ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಯಾರನ್ನಾದರೂ ಬೇಗ ಆಯ್ಕೆ ಮಾಡಿ: ಸಿಂಧಿಯಾ
ಭೋಪಾಲ್, ಜುಲೈ 12: ಪಕ್ಷದ ವರ್ಚಸ್ಸನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದ್ದು, ತುರ್ತಾಗಿ ಎಐಸಿಸಿಗೆ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಿಸಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
133 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪದವಿಗೆ, ಲೋಕಸಭಾ ಚುನಾವಣಾ ಸೋಲಿನ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ರಾಜೀನಾಮೆ ನೀಡಿರುವುದರಿಂದ, ಅವರ ಮುಂದಿನ ಜವಾಬ್ದಾರಿ ಏನು ಎನ್ನುವುದನ್ನು ಪಕ್ಷ ನಿರ್ಧರಿಸಬೇಕಿದೆ ಎಂದು ಸಿಂಧಿಯಾ ಹೇಳಿದ್ದಾರೆ.
ಕಾಂಗ್ರೆಸ್ ಬಿಕ್ಕಟ್ಟಿನ ನಡುವೆ ರಾಜೀನಾಮೆ ಸಲ್ಲಿಸಿದ ಸಿಂಧಿಯಾ
ಬರೀ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷರಾಗದೇ, ಇಡೀ ದೇಶದ ಜನರ ಪ್ರೀತಿಯನ್ನು ಗಳಿಸಿದ್ದ ರಾಹುಲ್ ಗಾಂಧಿ, ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸುತ್ತಾರೆಂದು ನಾವು ಯಾರೂ ಅಂದುಕೊಂಡಿರಲಿಲ್ಲ, ಅವರ ನಿರ್ಧಾರ ನಮಗೆಲ್ಲಾ ದೊಡ್ಡ ಶಾಕ್ ಎಂದು ಸಿಂಧಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಈಗ ಸಂಕಷ್ಟದ ಸಮಯ ಎನ್ನುವುದನ್ನು ಒಪ್ಪಿಕೊಂಡ ಸಿಂಧಿಯಾ, ನಾವು ರಾಹುಲ್ ಮುಂದುವರಿಯಲು ಇನ್ನೂ ಪ್ರಯತ್ನವನ್ನು ಮಾಡುತ್ತಿದ್ದೇವೆ. ಆದರೆ, ನಮ್ಮ ಪ್ರಯತ್ನ ಕೈಗೂಡುತ್ತಿಲ್ಲ. ಹಾಗಾಗಿ, ಅಧ್ಯಕ್ಷ ಹುದ್ದೆಗೆ ಅರ್ಹರನ್ನು ಆದಷ್ಟು ಬೇಗ ಪಕ್ಷ ಆರಿಸಬೇಕಿದೆ ಎಂದು ಸಿಂಧಿಯಾ ಹೇಳಿದ್ದಾರೆ.
ಅಧ್ಯಕ್ಷರನ್ನು ಆಯ್ಕೆಮಾಡುವ ವಿಚಾರದಲ್ಲಿ ಈಗಾಗಲೇ ಬಹಳ ಸಮಯ ಪೋಲಾಗಿದೆ, ಇನ್ನೂ ತಡಮಾಡುವಂತಿಲ್ಲ ಎಂದಿರುವ ಸಿಂಧಿಯಾ, ಅಧ್ಯಕ್ಷ ಹುದ್ದೆಯ ರೇಸ್ ನಲ್ಲಿ ನೀವೂ ಇದ್ದೀರಾ ಎನ್ನುವ ಪ್ರಶ್ನೆಗೆ, ಅದನ್ನು ಪಕ್ಷ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಭಾನುವಾರ (ಜುಲೈ 07) ರಾಜೀನಾಮೆ ಸಲ್ಲಿಸಿದ್ದರು. ರಾಹುಲ್ ಗಾಂಧಿ ರಾಜೀನಾಮೆ ಸಲ್ಲಿಸಿದ ಬಳಿಕ ಆ ಸ್ಥಾನಕ್ಕೆ ಸಿಂಧಿಯಾ ಅವರ ಹೆಸರು ಕೇಳಿಬರುತ್ತಿದೆ.
'ನಾನು ಅನಾರೋಗ್ಯದ ಸಮಸ್ಯೆಯಿಂದಾಗಿ ರಾಜಕೀಯದಿಂದ ಆದಷ್ಟು ದೂರವಿದ್ದೇನೆ. ನನ್ನ ಬಳಿ ಹಂಗಾಮಿ ಅಧ್ಯಕ್ಷೆಯಾಗಿ ಕೆಲವೇ ದಿನ ಕೆಲಸ ನಿರ್ವಹಿಸುವುದಕ್ಕೂ ಸಾಧ್ಯವಾಗುವುದಿಲ್ಲ, ಕ್ಷಮಿಸಿ' ಎಂದು ಸೋನಿಯಾ ಗಾಂಧಿ, ಪಕ್ಷದ ಕೆಲವು ಮುಖಂಡರಿಗೆ ತಿಳಿಸಿದ್ದರು.
ಪಕ್ಷಾಧ್ಯಕ್ಷರಾಗಿ ಎಂದ ಬೆಂಬಲಿಗರಿಗೆ 'ಒಲ್ಲೆ' ಎಂದ ಸೋನಿಯಾ ಗಾಂಧಿ
ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಮೇಲೆ ತೆರವಾಗಿರುವ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಹಾಗಾಗಿ, ಹಂಗಾಮಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿ ಎಂದು ಹಿರಿಯ ಕಾಂಗ್ರೆಸ್ ಮುಖಂಡರು, ಸೋನಿಯಾಗೆ ಮನವಿ ಮಾಡಿದ್ದರು.