ಕಾಂಗ್ರೆಸ್ ಮುಕ್ತ ಈಶಾನ್ಯ ಭಾರತ, ಬಿಜೆಪಿ ಕನಸು ನನಸಾಯ್ತು!
ಐಜ್ವಾಲ್, ಡಿಸೆಂಬರ್ 11: ಕಾಂಗ್ರೆಸ್ ಮುಕ್ತ ಭಾರತ ಕನಸು ಹೊತ್ತಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ಕ್ಕೆ ಮಿಜೋರಾಂನಲ್ಲೂ ಶುಭ ಸುದ್ದಿ ಸಿಕ್ಕಿದೆ.
ಆಡಳಿತಾರೂಢ ಕಾಂಗ್ರೆಸ್ ಹಿಂದಿಕ್ಕಿ ಮಿಜೋ ನ್ಯಾಷನಲ್ ಫ್ರಂಟ್(ಎಂಎನ್ಎಫ್) ಮತ್ತೊಮ್ಮೆ ಈಶಾನ್ಯ ರಾಜ್ಯದಲ್ಲಿ ತನ್ನ ಅಧಿಕಾರ ಸ್ಥಾಪಿಸಲಿದೆ. ಈ ಮೂಲಕ ಈಶಾನ್ಯ ಭಾರತದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಈ ಮೂಲಕ ಎಂಎನ್ ಎಫ್ ಮೂಲಕ ಬಿಜೆಪಿ ಕನಸು ನನಸಾಗಿದೆ.
ಮಿಜೋರಾಂ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ ಅಭ್ಯರ್ಥಿ
40 ಸ್ಥಾನಗಳ ವಿಧಾನಸಭೆಯಲ್ಲಿ ಬೇಕಾದ ಮ್ಯಾಜಿಕ್ ನಂಬರ್ 21 ದಾಟಿ ಎಂಎನ್ ಎಫ್ ಮುನ್ನುಗ್ಗಿದೆ. ಕಾಂಗ್ರೆಸ್ 5 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರೆ, ಇತರೆ 8 ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ.ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಚಿವ ಡಾ. ಬಿ. ಡಿ ಛಕ್ಮಾ ಅವರು ಬಿಜೆಪಿಗೆ ಮೊಟ್ಟ ಮೊದಲ ಜಯದ ಕಾಣಿಕೆ ನೀಡಿದ್ದಾರೆ.
ಮಿಜೋರಾಂ : ಸಿಎಂಗೆ 2 ಕ್ಷೇತ್ರದಲ್ಲೂ ಸೋಲು, ಅಧಿಕಾರ 'ಕೈ' ತಪ್ಪಿತು
ಕ್ರೈಸ್ತ ಸಮುದಾಯದ ಪ್ರಾಬಲ್ಯ ಹೊಂದಿರುವ ರಾಜ್ಯದಲ್ಲಿ ಎಂಎನ್ ಎಫ್ ಸರ್ಕಾರ ಸ್ಥಾಪಿಸುವುದು ಖಚಿತವಾಗಿದ್ದು, ಬಿಜೆಪಿ ತನ್ನ ಏಕೈಕ ಶಾಸಕನನ್ನು ಸರ್ಕಾರದ ಭಾಗವನ್ನಾಗಿಸಲು ಯತ್ನಿಸುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.
ಮಿಜೋರಾಂನಲ್ಲಿ ಅಧಿಕಾರಕ್ಕೆ ಬಂದ ಎಂಎನ್ ಎಫ್
1986ರಿಂದ ಕಾಂಗ್ರೆಸ್ ಹಾಗೂ ಮಿಜೋ ನ್ಯಾಷನಲ್ ಫ್ರಂಟ್(ಎಂಎನ್ಎಫ್) ನಡುವೆ ಅಧಿಕಾರ ಅದಲು ಬದಲಾಗುತ್ತಾ ಬಂದಿದೆ. ಹೋರಾಟದಿಂದ ರಾಜಕೀಯ ಪಕ್ಷವಾಗಿ ರೂಪುಗೊಂಡ ಎಂಎನ್ ಎಫ್ 1998 ರಿಂದ 2008ರ ತನಕ ಅಧಿಕಾರ ಅನುಭವಿಸಿದೆ.
