ಸೌರಾಷ್ಟ್ರ- ಕಛ್ ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಮುರಿದ ಕಾಂಗ್ರೆಸ್
ಗುಜರಾತ್ ನಲ್ಲಿ ಸತತವಾಗಿ ಆರನೇ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಲಿದೆ. ಆದರೆ ಈ ಬಾರಿಯ ಫಲಿತಾಂಶದಲ್ಲಿ ತನ್ನ ಭದ್ರಕೋಟೆಯ ಪೈಕಿ ಹಲವನ್ನು ಬಿಜೆಪಿ ಕಳೆದುಕೊಂಡಿದೆ. ಉತ್ತರ ಗುಜರಾತ್ ಹಾಗೂ ಸೌರಾಷ್ಟ್ರದಲ್ಲಿ ಕಾಂಗ್ರೆಸ್ ಗೆ ಈ ಬಾರಿ ಭರ್ಜರಿ ಫಸಲು ಸಿಕ್ಕಿದೆ. ಈ ಭಾಗಗಳಲ್ಲಿ ಆಕ್ರಮಣಕಾರಿಯಾಗಿ ಚುನಾವಣೆ ಪ್ರಚಾರ ಕೈಗೊಂಡಿತ್ತು ಕೈ ಪಕ್ಷ.
ಗುಜರಾತ್ ಪಿಚ್ಚರ್: ಹಳ್ಳಿಗರ ಸಿಟ್ಟಿಗೆ ಸಿಲುಕಿ ನೂರು ದಾಟಲಿಲ್ಲ ಭಾಜಪ
ಗಾಂಧಿನಗರದ ಅಕ್ಷರಧಾಮ ದೇಗುಲಕ್ಕೆ ಭೇಟಿ ನೀಡುವ ಮೂಲಕ ರಾಹುಲ್ ಗಾಂಧಿ ತಮ್ಮ ಚುನಾವಣೆ ಪ್ರಚಾರವನ್ನೇ ಆರಂಭಿಸಿದ್ದರು. "ಹಿಂದೂಗಳ ಮತಕ್ಕಾಗಿ ರಾಹುಲ್ ಗಾಂಧಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ" ಎಂದು ಆಗ ಬಿಜೆಪಿ ಟೀಕೆ ಮಾಡಿತ್ತು.
ಪಟೇಲ್ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿರುವ ಸೌರಾಷ್ಟ್ರ ಭಾಗವು ಆಡಳಿತಾರೂಢ ಬಿಜೆಪಿ ಪಾಲಿನ ದೌರ್ಬಲ್ಯ ಅಂತ ಆರಂಭದಲ್ಲಿ ಗುರುತಿಸಲಾಗಿತ್ತು. ಬಿಜೆಪಿಯ ನಾಯಕ- ಮಾಜಿ ಮುಖ್ಯಮಂತ್ರಿ ಪಕ್ಷ ತೊರೆದು, ಗುಜರಾತ್ ಪರಿವರ್ತನ್ ಪಾರ್ಟಿ ಆರಂಭಿಸಿದ ಮೇಲೆ ಈ ಭಾಗದಲ್ಲಿ ಬಿಜೆಪಿಗೆ ಕೆಲವು ಸವಾಲುಗಳು ಎದುರಾಗಿದ್ದವು.
ಕಳೆದ ವರ್ಷ ಕೂಡ ಈ ಭಾಗದಲ್ಲಿ ಪಟೇಲ್ ಸಮುದಾಯದ ಆಕ್ರೋಶ ವ್ಯಕ್ತವಾಗಿತ್ತು ಮತ್ತು ಊನಾದಲ್ಲಿ ದಲಿತರು ತಿರುಗಿಬಿದ್ದಿದ್ದರು. ಬಿಜೆಪಿ ವಿರುದ್ಧ ಸಣ್ಣ ಪ್ರಮಾಣದ ದಂಗೆಯೇ ಏರ್ಪಟ್ಟಿತ್ತು. ಆದ್ದರಿಂದ ಈ ಬಾರಿ ಕಾಂಗ್ರೆಸ್ ಸೌರಾಷ್ಟ್ರ ಮತ್ತು ಕಛ್ ನ ಗುರಿ ಮಾಡಿಕೊಂಡು ಭಾರೀ ಪ್ರಚಾರ ನಡೆಸಿತ್ತು.
ಗುಜರಾತ್ : 99ಕ್ಕೆ ಬಿಜೆಪಿ ಸುಸ್ತು, 80ಕ್ಕೆ ಕಾಂಗ್ರೆಸ್ ಮಸ್ತು
ಗುಜರಾತ್ ನ ಒಟ್ಟು 182 ವಿಧಾನಸಭಾ ಕ್ಷೇತ್ರಗಳ ಪೈಕಿ 54 ಸ್ಥಾನಗಳು ಈ ಎರಡು ಭಾಗದಲ್ಲಿ ಬರುತ್ತವೆ. 2012ರ ಚುನಾವಣೆ ವೇಳೆ 54 ಸ್ಥಾನಗಳ ಪೈಕಿ 35 ಬಿಜೆಪಿ ಪಾಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 30 ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರೆ, ಬಿಜೆಪಿ 23 ಹಾಗೂ ಇತರರು 1 ಸ್ಥಾನದಲ್ಲಿ ಗೆದ್ದಿದ್ದಾರೆ.
ಇನ್ನು ಉತ್ತರ ಗುಜರಾತ್ ಭಾಗದಲ್ಲಿ ಕಾಂಗ್ರೆಸ್ 17, ಬಿಜೆಪಿ 14 ಹಾಗೂ ಇತರರು 1 ಸ್ಥಾನದಲ್ಲಿ ಗೆದ್ದಿದ್ದಾರೆ. ಸೌರಾಷ್ಟ್ರದಲ್ಲಿ ಸೋಮನಾಥ ದೇವಾಲಯ ಇದ್ದು, ಈ ಬಾರಿ ಚುನಾವಣೆಯಲ್ಲಿ ದೇವಾಲಯದ ವಿಚಾರವೂ ಭಾರೀ ಚರ್ಚೆಗೆ ಕಾರಣವಾಯಿತು. ಸೌರಾಷ್ಟ್ರ, ಕಛ್ ಭಾಗದಲ್ಲಿ ಕಾಂಗ್ರೆಸ್ ಬಲವಾಗಿ ಕಾಲೂರಿದೆ. ಅದನ್ನೇ ಆಸರೆಯಾಗಿ ಮಾಡಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳಬಹುದೇ ಕಾಂಗ್ರೆಸ್?