ರಾಜ್ಯಪಾಲ ಬಂಡಾರು ದತ್ತಾತ್ರೇಯ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಶಾಸಕರು
ಶಿಮ್ಲಾ, ಫೆಬ್ರವರಿ 26: ಹಿಮಾಚಲ ಪ್ರದೇಶದ ವಿಧಾನಸಭೆಯಲ್ಲಿ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ತಳ್ಳಾಡಿದ ದುರ್ಘಟನೆ ನಡೆದಿದೆ. ಬಜೆಟ್ ಅಧಿವೇಶನದ ಮೊದಲವಾದ ಶುಕ್ರವಾರ ವಿಧಾನಸಭೆಯಲ್ಲಿ ಭಾಷಣ ಮಾಡಿ ತೆರಳುವಾಗ ಕೆಲವು ಕಾಂಗ್ರೆಸ್ ಶಾಸಕರು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ರಾಜ್ಯಪಾಲರು ಅಧಿವೇಶನದಲ್ಲಿ ಭಾಷಣ ಮುಗಿಸಿ ತಮ್ಮ ವಾಹನದತ್ತ ಹೋಗುತ್ತಿದ್ದರು. ಆಗ ಕಾಂಗ್ರೆಸ್ ಶಾಸಕರು ಹಲ್ಲೆ ನಡೆಸಿದ್ದಾರೆ. ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ವಿರೋಧಪಕ್ಷದ ನಾಯಕ ಮುಕೇಶ್ ಅಗ್ನಿಹೋತ್ರಿ ಸೇರಿದಂತೆ ಕಾಂಗ್ರೆಸ್ನ ಶಾಸಕರಾದ ಹರ್ಷವರ್ಧನ್ ಚೌಹಾಣ್, ಸುಂದರ್ ಸಿಂಗ್ ಠಾಕೂರ್, ಸತ್ಪಾಲ್ ರಾಜಡಾ ಮತ್ತು ವಿನಯ್ ಕುಮಾರ್ ಅವರನ್ನು ಅಮಾನತುಗೊಳಿಸುವ ನಿರ್ಣಯವನ್ನು ಅಂಗೀಕರಿಸಿದ್ದರು ಎಂದು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಭಾರದ್ವಾಜ್ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶ ವಿಧಾನಸಭೆಯನ್ನು ಸೋಮವಾರ 2 ಗಂಟೆಯವರೆಗೂ ಮುಂದೂಡಲಾಗಿತ್ತು. ಸಚಿವ ಸುರೇಶ್ ಭಾರದ್ವಾಜ್ ಅವರು ಮಂಡಿಸಿದ್ದ ನಿರ್ಣಯವನ್ನು ಪರಿಗಣಿಸುವ ಸಲುವಾಗಿ ಶುಕ್ರವಾರ 1 ಗಂಟೆಗೆ ಸದನ ಪುನರಾರಂಭಗೊಂಡಿತ್ತು.
ಆದರೆ ವಿರೋಧಪಕ್ಷ ಕಾಂಗ್ರೆಸ್ ಸದಸ್ಯರ ಗದ್ದಲದಿಂದ ರಾಜ್ಯಪಾಲರು ತಮ್ಮ ಭಾಷಣದ ಕೊನೆಯ ಸಾಲನ್ನು ಮಾತ್ರ ಓದಲು ಸಾಧ್ಯವಾಯಿತು. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸದನ ಸೇರಿದಾಗ ವಿರೋಧಪಕ್ಷದ ನಾಯಕ ಮುಕೇಶ್ ಅಗ್ನಿಹೋತ್ರಿ ತಮ್ಮ ಸೀಟಿನಿಂದು ಎದ್ದು ನಿಂತು ಘೋಷಣೆಗಳನ್ನು ಕೂಗಿದರು.
ಅಡುಗೆ ಅನಿಲ, ಪೆಟ್ರೋಲ್ ಡೀಸೆಲ್ ದರ ಏರಿಕೆಯ ಬಗ್ಗೆ ಭಾಷಣದಲ್ಲಿ ಏನನ್ನೂ ಪ್ರಸ್ತಾಪಿಸಿಲ್ಲ. ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ ಎಂದು ಆರೋಪಿಸಿದರು. ಸದನದಲ್ಲಿ ಕಾಂಗ್ರೆಸ್ ಸದಸ್ಯರು ತೋರಿದ ವರ್ತನೆಯನ್ನು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಖಂಡಿಸಿದ್ದಾರೆ.