ಗೋವಾದಲ್ಲಿ ಕಾಂಗ್ರೆಸ್ ನಿರ್ನಾಮಕ್ಕೆ ಮುಂದಾದ ಬಿಜೆಪಿ
ಪಣಜಿ, ಅಕ್ಟೋಬರ್ 19: ಗೋವಾದಲ್ಲಿ ಕಾಂಗ್ರೆಸ್ ಅವನತಿಯ ಹಾದಿ ಹಿಡಿದಿದೆ. ಇತ್ತೀಚೆಗೆ ಕಾಂಗ್ರೆಸ್ಸಿನ ಶಾಸಕರಿಬ್ಬರು ಬಿಜೆಪಿ ಸೇರಿದ್ದರು. ಈಗ ಮತ್ತೊಮ್ಮೆ ಮೂವರು ನಾಯಕರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಸುದ್ದಿ ಬಂದಿದೆ.
ಸಿಎಂ ಮನೋಹರ್ ಪರಿಕ್ಕರ್ ನೇತೃತ್ವದ ಸರ್ಕಾರದ ಆಡಳಿತ ಯಂತ್ರ ಕುಸಿದಿದೆ ಎಂದು ಆರೋಪಿಸಿ, ಸರ್ಕಾರ ರಚನೆಗೆ ವಿಫಲ ಯತ್ನ ನಡೆಸಿದ್ದ ಕಾಂಗ್ರೆಸ್ಸಿಗೆ ಭಾರಿ ಮುಖಭಂಗ ಅನುಭವಿಸಿತ್ತು.
ಕಾಂಗ್ರೆಸ್ಸಿನಿಂದ ಇಬ್ಬರು ಶಾಸಕರನ್ನು ಬಿಜೆಪಿಗೆ ಸೇರುವಂತೆ ಮಾಡಿದ ಸಚಿವ ವಿಶ್ವಜಿತ್ ರಾಣೆ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗುವ ಸಾಧ್ಯತೆಯಿದೆ. ಹೀಗಾಗಿ, ವಿಶ್ವಜಿತ್ ರಾಣೆ ಅವರ ಬೆಂಬಲಿಗರೆಲ್ಲರೂ ಬಿಜೆಪಿ ಸೇರುವ ಸಾಧ್ಯತೆ ಕಂಡು ಬಂದಿದೆ.
ಸೋಮವಾರದಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ಶಾಸಕರಾದ ದಯಾನಂದ್ ಸಾಪ್ಟೆ ಮತ್ತು ಸುಭಾಶ್ ಶಿರೋಡ್ಕರ್ ಎಂಬ ಇಬ್ಬರು ಕಾಂಗ್ರೆಸ್ ಶಾಸಕರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಇಬ್ಬರು ಬಿಜೆಪಿ ಸೇರಿದ್ದಾರೆ.
ಏಮ್ಸ್ ನಿಂದ ಡಿಸ್ಚಾರ್ಜ್ ಆದ ಬಳಿಕ ಡೊನಾ ಪಾಲದ ನಿವಾಸದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ದಯಾನಂದ ಸೊಪ್ಟೆ ಹಾಗೂ ಸುಭಾಷ್
ದಯಾನಂದ ಸೊಪ್ಟೆ ಗೋವಾ ಕಾಂಗ್ರೆಸ್ಸಿನ ಪ್ರಮುಖ ನಾಯಕರಲ್ಲಿ ಒಬ್ಬರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಗಿನ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಅವರನ್ನು ದಯಾನಂದ್ ಸೋಲಿಸಿದ್ದರು. ಗೋವಾದ ಮಂಡ್ರೆಮ್ ಕ್ಷೇತ್ರವನ್ನು ಇವರು ಪ್ರತಿನಿಧಿಸುತ್ತಿದ್ದರು.ಗೋವಾದ ಶಿರೋಡಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಸುಭಾಶ್ ಸಹ ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತರಾಗಿದ್ದವರು.
