ಮುಂದಿನ ಪ್ರಧಾನಿ ರಾಹುಲ್? ಸಾಗಿದೆ ಭರದಿಂದ ಸಿದ್ಧತೆ!
Recommended Video
ಭಾರತದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ? ರಾಜಕೀಯ ಸ್ಥಿತ್ಯಂತರಗಳು ಸಂಭವಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಈ ಪ್ರಶ್ನೆ ಅಕಾಲಿಕವಾಗಿದ್ದರೂ, ಇದರ ಬಗ್ಗೆ ಭಾರೀ ಜಿಜ್ಞಾಸೆ ನಡೆಯುತ್ತಿದೆ ಮತ್ತು ಊಹಾತೀತವಾದ ರಾಜಕೀಯ ಚಟುವಟಿಕೆಗಳು ತೆರೆಮರೆಯಲ್ಲಿ ನಡೆಯುತ್ತಿವೆ.
ಇದೇ ಪ್ರಶ್ನೆಯನ್ನು ನಿಷ್ಠಾವಂತ ಕಾಂಗ್ರೆಸ್ ನಾಯಕರ ಮುಂದಿಟ್ಟರೆ, ಆತ್ಮವಿಶ್ವಾಸದಿಂದ ಕೇಳಿಬರುವ ಹೆಸರೆಂದರೆ, ಅದು ರಾಹುಲ್ ಗಾಂಧಿ. ಬೇರೆ ಆಯ್ಕೆ ಇಲ್ಲವೇ ಇಲ್ಲ! 2019ರ ಏಪ್ರಿಲ್ ಅಥವಾ ಮೇನಲ್ಲಿ ಜರುಗಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಾತ್ರವಲ್ಲ, ಯುಪಿಎಯನ್ನು ಬೆಂಬಲಿಸುವ ಇತರ ಎಲ್ಲ ಪಕ್ಷಗಳ ಆಯ್ಕೆ ರಾಹುಲ್ ಆದರೂ ಅಚ್ಚರಿಯಿಲ್ಲ.
ನರೇಂದ್ರ ಮೋದಿಗೆ ರಾಹುಲ್ ಗಾಂಧಿ ಏಕೈಕ ಪರ್ಯಾಯ: ಕಾಂಗ್ರೆಸ್
2014ರ ಲೋಕಸಭೆ ಚುನಾವಣೆಗೂ, ಇಂದಿನ ರಾಜಕೀಯ ಬೆಳವಣಿಗೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ರಾಹುಲ್ ಗಾಂಧಿಯವರಲ್ಲಿ ಅಜಗಜಾಂತರ ಬದಲಾವಣೆಗಳಾಗಿವೆ. ಅವರ ಮಾತನಲ್ಲಿ, ನಡವಳಿಕೆಯಲ್ಲಿ, ಜನರನ್ನು ಸಂಪರ್ಕಿಸುತ್ತಿರುವ ರೀತಿಯಲ್ಲಿ, ಸಾಮಾಜಿಕ ತಾಣಗಳಲ್ಲಿ ವ್ಯವಹರಿಸುತ್ತಿರುವ ಬಗೆಯಲ್ಲಿ ಒಬ್ಬ 'ಪ್ರಬುದ್ಧ' ರಾಹುಲ್ ಗಾಂಧಿ ಕಂಡುಬಂದಿದ್ದಾರೆ.
ಈ ಯಶಸ್ಸಿನ ಹಿಂದೆ ಯುವ ನಾಯಕರ, ಸೋಷಿಯಲ್ ಮೀಡಿಯಾದ, ಹಿತೈಷಿಗಳ ಹಿಂಡೇ ಇದ್ದರೂ, 2018ರಲ್ಲಿ ಕರ್ನಾಟಕ, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸಗಢ ಸೇರಿದಂತೆ ಎಂಟು ರಾಜ್ಯಗಳ ವಿಧಾನಸಭೆ ಚುನಾವಣೆಯ 'ಅಗ್ನಿ ಪರೀಕ್ಷೆ'ಯಲ್ಲಿ ಅವರು ಗೆದ್ದು ಬರಬೇಕಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಅವರು ತೋರಲಿರುವ ಸಾಮರ್ಥ್ಯ ಲೋಕಸಭೆ ಚುನಾವಣೆಗೂ ದಿಕ್ಸೂಚಿಯಾಗಲಿದೆ.