ಗುಡ್ಡಗಾಡು ರಾಜ್ಯದಲ್ಲಿ ಸ್ಥಳೀಯ ಪಕ್ಷವಾಗಿ ಎಂಎನ್ ಎಫ್ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. 84 ವರ್ಷ ವಯಸ್ಸಿನ ಝೋರಮ್ ಥಂಗ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ. ಅಥವಾ ವಯಸ್ಸಿನ ಕಾರಣ ನೀಡಿ, ಉಪಾಧ್ಯಕ್ಷ ಲಾಲ್ ಥಂಗ್ ಲಿಯಾಂಗ ಅವರಿಗೆ ಸಿಎಂ ಪಟ್ಟ ಬಿಟ್ಟುಕೊಡಬಹುದು.
2014ರಲ್ಲಿ ಸ್ಥಾಪನೆಯಾದ ಯುನೈಟೆಡ್ ಡೆಮೋಕ್ರಾಟಿಕ್ ಫ್ರಂಟ್ ಮೈತ್ರಿಕೂಟದಲ್ಲಿ ಬಿಜೆಪಿ ಹಾಗೂ ಎಂಎನ್ ಎಫ್ ಜತೆಗೂಡಿ ಲೋಕಸಭೆಗೆ ಸ್ಪರ್ಧಿಸಲಿವೆ.
ಅಸ್ಸಾಂದಲ್ಲಿ ಕೇಸರಿ ಬಾವುಟ ಹಾರಿಸಿದ ಸೋನೊವಾಲ್
ಕೇಂದ್ರ ಸರ್ಕಾರದಲ್ಲಿ ಕ್ರೀಡಾ ಖಾತೆ ರಾಜ್ಯ ಸಚಿವರಾಗಿದ್ದ ಸೋನುವಾಲ್ ಅವರು ಅಸ್ಸಾಂ ಅಸೆಂಬ್ಲಿ ಚುನಾವಣೆಯಲ್ಲಿ ಭಾರಿ ಅಂತರದಿಂದ ಜಯ ಗಳಿಸಿದರು.
ಮಂಗಳವಾರ(ಮೇ 24, 2016) ಸಂಜೆ ನಡೆದ ಸಮಾರಂಭದಲ್ಲಿ ಅಸ್ಸಾಂ ರಾಜ್ಯಪಾಲರಾದ ಪಿ.ಬಿ. ಆಚಾರ್ಯ ಸೋನೊವಾಲ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಮೊದಲ ಬಾರಿಗೆ ಬಿಜೆಪಿಯ ಆಡಳಿತ ಶಕೆ ಆರಂಭಗೊಂಡಿದೆ.
ಮೇಘಾಲಯದ ಸಿಎಂ ಕೊನ್ರಾಡ್ ಸಂಗ್ಮಾ
ಎನ್ ಪಿಪಿಯ ಅಧ್ಯಕ್ಷರಾಗಿರುವ ಕೊನ್ರಾಡ್ ಸಂಗ್ಮಾ ಅವರು ಇತರೆ ಅಭ್ಯರ್ಥಿಗಳ ಬೆಂಬಲದಿಂದ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಐದು ಪಕ್ಷಗಳ ಮೈತ್ರಿಕೂಟ ರಚಿಸಿಕೊಂಡು 34 ಶಾಸಕರ ಬೆಂಬಲದೊಂದಿಗೆ ಅಧಿಕಾರ ಸ್ಥಾಪಿಸಿದರು. ಕೊನ್ರಾಡ್ ಸಂಗ್ಮಾ ಅವರು ಮೇಘಾಲಯದ 8ನೇ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.
ಎನ್ ಸಿ ಎಫ್ ಬಿಜೆಪಿ ಮೈತ್ರಿಕೂಟದಿಂದ ಸರ್ಕಾರ ರಚನೆ
ನಾಗಾಲ್ಯಾಂಡ್ ನಲ್ಲೂ ಬಿಜೆಪಿ ಮೈತ್ರಿಕೂಟವೇ ಸರ್ಕಾರ ರಚಿಸಿದೆ. ಇಲ್ಲಿ ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿಎಫ್) 27(60) ಸ್ಥಾನಗಳನ್ನು ಗೆದ್ದಿದ್ದರು, ಬಿಜೆಪಿ ಮತ್ತು ಎನ್ ಡಿಪಿಪಿ ಗಳು ಸೇರಿದರೆ 29 ಸ್ಥಾನವಾಗುತ್ತದೆ. ಇನ್ನುಳಿದ ಎರಡು ಸ್ಥಾನಗಳಿಗೆ ಜೆಡಿಯು ಮತ್ತು ಇನ್ನೊಬ್ಬರು ಸ್ವತಂತ್ರ ಅಭ್ಯರ್ಥಿ ಬೆಂಬಲ ನೀಡಲು ಸಿದ್ಧರಿರುವುದರಿಂದ ಬಿಜೆಪಿಗೆ ಅಗತ್ಯವಿರುವ ಮ್ಯಾಜಿಕ್ ನಂಬರ್ ಸುಲಭವಾಗಿ ಸಿಕ್ಕಲಿದೆ. ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ನೈಫಿಯು ರಿಯೋ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಒಮ್ಮತದಿಂದ ಆರಿಸಲಾಗಿದೆ.
