ಕಾಂಗ್ರೆಸ್ ನನ್ನ ಹತ್ಯೆಗೆ ಯತ್ನಿಸಿದೆ- ಮೋದಿ ಗಂಭೀರ ಆರೋಪ
'ಚಹಾ ಮಾರುವವನ ಸವಾಲನ್ನು ಎದುರಿಸಲು ಮುಖವಿಲ್ಲದ ಕಾಂಗ್ರೆಸ್ ರಾಜಕೀಯವಾಗಿ ನನ್ನನ್ನು ಮುಗಿಸಲು ಯತ್ನಿಸುತ್ತಿದೆ. ಇದಕ್ಕೆ ನಾನು ಬಗ್ಗುವುದಿಲ್ಲ' ಎಂದು ಅಹಮದಾಬಾದಿನಲ್ಲಿ ಬೃಹತ್ ಪ್ರಚಾರ ಸಭೆಯನ್ನುದ್ದೇಶಿಸಿ ಮೋದಿ ಇಂದು ಗುಡುಗಿದ್ದಾರೆ.
ನನ್ನ ಕಥೆ ಮುಗಿಸಲು ಸಂಚು: 'ನನ್ನನ್ನು ಕಾಂಗ್ರೆಸ್ಸಿನ ಅನೇಕ ನಾಯಕರು, ಸಿಬಿಐ ಸೇರಿದಂತೆ ನಾನಾ ತನಿಖಾ ಸಂಸ್ಥೆಗಳ ಮೂಲಕ ನನ್ನ ಕಥೆ ಮುಗಿಸಲು ಸಂಚು ರೂಪಿಸಿದ್ದರು. ಆದರೆ, ಜನತೆಯ ಆಶೀರ್ವಾದ ಇರುವವರೆಗೂ ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ' ಎಂದು ಮೋದಿ ಹೇಳಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿರುವ ಬಹುತೇಕ ಸಚಿವರು ಅಸಮಾಧಾನಗೊಂಡಿದ್ದಾರೆ. ಈ ಅವಧಿಯಲ್ಲಿ ನಡೆದಿರುವ ಹಗರಣಗಳು ಮತ್ತು ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೆ ಖಚಿತವಾಗಿದೆ. ಹೀಗಾಗಿಯೇ ಬಹುತೇಕ ಎಲ್ಲರೂ ನಿರಾಶೆಗೊಂಡಿದ್ದಾರೆ ಎಂದೂ ಅವರು ತಿಳಿಸಿದರು.
'ನಾನು ಹುಟ್ಟಿರುವುದೇ ಜನರ ಸೇವೆ ಮತ್ತು ನಾಡ ರಕ್ಷಣೆಗಾಗಿ. ಮತ್ತೆ ಮತ್ತೆ ಹುಟ್ಟಿ ಬಂದರೂ ಜನತೆಯ ಸೇವೆ ಮಾಡಲು ಸಿದ್ಧನಿದ್ದೇನೆ. ದೇಶದಲ್ಲಿ ಕೋಟ್ಯಂತರ ಯುವಕರಿದ್ದರೂ ಅವರಿಗೆ ಕೌಶಲ್ಯಾಭಿವೃದ್ಧಿ ಒದಗಿಸದೆ ನಿರುದ್ಯೋಗಿಗಳನ್ನಾಗಿ ಮಾಡಲಾಗಿದೆ. ಇದಕ್ಕೆ ಕಾಂಗ್ರೆಸ್ ಕಾರಣ' ಎಂದು ಅವರು ಜರಿದರು.