BSP ಜೊತೆ ಮೈತ್ರಿಗೆ ಕಾಂಗ್ರೆಸ್ ನಿಂದಲೇ ಹೈಕಮಾಂಡ್ ಗೆ ಒತ್ತಡ
ಭೋಪಾಲ್, ಸೆಪ್ಟೆಂಬರ್ 27: ಕೆಲವು ರಾಜ್ಯಗಳ ವಿಧಾನಸಭೆ ಮತ್ತು ಲೋಕಸಬೆ ಚುನಾವಣೆಗಳಲ್ಲಿ ಬಹುಜನ ಸಮಾಜವಾದಿ(ಬಿಎಸ್ಪಿ) ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಸ್ವತಃ ಕಾಂಗ್ರೆಸ್ ಮುಖಂಡರೇ ಹೈಕಮಾಂಡ್ ಗೆ ಒತ್ತಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಮಾಯಾವತಿ ಅವರ ಪಕ್ಷ ತನ್ನದೇ ಆದ ಪ್ರಸಿದ್ಧಿ ಗಳಿಸಿದೆ. ಆದ್ದರಿಂದ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಕಾಂಗ್ರೆಸ್ಸಿಗೇ ಲಾಭ ಎಂಬುದು ಕಾಂಗ್ರೆಸ್ ನ ಈ ಭಾಗದ ಮುಖಂಡರ ಸಲಹೆ.
ಕಾಂಗ್ರೆಸ್ಗೆ ಬಿಗ್ ಶಾಕ್ ಕೊಟ್ಟ ಮಾಯಾವತಿಯ ಸ್ವತಂತ್ರ ನಿರ್ಧಾರ
ಆದರೆ ಕಳೆದ ವಾರವಷ್ಟೇ ಬಿಎಸ್ಪಿ ಕಾಂಗ್ರೆಸ್ ಅನ್ನು ದೂರವಿಟ್ಟು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ತನ್ನ 22 ಅಭ್ಯರ್ಥಿಗಳನ್ನು ಮಾಯಾವತಿ ಘೋಷಿಸಿರುವುದು ಕಾಂಗ್ರೆಸ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಮೈತ್ರಿ ಇಲ್ಲದಿದ್ದರೆ ಬಿಜೆಪಿಗೇ ಲಾಭ!
ಬಿಎಸ್ಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದೇ ಆದಲ್ಲಿ, ಇದರ ಲಾಭವನ್ನು ಬಿಜೆಪಿ ಪಡೆದು ಮತ್ತೆ ಅಧಿಕಾರಕ್ಕೆ ಬರಬಹುದು. ಆದ್ದರಿಂದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದಕ್ಕಾದರೂ ಕಾಂಗ್ರೆಸ್ ಬಿಎಸ್ಪಿ ಜೊತೆ ಮೈತ್ರಿಗೆ ಮುಂದಾದರೆ ಅಚ್ಚರಿಯಿಲ್ಲ. ಇದೇ ವರ್ಷದ ಡಿಸೆಂಬರ್ ನಲ್ಲಿ ಮಧ್ಯಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
ಛತ್ತೀಸ್ ಗಢದಲ್ಲಿ ಜನತಾ ಕಾಂಗ್ರೆಸ್- ಬಿಎಸ್ ಪಿ ದೋಸ್ತಿ: ಮಾಯಾವತಿ
ಯಾವ್ಯಾವ ರಾಜ್ಯದಲ್ಲಿ ಮೈತ್ರಿ ಸಾಧ್ಯತೆ?
ಬಿಎಸ್ಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮಧ್ಯಪ್ರದೇಶ, ರಾಜಸ್ಥಾನ, ಪುಂಜಾಬ್, ಹರ್ಯಾಣ ಮತ್ತು ಮಹಾರಾಷ್ಟ್ರ ಗಳ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲೂ ಈ ಎಲ್ಲಾ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಳ್ಳಬಹುದು. ಮೈತ್ರಿ ಮಾಡಿಕೊಳ್ಳುವುದೇ ಒಳ್ಳೆಯದು ಎಂದು ಪಕ್ಷದ ಕಾರ್ಯಕರ್ತರು, ಮುಖಂಡರೇ ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸುತ್ತಿದ್ದಾರೆ.