ರಾಹುಲ್ ಗಾಂಧಿಯವರನ್ನು ಮುಂದಿನ ಪ್ರಧಾನಿ ಮಾಡಲೇಬೇಕೆಂದು ಭಾರೀ ಸ್ಟ್ರಾಟಜಿಗಳು ನಡೆಯುತ್ತಿವೆ, ಯಾರ ಜೊತೆ ಕೈಜೋಡಿಸಿದರೆ ಗೆಲ್ಲಲು ಸಾಧ್ಯ ಎಂಬ ಬಗ್ಗೆ ಲೆಕ್ಕಾಚಾರಗಳು ಶುರುವಾಗಿವೆ, ಅವರ ಪ್ರವಾಸದ ನೀಲನಕ್ಷೆ ಬರೆಯಲಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಸಮಸ್ತ ಜನಮಾನಸದಲ್ಲಿ ರಾಹುಲ್ ಗಾಂಧಿಯವರ ನಾಯಕತ್ವದ ಬಗ್ಗೆ ಬೀಜವನ್ನು ಬಿತ್ತಲಾಗುತ್ತಿದೆ.
ಯುವಪಡೆಯ ಸೋಷಿಯಲ್ ಮೀಡಿಯಾ ತಂಡ
ಕಳೆದ ಲೋಕಸಭೆ ಚುನಾವಣೆಯೆಂಬ ಯುದ್ಧವನ್ನು ಸೋಷಿಯಲ್ ಮೀಡಿಯಾ ಮೂಲಕವೇ ನರೇಂದ್ರ ಮೋದಿಯವರು ಗೆದ್ದಿರುವುದನ್ನು ಯಾರೂ ಅಲ್ಲಗಳೆಯುವುದಿಲ್ಲ. ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಯುವಪಡೆಯಿರುವ ಒಂದು ಸಮರ್ಥ ಸೋಷಿಯಲ್ ಮೀಡಿಯಾ ತಂಡವನ್ನು ಕಟ್ಟಿದೆ. ಇದಕ್ಕೆ ಮಾಜಿ ಸಂಸದೆ ದಿವ್ಯಾ ಸ್ಪಂದನಾ ಅವರೇ ಒಡತಿ.
ಟಾಪ್ vs ಪಾಟ್ : ಬಿಜೆಪಿ ಏಟಿಗೆ ರಮ್ಯಾ ಎದಿರೇಟು!
ಭಾರತದ ಮುಂದಿನ ಪ್ರಧಾನಿ ರಾಹುಲ್ ಗಾಂಧಿ
ಇದರ ಮುಂದಿನ ಭಾಗವಾಗಿ ಫೇಸ್ ಬುಕ್ಕಿನಲ್ಲಿ 'ಭಾರತದ ಮುಂದಿನ ಪ್ರಧಾನಿ ರಾಹುಲ್ ಗಾಂಧಿ', 'ನೆಕ್ಸ್ಟ್ ಪಿಎಂ ಆರ್ಜಿ' ಮುಂತಾದ ಪುಟಗಳನ್ನು ತೆರೆದಿದ್ದು, ನೆಟ್ಟಿಗರ ಹೃದಯಕ್ಕೆ ಲಗ್ಗೆಯಿಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ, ಮತ ಪರಿವರ್ತನೆಗೆ ನಾಂದಿ ಹಾಡುತ್ತದೆ, ಕಾಂಗ್ರೆಸ್ ಜಯಭೇರಿಯಲ್ಲಿ ಪಾತ್ರವಹಿಸುತ್ತದೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.
ಎಫ್ಬಿ ಪುಟಕ್ಕೆ ಜೀವ ತುಂಬಲಾಗುತ್ತಿದೆ
ರಾಹುಲ್ ಗಾಂಧಿಯವರನ್ನು ಅತಿಯಾಗಿ ಪ್ರೀತಿಸುವವರು, ಕಾಂಗ್ರೆಸ್ ಮೇಲೆ ಅಭಿಮಾನ ಇಟ್ಟುಕೊಂಡಿರುವವರು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲೇಬಾರದು ಎಂದು ಜಪಿಸುತ್ತಿರುವವರು, ಕಾಂಗ್ರೆಸ್ ಬಗ್ಗೆ ಅನುಕಂಪ ಹೊಂದಿರುವವರು, ರಾಹುಲ್ ಗಾಂಧಿಯವರನ್ನು ಒಮ್ಮೆಯಾದರೂ ಪ್ರಧಾನಿಯಾಗಿ ನೋಡಬೇಕೆಂಬ ಆಸೆ ಇಟ್ಟುಕೊಂಡಿರುವವರು ಈ ಪುಟಗಳಿಗೆ ಜೀವ ತುಂಬುತ್ತಿದ್ದಾರೆ.
