ನನ್ನ ಬದುಕು ಹಾಳು ಮಾಡಿದ್ದು ಕಾಂಗ್ರೆಸ್: ಮುಲಾಯಂ ಸಿಂಗ್
ಕಾಂಗ್ರೆಸ್ ನಿಂದ ನನ್ನ ಬದುಕು ಹಾಳಾಯಿತು. ಅಖಿಲೇಶ್ ನನ್ನು ಮುಖ್ಯಮಂತ್ರಿ ಮಾಡಿದ ನನ್ನಿಂದ ತಪ್ಪಾಯಿತು ಎಂದು ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮಾಧ್ಯಮದವರ ಎದುರು ಅಲವತ್ತುಕೊಂಡಿದ್ದಾರೆ
ಲಖನೌ, ಮೇ 8: ಕಾಂಗ್ರೆಸ್ ಜತೆಗೆ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿದ್ದಕ್ಕೆ ಈಗ ಆಕ್ರೋಶ ವ್ಯಕ್ತಪಡಿಸಿರುವ ಮುಲಾಯಂ ಸಿಂಗ್ ಯಾದವ್, ನನ್ನ ಮಗ ಅಖಿಲೇಶ್ ನನ್ನು ಮುಖ್ಯಮಂತ್ರಿ ಮಾಡಿದ್ದು ದೊಡ್ಡ ತಪ್ಪು ಎಂದಿದ್ದಾರೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡಿದ್ದೇ ಪಕ್ಷದ ಇಂದಿನ ದುಃಸ್ಥಿತಿಗೆ ಕಾರಣ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಜತೆಗೆ ಮೈತ್ರಿ ಬೇಡ ಎಂದು ಅಖಿಲೇಶ್ ಗೆ ಹೇಳಿದೆ. ಆತ ನನ್ನ ಮಾತು ಕೇಳಲಿಲ್ಲ. ಸೋಲಿಗೆ ಪಕ್ಷವೇ ಕಾರಣ ಹೊರತು ಜನರಲ್ಲ ಎಂದು ಮುಲಾಯಂ ಮಾಧ್ಯಮದವರಿಗೆ ಹೇಳಿದ್ದಾರೆ. ಕಾಂಗ್ರೆಸ್ ನನ್ನ ಜೀವನವನ್ನೇ ಹಾಳು ಮಾಡಿದೆ. ಕಾಂಗ್ರೆಸ್ ನನ್ನ ವಿರುದ್ಧ ದೂರುಗಳಾನ್ನು ದಾಖಲಿಸಿತು ಮತ್ತು ಅದೇ ಪಕ್ಷದ ಜತೆಗೆ ಅಖಿಲೇಶ್ ಮೈತ್ರಿ ಮಾಡಿಕೊಂಡರು ಎಂದು ಅವರು ಹೇಳಿದ್ದಾರೆ.[ಮಾಯಾವತಿ, ಅಖಿಲೇಶ್, ಮುಲಾಯಂ ಭದ್ರತೆ ಹಿಂಪಡೆದ ಯೋಗಿ ಸರ್ಕಾರ]
ಅದು ನನ್ನ ತಪ್ಪು. ಅಖಿಲೇಶ್ ನನ್ನು ನಾನೇ ಮುಖ್ಯಮಂತ್ರಿ ಮಾಡಿದೆ. ಇನ್ನೂರಾ ಇಪ್ಪತ್ನಾಲ್ಕು ಸ್ಥಾನದಿಂದ ನಲವತ್ತೇಳು ಸ್ಥಾನಕ್ಕೆ ಕುಸಿತ ಕಾಣುವಂತಾಯಿತು. ಜೌನ್ ಪುರ್ ಕ್ಕೆ ಶಿವಪಾಲ್ ಯಾದವ್ ಗೆ ಬೆಂಬಲಿಸಿ ತೆರಳಿದಾಗ ನಾನು ಮುಖ್ಯಮಂತ್ರಿ ಆಗಿರಬೇಕಿತ್ತು ಎಂದು ಸಮಾಜವಾದಿ ಪಕ್ಷದ ಸ್ಥಾಪಕರೂ ಆದ ಮುಲಾಯಂ ಸಿಂಗ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ.[ಮುಲಾಯಂ ಬಂಗ್ಲೆ ಮೇಲೆ ವಿದ್ಯುತ್ ಇಲಾಖೆ ದಾಳಿ]