ಏಕಾಂಗಿಯಾಗಿ ಚುನಾವಣೆ ಎದುರಿಸಲು ಸಿದ್ಧ: ಮಾಯಾವತಿ
ಮೈತ್ರಿಗೆ ಕಂಟಕ ಯಾರು?
ಕಾಂಗ್ರೆಸ್ ಮತ್ತು ಬಿಎಸ್ಪಿಗೆ ಮೈತ್ರಿಗೆ ಕಂಟಕವಾಗುತ್ತಿರುವುದು ಅಸಲಿಗೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರೇ. ಏಕೆಂದರೆ ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ ಕಾಂಗ್ರೆಸ್ ಪಕ್ಷವು ಬಿಎಸ್ಪಿಗೆ ಅದು ಕೇಳಿದಷ್ಟು ಅಭ್ಯರ್ಥಿಗಳಿಕೆ ಟಿಕೆಟ್ ನೀಡಬೇಕು ಎಂಬ ಷರತ್ತು ವಿಧಿಸಿದೆ. ಅದಕ್ಕೆ ಒಪ್ಪಿಕೊಂಡರೆ ಕಾಂಗ್ರೆಸ್ ಗೇ ನಷ್ಟ. ಆದ್ದರಿಂದ ಅಡಕತ್ತರಿಯಲ್ಲಿ ಸಿಕ್ಕಂತೆ ಕಾಂಗ್ರೆಸ್ ಯಾವ ನಿರ್ಧಾರಕ್ಕೂ ಬರಲಾಗದೆ ಒದ್ದಾಡುತ್ತಿದೆ.
ಕಾಂಗ್ರೆಸ್ ಗೊಂದಲವೇನು?
ಬಿಎಸ್ಪಿ ಪಕ್ಷವು ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ ಲೋಕಸಭೆ ಚುನಾವಣೆಯಲ್ಲೂ ತಾನು ಕೇಳಿದಷ್ಟು ಸೀಟು ನೀಡಬೇಕು ಎಂಬ ಷರತ್ತು ವಿಧಿಸಿದೆ. ಆದರೆ ಕಾಂಗ್ರೆಸ್ ಗೆ ಅದು ಇಷ್ಟವಿಲ್ಲ. ಸದ್ಯಕ್ಕೆ ವಿಧಾನಸಭೆ ಚುನಾವಣೆ ಮುಗಿಯಲಿ, ನಂತರ ಲೋಕಸಭೆ ಚುನಾವಣೆಯ ಬಗ್ಗೆ ಚರ್ಚಿಸೋಣ ಎಂಬುದು ಕಾಂಗ್ರೆಸ್ ಅಂಬೋಣ. ಆದರೆ ಇದನ್ನು ಕೇಳುವುದಕ್ಕೆ ಬಿಎಸ್ಪಿ ರೆಡಿಯಿಲ್ಲ.
ಯಾವ ಪಕ್ಷವನ್ನೂ ಕಾಂಗ್ರೆಸ್ ಮೈತ್ರಿಗೆ ಕರೆದಿಲ್ಲ!
230 ವಿಧಾನಸಭಾ ಕ್ಷೇತ್ರಗಳ ಮಧ್ಯಪ್ರದೇಶದಲ್ಲಿ ಮ್ಯಾಜಿಕ್ ನಂಬರ್ 116 ಅನ್ನು ಕಾಂಗ್ರೆಸ್ ಒಂಟಿಯಾಗಿ ಸ್ಪರ್ಧಿಸಿ ಪಡೆಯುವುದಕ್ಕೆ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಸ್ವತಃ ಕಾಂಗ್ರೆಸ್ಸೇ ಬಂದಿದೆ. ಆದ್ದರಿಂದ ಅದು ಬಿಎಸ್ಪಿ, ಎಸ್ಪಿ ಮತ್ತು ಗೊಂದ್ವಾನ ಗಣತಂತ್ರ ಪಕ್ಷ(ಜಿಜಿಪಿ) ಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ. ಆದರೆ ಈ ಕುರಿತು ಇದುವರೆಗೂ ಯಾರನ್ನೂ ಕಾಂಗ್ರೆಸ್ ಮೈತ್ರಿಗೆ ಕರೆದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡರು ತಿಳಿಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ಗೊಂದಲದಲ್ಲಿದ್ದು, ಯಾವುದೇ ನಿರ್ಧಾರಕ್ಕೆ ಬಂದಂತೆ ಕಾಣುತ್ತಿಲ್ಲ.