ಅಧ್ಯಕ್ಷರು ಯಾರಾದರೇನಂತೆ, ಅದು ಗಾಂಧಿ ಫ್ಯಾಮಿಲಿ ತೊಗಲು ಗೊಂಬೆಯಾಟಲ್ಲವೇ?
ಏನು ರಾಹುಲ್ ಗಾಂಧಿಯೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎನ್ನುವ ಒತ್ತಡ ಈಗ ಕೇಳಿ ಬರುತ್ತಿದೆಯೋ, ಅದೇ ರೀತಿ ಯುಪಿಎ ಮೊದಲ ಅವಧಿಯಲ್ಲಿಯೂ ಇಂತಹ ವಾತಾವರಣ ನಿರ್ಮಾಣವಾಗಿತ್ತು, ಆದರೆ ಅಂದು ಸೋನಿಯಾ ಗಾಂಧಿ, ಇಂದು ಅವರ ಪುತ್ರ ರಾಹುಲ್.
ಕಾಂಗ್ರೆಸ್ ಪಾರ್ಲಿಮೆಂಟ್ ಬೋರ್ಡ್ ಮೀಟಿಂಗ್ ನಲ್ಲಿ ಸೋನಿಯಾ ಗಾಂಧಿಯೇ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಬೇಕೆಂದು, ಕಾಂಗ್ರೆಸ್ ಮುಖಂಡರು ಅತ್ತರೂ, ಅವಲತ್ತುಕೊಂಡರೂ, ಸೋನಿಯಾ ಗಾಂಧಿ ಒಪ್ಪಿರಲಿಲ್ಲ. ಸೋನಿಯಾ ಪಿಎಂ ಹುದ್ದೆಗೆ ಯುಪಿಎ ಮೈತ್ರಿಕೂಟದ ಯಾರಿಂದಲೂ ತಕರಾರು ಇರಲಿಲ್ಲ.
ಮನಸ್ಸಿಗೆ ನೋವಾಗಿದ್ದರಿಂದ ರಾಹುಲ್ ರಾಜೀನಾಮೆ ನೀಡಿರಬಹುದು: ದೇವೇಗೌಡ
ಏನೇ ಒತ್ತಡ ಬಂದರೂ ಸೋನಿಯಾ ಪಿಎಂ ಹುದ್ದೆಗೆ ಒಪ್ಪಿರಲಿಲ್ಲ. ಇಟೆಲಿ ಮೂಲದವರು ಎನ್ನುವ ಎನ್ಡಿಎ ಮೈತ್ರಿಕೂಟದ ಆರೋಪಕ್ಕೆ ತಿರುಗೇಟು ನೀಡಲು ಹಣೆದಿದ್ದ ರಾಜಕೀಯ ತಂತ್ರಗಾರಿಕೆ ಇದೆಂದೇ ಅಂದು ಹೇಳಲಾಗುತ್ತಿತ್ತು. ಖ್ಯಾತ ಅರ್ಥಶಾಸ್ತಜ್ಞ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಆಯ್ಕೆಮಾಡಲಾಗಿತ್ತು.
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯಲು ಅಂದು ಸೋನಿಯಾ ಗಾಂಧಿ ಸಮರ್ಥರಾದರು. ಒಂದು, ಭಾರತೀಯ ಮೂಲದವಳಲ್ಲ ಎನ್ನುವ ಇತರರ ಸೆಂಟಿಮೆಂಟಿಗೂ ತೊಂದರೆಯಾಗದಂತೆ, ಇನ್ನೊಂದು, ಪ್ರಧಾನಿ ಯಾರೇ ಆದರೂ, ಆಡಳಿತ ಯಂತ್ರ ಜನಪಥ್ 10ನಲ್ಲೇ ಇರುವಂತೆ ನೋಡಿಕೊಳ್ಳುವಲ್ಲಿ ಸೋನಿಯಾ ಯಶಸ್ವಿಯಾದರು.