ನಾಗಾಲ್ಯಾಂಡ್ ಚುನಾವಣಾ ಫಲಿತಾಂಶ: ಬಿಜೆಪಿ- 12, ಎನ್ ಡಿಪಿಪಿ-17, ಕಾಂಗ್ರೆಸ್- 0, ಎನ್ ಪಿಎಫ್ -27, ಇತರರು- 4
ತ್ರಿಪುರಾದಲ್ಲಿ ಬಿಜೆಪಿ
ಕಳೆದ 25 ವರ್ಷಗಳಿಂದ ತ್ರಿಪುರದಲ್ಲಿ ಅನಭಿಷಿಕ್ತ ದೊರೆಯಾಗಿ ಆಳಿದ ಎಡಪಕ್ಷಕ್ಕೆ ಚುನಾವಣಾ ಫಲಿತಾಂಶ ಮಂಗಳಾರತಿ ಎತ್ತಿದೆ! ಈ ಭಾಗದಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಕಂಡಿದ್ದು, ಈಶಾನ್ಯ ರಾಜ್ಯಗಳಲ್ಲಿ ನಿರಂತರವಾಗಿ ನಡೆಯುವ ಹಿಂದೆ, ಅನಾಚಾರಗಳಿಗೆ ಜನರು ಸೂಕ್ತ ಉತ್ತರ ನೀಡಿದಂತಿದೆ. ಇಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷ 43 ಕ್ಷೇತ್ರಗಳಲ್ಲಿ ಜಯಗಳಿಸಿ, ಬಹುಮತ ಪಡೆದು, ಯಾವ ತಕರಾರಿಲ್ಲದೆ ಸರ್ಕಾರ ರಚಿಸುವ ಅವಕಾಶ ಪಡೆದಿದೆ.
ತ್ರಿಪುರ ಚುನಾವಣಾ ಫಲಿತಾಂಶ: ಬಿಜೆಪಿ-43, ಕಾಂಗ್ರೆಸ್-0, ಸಿಪಿಎಂ- 16
ಅರುಣಾಚಲಪ್ರದೇಶ
ಕಾಂಗ್ರೆಸ್ನ ಭಿನ್ನಮತೀಯ ಮುಖಂಡ 'ಕಲಿಖೊ ಪುಲ್' ಅವರು ಅರುಣಾಚಲ ಪ್ರದೇಶದ 9ನೇ (ಹೊಸ) ಮುಖ್ಯಮಂತ್ರಿಯಾಗಿ ಶುಕ್ರವಾರ 19-2-2016 ಪ್ರಮಾಣ ವಚನ ಸ್ವೀಕರಿಸಿದರು.
