ಮೋದಿಯವರಿಂದ ಚಹಾ ಖರೀದಿಸಿದ್ದವರು ಕಾಂಗ್ರೆಸ್ ಕಚೇರಿಗೆ ಬನ್ನಿ
ಮುಂಬೈ, ಜೂ 18 (ಪಿಟಿಐ) : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಹೇಳುತ್ತಿದ್ದಂತೇ ಅವರು ಚಹಾ ಮಾರುತ್ತಿದ್ದ ದಿನಗಳಲ್ಲಿ ಅವರಿಂದ ಚಹಾ ಖರೀದಿಸಿದವರು ಯಾರಾದರೂ ಇದ್ದರೆ ಅಂತವರು ಕಾಂಗ್ರೆಸ್ ಕಚೇರಿಗೆ ಬಂದು ಬಹುಮಾನ ಪಡೆಯಬಹುದಾಗಿದೆ.
ಈ ರೀತಿಯ ಆಫರ್ ನೀಡಿದವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್. ಮುಂಬೈನಲ್ಲಿ ರೈತರ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ದಿಗ್ವಿಜಯ್ ಸಿಂಗ್, ಪ್ರಧಾನಮಂತ್ರಿ ಮೋದಿ ಹೇಳುವ ಯಾವ ಹೇಳಿಕೆಯೂ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ. (ಮೋದಿ ಹೇರ್ ಸ್ಟೈಲಿಗೂ ಕೈ ಹಾಕಿದ ಕಾಂಗ್ರೆಸ್)
ನಾನು ಚಹಾ ಮಾರುತ್ತಿದ್ದೆ ಎಂದು ಚುನಾವಣೆ ವೇಳೆ ಹೇಳಿಕೆ ನೀಡಿ, ಅನುಕಂಪ ಗಿಟ್ಟಿಸಿಕೊಂಡ ಮೋದಿ ಹೇಳುವುದೆಲ್ಲಾ ಸುಳ್ಳು. ಅವರು ಚಹಾ ಮಾರುತ್ತಿದ್ದ ದಿನಗಳಲ್ಲಿ ಅವರಿಂದ ಯಾರಾದರೂ ಟೀ ಖರೀದಿಸಿದವರು ಇದ್ದರೆ ಅಂತವರು ನಮ್ಮ ಕಚೇರಿಗೆ ಬರಲಿ.
ಮೋದಿ ಹೇಳಿಕೆಯ ಸತ್ಯಾಸತ್ಯತೆ ಹೊರಬರಲಿ. ಅವರಿಂದ ಚಹಾ ಕುಡಿದವರಿದ್ದರೆ ಪಕ್ಷದಿಂದ ಎರಡು ಲಕ್ಷ ರೂಪಾಯಿ ಬಹುಮಾನ ಅವರಿಗೆ ನೀಡುವುದಾಗಿ ದಿಗ್ವಿಜಯ್ ಸಿಂಗ್ ಘೋಷಿಸಿದ್ದಾರೆ.
ಈ ಹಿಂದೆ ತನ್ನ ವಿದ್ಯಾರ್ಹತೆ ಎಸ್ ಎಸ್ ಎಲ್ ಸಿ ಎಂದು ಹೇಳಿದ್ದ ಪ್ರಧಾನಿ ಮೋದಿ, ಇದ್ದಕ್ಕಿದ್ದಂತೇ ತಾನು ಪದವಿ ಶಿಕ್ಷಣ ಮುಗಿಸಿರುವುದಾಗಿ ಹೇಳಿಕೆ ನೀಡುತ್ತಾರೆ. ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು?
ಪ್ರಧಾನಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿಯ ದ್ವಂದ್ವ ಹೇಳಿಕೆಗಳನ್ನು ನೀಡಿ ಜನರಿಗೆ ಮಂಕುಬೂದಿ ಎರಚಬಾರದು.
ಬರೀ ಪೊಳ್ಳು ಭರವಸೆಯೇ ಮೋದಿ ಸರಕಾರದ ಇದುವರೆಗಿನ ಸಾಧನೆ. ಮೋದಿ ಜೊತೆ ಓದಿದವರು ಯಾರಾದರೂ ಇದ್ದರೂ ಅವರಿಗೂ ಬಹುಮಾನ ನೀಡಲಾಗುವುದು ಎಂದು ದಿಗ್ವಿಜಯ್ ಸಿಂಗ್ ವ್ಯಂಗ್ಯ ವಾಡಿದ್ದಾರೆ.