ಅಣ್ಣನನ್ನು ಕೊಂಡಾಡಿದ ಪ್ರಿಯಾಂಕಾ ಗಾಂಧಿಗೆ ಟ್ವಿಟ್ಟಿಗರಿಂದ ವ್ಯಂಗ್ಯದ ಬಾಣ
ಈಗ, ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿರುವ ರಾಹುಲ್ ಗಾಂಧಿಗೆ ಪರ್ಯಾಯ ನಾಯಕನನ್ನು ಕಾಂಗ್ರೆಸ್ ಹುಡುಕುತ್ತಿದೆ. ಆದರೆ, ಯಾರೇ ಅಧ್ಯಕ್ಷರಾದರೂ, ಅದರ ಕೀಲಿಕೈ ಗಾಂಧಿ ಕುಟುಂಬದ ಕೈಯಲ್ಲೇ ಇರಲಿದೆಯೇ ಎನ್ನುವುದಿಲ್ಲಿ ಪ್ರಶ್ನೆ.
ಸೋನಿಯಾ ಆರೋಗ್ಯ ಸಮಸ್ಯೆ ಎದುರಾದ ನಂತರ ರಾಹುಲ್ ಎಐಸಿಸಿ ಅಧ್ಯಕ್ಷ
ಕೆಲವು ವರ್ಷಗಳ ಹಿಂದೆ, ಸೋನಿಯಾ ಗಾಂಧಿಗೆ ಆರೋಗ್ಯ ಸಮಸ್ಯೆ ಎದುರಾದ ನಂತರ ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಹುದ್ದೆ ಪಟ್ಟಕ್ಕೇರಿಸಲಾಯಿತು. ಹಲವು ಅಸೆಂಬ್ಲಿ ಚುನಾವಣೆಯಲ್ಲಿ ಇವರ ನೇತೃತ್ವದಲ್ಲೇ ಚುನಾವಣೆ ಎದುರಿಸಲಾಯಿತು, ಸೋಲು ಗೆಲುವು ಎರಡನ್ನೂ ಕಾಂಗ್ರೆಸ್ ಕಂಡಿತು. ದಿನ ಕಳೆದಂತೇ, ನಾಯಕತ್ವ ಗುಣವನ್ನೂ ಅಳವಡಿಸಿಕೊಂಡು ಬಂದರು.
ಸೋಲಿಗೆ ನೈತಿಕ ಹೊಣೆಹೊತ್ತು ರಾಹುಲ್ ರಾಜೀನಾಮೆ ನೀಡುವ ನಿರ್ಧಾರ
ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇನ್ನಿಲ್ಲದಂತೆ ಮುಗ್ಗರಿಸಿತು, ಖುದ್ದು ರಾಹುಲ್ ತಮ್ಮ ಕರ್ಮಭೂಮಿಯಲ್ಲಿ ಸೋತರು. ಸೋಲಿಗೆ ನೈತಿಕ ಹೊಣೆಹೊತ್ತು ರಾಹುಲ್ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದರು ಮತ್ತು ಅದಕ್ಕೆ ಕಟಿಬದ್ದರಾದರು. ಪಕ್ಷದ ಇತರ ಮುಖಂಡರ ವಿರುದ್ದ ಪರೋಕ್ಷವಾಗಿ ಅಸಮಾಧಾನವನ್ನೂ ಹೊರಹಾಕಿದರು. ಈಗ, ಕಾಂಗ್ರೆಸ್ ಹೊಸ ಅಧ್ಯಕ್ಷರ ಆಯ್ಕೆಯ ಹುಡುಕಾಟದಲ್ಲಿದೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ಸುಶೀಲ್ ಕುಮಾರ್ ಶಿಂಧೆ
ಮಂಚೂಣಿಯಲ್ಲಿ ಕೇಳಿ ಬರುತ್ತಿರುವ ಹೆಸರು ಎಂದರೆ ಮಲ್ಲಿಕಾರ್ಜುನ ಖರ್ಗೆ ಮತ್ತು ಸುಶೀಲ್ ಕುಮಾರ್ ಶಿಂಧೆ, ಇಬ್ಬರೂ, 75+. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್ ನಲ್ಲಿ ಅಧ್ಯಕ್ಷ ಹುದ್ದೆಗೆ ಯಾರನ್ನಾದರೂ ಆಯ್ಕೆಮಾಡಿದರೆ, ಅದು ಬರೀ ನಾಮಕೇವಾಸ್ತೆ ಎನ್ನುವ ಮಾತು ಚಾಲ್ತಿಯಲ್ಲಿದೆ. ಗ್ರ್ಯಾಂಡ್ ಓಲ್ಡ್ ಪಾರ್ಟಿಯ ಬ್ರ್ಯಾಂಡ್ ನ್ಯೂ ನಾಟಕವಿದು ಎಂದು ಬಿಜೆಪಿ, ರಾಹುಲ್ ರಾಜೀನಾಮೆಯ ವಿಚಾರದಲ್ಲಿ ವ್ಯಂಗ್ಯವಾಡಿದೆ.
ಯುವಕರಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಬಯಸಿದ್ದವರು ರಾಹುಲ್
ಯುವಕರಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಬಯಸಿದ್ದವರು ರಾಹುಲ್ ಗಾಂಧಿ. ಆದರೆ, ಈಗ ಕೇಳಿಬರುತ್ತಿರುವ ಹೆಸರು ಎಪ್ಪತ್ತೈದ ಗಡಿ ದಾಟಿದವರು. ಮೂರು ನಿರ್ಣಾಯಕ ರಾಜ್ಯಗಳ ಚುನಾವಣೆ ಈ ವರ್ಷವೇ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಇವರಿಗೆ ಸತತ ಚುನಾವಣಾ ಪ್ರಚಾರ ನಡೆಸಲು ಸಾಧ್ಯವೇ ಎನ್ನುವುದಿಲ್ಲಿ ಪ್ರಶ್ನೆ. ಮಲ್ಲಿಕಾರ್ಜುನ ಖರ್ಗೆಗೆ ಗಾಂಧಿ ಕುಟುಂಬದ ಮೇಲಿರುವ ಗೌರವ ಎಷ್ಟರಮಟ್ಟಿಗೆ ಅಂದರೆ, ತಮ್ಮ ಮಕ್ಕಳಿಗೆ ಗಾಂಧಿ ಕುಟುಂಬದ (ಪ್ರಿಯಾಂಕ್ ಖರ್ಗೆ, ಪ್ರಿಯದರ್ಶಿನಿ ಖರ್ಗೆ) ಹೆಸರನ್ನಿಟ್ಟಿದ್ದಾರೆ.
ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕ ಸಕ್ರಿಯ ರಾಜಕಾರಣದಲ್ಲಿದ್ದಾರೆ
ಗಾಂಧಿ ಕುಟುಂಬದಿಂದ ಇನ್ನೂ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅಧ್ಯಕ್ಷರು ಯಾರೇ ಆದರೂ, ಅವರಿಗೆ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಸಾಧ್ಯವೇ, ಹಿಡಿತ ಸಾಧಿಸಲು ಬಿಡುತ್ತಾರೆಯೇ? ನೂತನ ಅಧ್ಯಕ್ಷರ ಮಾತಿಗೆ ಸೋನಿಯಾ ಕುಟುಂಬಕ್ಕಿಂತ ಹೆಚ್ಚಿನ ಮಹತ್ವವನ್ನು ಕಾಂಗ್ರೆಸ್ಸಿಗರು ನೀಡುತ್ತಾರೆಯೇ ಗೊತ್ತಿಲ್ಲ. ಒಟ್ಟಿನಲ್ಲಿ ಗಾಂಧಿ ಕುಟುಂಬದ ಹೊರತಾದ ಅಧ್ಯಕ್ಷರು ಡಮ್ಮಿ ಪೀಸ್ ಅಗುತ್ತಾರಾ, ಇಲ್ಲವಾ, ಕಾದು ನೋಡಬೇಕಿದೆ.