ಕರ್ನಾಟಕದಲ್ಲಿ ಕೂಡ ಆಶಾದಾಯಕ ವಾತಾವರಣ
ಸದ್ಯಕ್ಕೆ ಎಲ್ಲ ಕಾಂಗ್ರೆಸ್ ಧುರೀಣರ ಲಕ್ಷ್ಯ ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳ ವಿಧಾನಸಭೆ ಚುನಾವಣೆಯ ಮೇಲೆ ನೆಟ್ಟಿದೆ. ಗುಜರಾತ್ ನಲ್ಲಿ ಜಿದ್ದಾಜಿದ್ದಿ ಫೈಟ್ ನೀಡಿದ ಮೇಲೆ, ರಾಜಸ್ತಾನದಲ್ಲಿ ಬಿಜೆಪಿಯಿಂದ ಉಪಚುನಾವಣೆಯಲ್ಲಿ ಸ್ಥಾನಗಳನ್ನು ಕಿತ್ತುಕೊಂಡ ಮೇಲೆ, ಕರ್ನಾಟಕದಲ್ಲಿ ಕೂಡ ಆಶಾದಾಯಕ ವಾತಾವರಣ ಇರುವುದರಿಂದ ಕಾಂಗ್ರೆಸ್ ಮೇಲ್ಮುಖವಾಗಿ ನೋಡುವಂತಾಗಿದೆ.
ಮೋದಿ ಸರಕಾರದ ಮೇಲೆ ನಿರಂತರ ದಾಳಿ
ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾದ ನಂತರ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೇಲೆ ಕಾಂಗ್ರೆಸ್ ನಿರಂತರವಾಗಿ ದಾಳಿ ನಡೆಸುತ್ತಲೇ ಬಂದಿದೆ. 'ಮೋದಿ ಸರಕಾರದ ಆಯುಷ್ಯ ಕೇವಲ ಒಂದು ವರ್ಷ ಮಾತ್ರ ಬಾಕಿಯಿದೆ', 'ಬಿಜೆಪಿ ಸರಕಾರವನ್ನು ಸಹಿಸಿಕೊಳ್ಳುವ ಕಾಲ ಇನ್ನೇನು ಕೊನೆಯಾಗಲಿದೆ' ಎಂಬಂತಹ ಮಾತುಗಳನ್ನು ರಾಹುಲ್ ಗಾಂಧಿಯೇ ಆಡಲು ಆರಂಭಿಸಿದ್ದಾರೆ.
ಚುನಾವಣಾ ಸಮೀಕ್ಷೆಯ ಭವಿಷ್ಯ ನಿಜವಾಗುವುದಾ?
ಈ ಕ್ಷಣ ಲೋಕಸಭೆ ಚುನಾವಣೆ ನಡೆದರೆ ಕಾಂಗ್ರೆಸ್ಸಿಗೆ ಎಷ್ಟು ಸೀಟುಗಳು ಸಿಗಲಿವೆ, ಬಿಜೆಪಿ ಎಷ್ಟು ಸ್ಥಾನಗಳನ್ನು ಕಬಳಿಸುತ್ತದೆ ಎಂಬ ಬಗ್ಗೆ ಹಲವಾರು ಚುನಾವಣಾ ಸಮೀಕ್ಷೆಗಳು ಬಂದಿವೆ. ಆದರೆ, ಸಮೀಕ್ಷೆಗಳು ಚುನಾವಣೆಯ ಫಲಿತಾಂಶಕ್ಕೆ ದಿಕ್ಸೂಚಿಯಾಗಲಾರದು ಎಂಬುದಕ್ಕೆ ಹಲವಾರು ಸಮೀಕ್ಷೆಗಳು ಜ್ವಲಂತ ಸಾಕ್ಷಿಯಾಗಿವೆ. 2019ರಲ್ಲಿ ಏನು ಬೇಕಾದರೂ ಆಗಬಹುದು!
ರಾಹುಲ್ ಕರ್ನಾಟಕ ಪ್ರವಾಸದ ನೀಲನಕ್ಷೆ
ರಾಹುಲ್ ಗಾಂಧಿಯವರ ಕರ್ನಾಟಕ ಪ್ರವಾಸದ ನೀಲನಕ್ಷೆ ಈಗಾಗಲೆ ಸಿದ್ಧವಾಗಿದ್ದು, ಫೆಬ್ರವರಿ 10ರಿಂದ ಕರ್ನಾಟಕದ ಉದ್ದಗಲಕ್ಕೂ ಅವರು ಗಿರಿಗಿರಿ ಸುತ್ತಲಿದ್ದಾರೆ. ಹಲವಾರು ಸಂವಾದ, ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಗುಜರಾತ್ ನಲ್ಲಿ ಮಾಡಿದಂತೆ ಕರ್ನಾಟಕದಲ್ಲಿ ಕೂಡ ಅವರು ಹಲವಾರು ದೇಗುಲಗಳಿಗೆ ದರ್ಶನ ನೀಡಿ ಆಶೀರ್ವಾದ ಪಡೆಯಲಿದ್ದಾರೆ ಎಂಬ ಬಗ್ಗೆ ಕೂಡ ಮಾಹಿತಿ ಬಂದಿದೆ.