ಗೋವಾ ವಿಧಾನಸಭೆ ಸಂಖ್ಯಾಬಲ
ಗೋವಾ ವಿಧಾನಸಭೆಯಲ್ಲಿ 16 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್, ತನ್ನ ಇಬ್ಬರು ಶಾಸಕರನ್ನು ಕಳೆದುಕೊಳ್ಳುವ ಮೂಲಕ 14ಕ್ಕೆ ಕುಸಿದಿದೆ. ಈ ಮೂಲಕ ಸರ್ಕಾರ ರಚಿಸುವ ಅವಕಾಶದಿಂದ ಬಹುದೂರ ಉಳಿದಿದೆ. 40 ಮಂದಿ ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ 2 ಶಾಸಕರನ್ನು ಸೇರಿಸಿಕೊಂಡು ಬಿಜೆಪಿ 16 ಮಂದಿ ಶಾಸಕರನ್ನು ಹೊಂದಿದೆ. ಗೋವಾ ಫಾರ್ವರ್ಡ್ ಪಕ್ಷ ಹಾಗೂ ಎಂಜಿಪಿಯ ತಲಾ ಮೂವರು ಹಾಗೂ 3 ಪಕ್ಷೇತರರು ಬೆಂಬಲ ಸೂಚಿಸಿದ್ದಾರೆ. ಹೀಗಾಗಿ 25 ಸಂಖ್ಯಾ ಬಲ ಪಡೆದು ಮನೋಹರ್ ಪರಿಕ್ಕಾರ್ ಅವರು ಸರ್ಕಾರ ಸುಭದ್ರವಾಗಿದೆ.
ನಾಯಕತ್ವದ ಬದಲಾವಣೆ ಕೂಗು
ಮನೋಹರ್ ಪರಿಕ್ಕಾರ್ ಅವರು ವಿದೇಶಕ್ಕೆ ಚಿಕಿತ್ಸೆಗಾಗಿ ತೆರಳಿದ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಗೋವಾದಲ್ಲಿ ನಾಯಕತ್ವ ಬದಲಿ ಮಾಡಲು ಚರ್ಚೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಸ್ಥಾನ ತೊರೆಯಲು ಮನೋಹರ್ ಪರಿಕ್ಕರ್ ಮುಂದಾಗಿ, ತಮ್ಮ ಇಚ್ಛೆಯನ್ನು ಹೈಕಮಾಂಡ್ ಗೆ ತಿಳಿಸಿದ್ದರು. ಆದರೆ, ಅವರ ಮನವಿಯನ್ನು ಪುರಸ್ಕರಿಸಿಲ್ಲ. ಬದಲಿಗೆ ಗೋವಾ ಸಿಎಂ ಸ್ಥಾನ ಖಾಲಿಯಿಲ್ಲ ಎಂದು ಹೇಳಿ, ಮನೋಹರ ಪರಿಕ್ಕರ್ ಅವರೇ ಗೋವಾ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸ್ವತಃ ಅಮಿತ್ ಶಾ ಸ್ಪಷ್ಟಪಡಿಸಿದ್ದರು.ಈಗಲೂ ಸಿಎಂ ಸ್ಥಾನದಿಂದ ಇಳಿಯುವುದು ಬಿಡುವುದು ಮನೋಹರ್ ಅವರ ನಿರ್ಧಾರಕ್ಕೆ ಬಿಡಲಾಗಿದೆ.
ಮನೋಹರ್ ಸಿಎಂ ಬದಲಾವಣೆ ಬಗ್ಗೆ ಚರ್ಚೆ
ಮನೋಹರ್ ಬಗ್ಗೆ ಬಿಜೆಪಿಗೆ ಭಯ: ಮನೋಹರ್ ಪರಿಕ್ಕಾರ್ ಅವರನ್ನು ಗೋವಾ ಸಿಎಂ ಸ್ಥಾನದಿಂದ ಕೆಳಗಿಸಿದರೆ, ಬಿಜೆಪಿಗೆ ಇಲ್ಲಿನ ಸರ್ಕಾರ ಕುಸಿಯುವ ಭೀತಿ ಇದೆ. ಅಲ್ಲದೆ, ಆನಂತರ ಮನೋಹರ್ ಅವರು ರಫೆಲ್ ಒಪ್ಪಂದ ಬಗ್ಗೆ ತಮಗೆ ಗೊತ್ತಿರುವ ಮಾಹಿತಿಯನ್ನು ಹೊರ ಹಾಕಬಹುದು. ಇದೆಲ್ಲವೂ ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ. ಹೀಗಾಗಿ, ಅವರೇ ಕೇಳಿಕೊಂಡರೂ ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ಗೋವಾ ಕಾಂಗ್ರೆಸ್ನ ಹಿರಿಯ ನಾಯಕ, ನಾಲ್ಕು ಬಾರಿ ಗೋವಾದ ಸಿಎಂ ಆಗಿದ್ದ ಪ್ರತಾಪ್ ಸಿಂಗ್ರಾವ್ ರಾಣೆ ಅವರ ಪುತ್ರ ವಿಶ್ವಜಿತ್ ರಾಣೆ. ಮನೋಹರ್ ಅವರ ಸಚಿವ ಸಂಪುಟದಲ್ಲಿ ಮಹಿಳಾ ಕಲ್ಯಾಣ ಮತ್ತು ಆರೋಗ್ಯ ಸಚಿವರಾಗಿದ್ದಾರೆ.