ಹಾಲಿ ಮುಖ್ಯಮಂತ್ರಿ ಕಲಿಖೊ ಪುಲ್ ಅವರು, 13,82,611 ಜನಸಂಖ್ಯೆ ಇರುವ ರಾಜ್ಯದಲ್ಲಿ ಕೇವಲ 3 ಸಾವಿರ ಜನಸಂಖ್ಯೆ ಇರುವ ಕಮನ್ ಮಿಶ್ಮಿ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಅವರು ಇನ್ನೂ ಕಾಂಗ್ರೆಸ್ನಲ್ಲಿಯೇಇರುವುದಾಗಿ ಹೇಳುತ್ತಾರೆ. ಇವರು ಬಿಜೆಪಿ ಬೆಂಬಲದಿಂದ ಸರ್ಕಾರ ರಚಿಸಿದ ಮೊದಲ ಮುಖ್ಯ ಮಂತ್ರಿ.ಮಣಿಪುರದಲ್ಲಿ ಅಧಿಕಾರ ಸ್ಥಾಪನೆ
ಈಶಾನ್ಯ ರಾಜ್ಯ ಮಣಿಪುರದಲ್ಲಿ ಮಾರ್ಚ್ 11ರಂದು ಫಲಿತಾಂಶ ಹೊರಬಿದ್ದಾಗ ಬಿಜೆಪಿ ಸೋತಿತ್ತು. ಆದರೆ ಮ್ಯಾಜಿಕ್ ಮಾಡಿ ಅಧಿಕಾರಕ್ಕೇರುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಹೀಗೆ ಈಶಾನ್ಯ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮಣಿಪುರದಲ್ಲಿ ಎನ್. ಬೈರೇನ್ ಸಿಂಗ್ ಪ್ರಮಾಣವಚನ ಸ್ವೀಕರಿಸಿದರು. 60 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 28ನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇನ್ನೇನು ಸರಳ ಬಹುಮತಕ್ಕೆ ಬೇಕಾಗಿದ್ದುದು 3 ಸ್ಥಾನಗಳು ಮಾತ್ರ. ಆದರೆ ಕೇವಲ 21 ಸ್ಥಾನಗಳಲ್ಲಿ ಗೆದ್ದು ಬಿಜೆಪಿ ನಾಗಾ ಪೀಪಲ್ಸ್ ಫ್ರಂಟ್, ನ್ಯಾಷನಲ್ ಪೀಪಲ್ಸ್ ಪಾರ್ಟಿಯ ತಲಾ ನಾಲ್ಕು ಹಾಗೂ ತೃಣಮೂಲ ಕಾಂಗ್ರೆಸ್ ಮತ್ತು ಪಕ್ಷೇತರ ಒಬ್ಬರು ಶಾಸಕರನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಅಧಿಕಾರಕ್ಕೇರಿತ್ತು.
ತ್ರಿಪುರಾದಲ್ಲಿ ಕೇಸರಿ ಅಲೆ
48 ವರ್ಷದ ವಿಪ್ಲವ್ ದೇವ್ ಅವರಿಗೆ ತ್ರಿಪುರದ ರಾಜ್ಯಪಾಲ ತಥಾಗಥ ರಾಯ್ ಪ್ರಮಾಣವಚನವನ್ನು ಮಾರ್ಚ್ 09, 2018ರಂದು ಬೋಧಿಸಿದರು. ಫೆ.18 ರಂದು ನಡೆದಿದ್ದ ತ್ರಿಪುರ ವಿಧಾನಸಭೆ ಚುನಾವಣೆಯ ಫಲಿತಾಂಶ ಮಾ.03 ರಂದು ಹೊರಬಿದ್ದಿತ್ತು. 25 ವರ್ಷಗಳಿಂದ ಎಡಪಕ್ಷದ ತೆಕ್ಕೆಯಲ್ಲಿದ್ದ ತ್ರಿಪುರವನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿತು.
ತ್ರಿಪುರ ವಿಧಾನಸಭೆ ಚುನಾವಣಾ ಫಲಿತಾಂಶ: ಬಿಜೆಪಿ-43, ಕಾಂಗ್ರೆಸ್-0, ಸಿಪಿಎಂ- 16
ಸಿಕ್ಕಿಂನಲ್ಲಿ ಬಿಜೆಪಿ ಮೈತ್ರಿಕೂಟದ ಸರ್ಕಾರ
2014ರ ವಿಧಾನಸಭೆ ಚುನಾವಣೆಯಲ್ಲಿ ಪವನ್ ಕುಮಾರ್ ಚಮ್ಲಿಂಗ್ ಅವರು ದಾಖಲೆಯ ಐದನೇ ಬಾರಿಗೆ ಮುಖ್ಯಮಂತ್ರಿಯಾದರು. 1994, 1999, 2004, 2009 ಹಾಗೂ 2014ರಲ್ಲಿ ಜಯ ದಾಖಲಿಸಿರುವ ಸಿಕ್ಕಿಂ ಡೆಮೊಕ್ರಾಟಿಕ್ ಫ್ರಂಟ್ ಪಕ್ಷವು ಮೇ 2016ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಯಿಂದ ರೂಪುಗೊಂಡ ಈಶಾನ್ಯ ರಾಜ್ಯಗಳ ಮೈತ್ರಿಕೂಟದ ಭಾಗವಾಗಿದೆ. ಭಾರತದ ಸಾವಯವ ರಾಜ್ಯವೆನಿಸಿರುವ ಸಿಕ್ಕಿಂನಲ್ಲಿ ಆಡಳಿತ ಪಕ್ಷವು 32ರಲ್ಲಿ 28ಸ್ಥಾನಗಳನ್ನು ಹೊಂದಿದೆ.