ಪ್ರಧಾನಿ ನರೇಂದ್ರ ಮೋದಿ ಸಂದರ್ಶನದ ಉತ್ತರಗಳಿಗೆ ಪ್ರಶ್ನೆಗಳ ಸುರಿಮಳೆ
ಪ್ರಧಾನಿ ನರೇಂದ್ರ ಮೋದಿ ಅವರು ಎಎನ್ ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವನ್ನು ಕಾಂಗ್ರೆಸ್ ವಿಡಂಬನೆ ಎಂದು ವ್ಯಂಗ್ಯವಾಡಿದೆ. ಮತ್ತು ಈ ಹತ್ತು ಪ್ರಶ್ನೆಗಳಿಗೆ ಪ್ರಧಾನಿಗಳು ಉತ್ತರ ನೀಡಲಿ ಎಂದು ಸವಾಲು ಕೂಡ ಹಾಕಿದೆ. ವಾಸ್ತವಕ್ಕೆ ದೂರವಾದ, ಸುಳ್ಳುಗಳ ಕಂತೆ, ಒಟ್ಟಾರೆ ವಿಡಂಬನೆಯಂತೆ. ಇದನ್ನೇ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇದು ಮೋದಿಜೀ ಸ್ವಗತ ಎಂದು ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಕಾಂಗ್ರೆಸ್ ನ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೇವಾಲಾ ಮಾಧ್ಯಮಗಳ ಜತೆ ಮಾತನಾಡಿ, ಪ್ರಧಾನಿ ಮೋದಿ ಅವರ ಸಂದರ್ಶನದ ಒಟ್ಟು ತಿರುಳು ನಾನು, ನನಗೆ, ನನ್ನದು ಮತ್ತು ನನಗಾಗಿ (ಐ, ಮೀ, ಮೈನ್, ಮೈ ಸೆಲ್ಫ್) ಎಂದು ಲೇವಡಿ ಮಾಡಿದ್ದಾರೆ.
ನರೇಂದ್ರ ಮೋದಿ ಸಂದರ್ಶನ: ರಾಮ ಮಂದಿರಕ್ಕೆ ಸುಗ್ರೀವಾಜ್ಞೆ ಇಲ್ಲ
ಪ್ರಧಾನಿ ಮೋದಿ ತಾವು ನೀಡಿದ್ದ ಹತ್ತು ಭರವಸೆಗಳ ಪ್ರಗತಿ ಬಗ್ಗೆ ವಿವರವಾಗಿ ಹೇಳಬೇಕಿತ್ತು. ಅದರಲ್ಲಿ ಪ್ರತಿಯೊಬ್ಬ ಭಾರತೀಯರ ಖಾತೆಗೆ ಹದಿನೈದು ಲಕ್ಷ ರುಪಾಯಿ ಜಮೆ ಮಾಡುವುದು ಹಾಗೂ ವಿದೇಶಗಳಲ್ಲಿ ಭಾರತಿಯರು ಇರಿಸಿರುವ ಕಪ್ಪು ಹಣ ವಾಪಸ್ ತರುವುದರ ಪ್ರಸ್ತಾವ ಇರಬೇಕಿತ್ತು. ಆದರೆ ಇದು ಮೋದಿ ಅವರ ಸ್ವಗತ ಮಾತ್ರ ಎಂದು ಸುರ್ಜೇವಾಲಾ ಹೇಳಿದ್ದಾರೆ. ಇತರ ನಾಯಕರು ಏನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.
ಕೇಂದ್ರದ ಮಾಜಿ ಕಾನೂನು ಸಚಿವ ಸಲ್ಮಾನ್ ಖುರ್ಷಿದ್
ಪ್ರಧಾನಿ ಮೋದಿ ಅವರಿಗೆ ಜಾಮೀನಿನ ಮೇಲೆ ಹೊರಗಿರುವುದು ಅನ್ನೋದರ ಅರ್ಥವೇ ಗೊತ್ತಿಲ್ಲ. ಅವರದೇ ಪಕ್ಷದಲ್ಲಿ ಕೆಲವರ ಮೇಲೆ ಕೊಲೆ ಆರೋಪ ಇದ್ದು, ಅಂಥವರು ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಬಗ್ಗೆ ಬೊಟ್ಟು ಮಾಡುವುದಿಲ್ಲ. ಇನ್ನು ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ನಾವು ಭಾರತದ ಸುಪ್ರೀಂ ಕೋರ್ಟ್ ಅನ್ನು ನಿಯಂತ್ರಿಸುವುದಿಲ್ಲ. ಅದು ಯಾವ ಆಧಾರದಲ್ಲಿ ಅವರು (ಪ್ರಧಾನಿ) ರಾಮಮಂದಿರ ಪ್ರಕರಣದಲ್ಲಿ ಕಾಂಗ್ರೆಸ್ ಅಡಚಣೆ ಉಂಟು ಮಾಡುತ್ತಿದೆ ಎನ್ನುತ್ತಿದ್ದಾರೆ? ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯಲಿ. ಇಲ್ಲದಿದ್ದರೆ ಕೋರ್ಟ್ ತೀರ್ಮಾನ ಕೈಗೊಳ್ಳಲಿ ಎಂಬುದು ಆರಂಭದಿಂದಲೂ ನಮ್ಮ ನಿಲುವು.
