿಕ್ಷ್ ಬಗ್ಗೆ ಅಂತರರಾಷ್ಟ್ರೀಯ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ದೇವಾಸ್ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಮತ್ತು ಅರವಿಂದ ಪಿ ದಾತಾರ್ ವಾದ ಮಂಡಿಸಿದ್ದರು. ಆಂತರಿಕ್ಷ್ ಸಂಸ್ಥೆಯನ್ನು ನ್ಯಾಯವಾದಿಗಳ ಕಚೇರಿ ಖೈತಾನ್ ಅಂಡ್ ಕೊ ಪ್ರತಿನಿಧಿಸಿತ್ತು. ಆಂತರಿಕ್ಷ್ ಸಂಸ್ಥೆಯನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್ ವೆಂಕಟರಾಮನ್ ಮತ್ತು ನ್ಯಾಯವಾದಿಗಳ ಕಚೇರಿ ಖೈತಾನ್ ಅಂಡ್ ಕೊ ಪ್ರತಿನಿಧಿಸಿತ್ತು.