ಸಮಾಜವಾದಿ ಪಕ್ಷದ ವಕ್ತಾರರಾದ ಜೂಹಿ ಸಿಂಗ್
ಭಾರತ ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳ ಬಗ್ಗೆ ಪ್ರಧಾನಿ ಮಾತನಾಡಿಲ್ಲ. ನಿರುದ್ಯೋಗ ಸಮಸ್ಯೆ, ಮಹಿಳೆಯರ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅವರು ಪ್ರತಿನಿಧಿಸುವ ಸಂಸತ್ ಕ್ಷೇತ್ರ ಇರುವ ರಾಜ್ಯದಲ್ಲೇ ಕಾನೂನು ಸುವ್ಯವಸ್ಥೆ ಕುಸಿದಿದೆ. ರಾಮಮಂದಿರ ವಿಚಾರವಾಗಿ ಅವರು ಹಾಗೂ ಬಿಜೆಪಿ ನಾಯಕರು ಯಾವುದೇ ಹೇಳಿಕೆ ನೀಡಿಲ್ಲ. ನಿಜವಾದ ಪ್ರಶ್ನೆಗೆ ಉತ್ತರವೇ ಹೇಳದೆ ಮೋದಿ ಜಾರಿಕೊಂಡಿದ್ದಾರೆ.
ಟಿಎಂಸಿ ಹಿರಿಯ ಮುಖಂಡ ಸೋವನ್ ದೇವ್ ಚಟ್ಟೋಪಾಧ್ಯಾಯ
ಅಪನಗದೀಕರಣದ ಜಾರಿ ವೇಳೆ ಅದೆಷ್ಟು ಜನ ಪ್ರಾಣ ಕಳೆದುಕೊಂಡರು ಅನ್ನೋದನ್ನು ಪ್ರಧಾನಿಗಳು ಮರೆತಿರಬಹುದು. ಮೋದಿ ಹಾಗೂ ಬಿಜೆಪಿ ಧರ್ಮದ ಆಧಾರದಲ್ಲಿ ದೇಶವನ್ನು ಇಬ್ಭಾಗ ಮಾಡುವ ಪ್ರಯತ್ನದಲ್ಲಿರುವುದು ಗೊತ್ತಾಗುತ್ತದೆ. ನಾವು ರಾಮನನ್ನು ಪೂಜಿಸುತ್ತೀವಿ, ಆರಾಧಿಸುತ್ತೀವಿ. ಆದರೆ ಚುನಾವಣೆಗೆ ಗೆಲ್ಲುವ ಉಪಕರಣವಾಗಿ ಬಳಸಲ್ಲ. ರಾಮ ಮಂದಿರ ಕಾರ್ಡ್ ವಿಫಲವಾಗಿದೆ. ಅದಕ್ಕೆ ಪ್ರಧಾನಿ ಮೋದಿ ಹೊಸ ಕಾರ್ಡ್ ಹುಡುಕಿಕೊಂಡಿದ್ದಾರೆ ಎಂದಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು
ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ, ಆದಾಯ ತೆರಿಗೆ ಇಲಾಖೆ (ಐಟಿ), ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು ಸಂಪೂರ್ಣ ಹಾಳುಗೆಡವಲಾಗಿದೆ. ಇವುಗಳಲ್ಲಿ ಪ್ರಮುಖವಾದವು ಭಾರತದ ಮುಖ್ಯ ತನಿಖಾ ಸಂಸ್ಥೆಗಳು. ಸರಕಾರವು ಈ ಸಂಸ್ಥೆಗಳನ್ನು ವಿರೋಧ ಪಕ್ಷಗಳ ವಿರುದ್ಧ ದಾಳಿ ನಡೆಸಲು ಬಳಸುತ್ತಿದೆ. ಯುಪಿಎ ಆಡಳಿತಾವಧಿ ಕೆಟ್ಟದಾಗಿತ್ತು ಎಂದಿದ್ದೀರಿ. ಈಗ ನೀವು ಹೇಳಿ, ದೇಶದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ?