ಕಳಪೆ ಪ್ರದರ್ಶನದ ಸತ್ಯವನ್ನು ಕಾಂಗ್ರೆಸ್ ಒಪ್ಪಿಕೊಳ್ಳಲೇಬೇಕು: ತಾರೀಖ್ ಅನ್ವರ್
ನವದೆಹಲಿ, ನವೆಂಬರ್ 12: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೆಟ್ಟ ಪ್ರದರ್ಶನ ನೀಡಿದೆ ಎಂಬ ಸತ್ಯವನ್ನು ಪಕ್ಷ ಒಪ್ಪಿಕೊಳ್ಳಲೇಬೇಕು ಎಂದು ಕಾಂಗ್ರೆಸ್ ಮುಖಂಡ ಮತ್ತು ಪ್ರಧಾನ ಕಾರ್ಯದರ್ಶಿ ತಾರೀಖ್ ಅನ್ವರ್ ಹೇಳಿದ್ದಾರೆ.
ಸರಣಿ ಟ್ವೀಟ್ಗಳನ್ನು ಮಾಡಿರುವ ತಾರೀಖ್, ಚುನಾವಣೆಯಲ್ಲಿ ಕಾಂಗ್ರೆಸ್ನ ಕಳಪೆ ಪ್ರದರ್ಶನ ಮಹಾಘಟಬಂಧನ ಸರ್ಕಾರ ರಚನೆಯಿಂದ ವಂಚಿತವಾಗುವಂತೆ ಮಾಡಿತು ಎಂದಿದ್ದಾರೆ. ಪಕ್ಷದ ಈ ಹೀನಾಯ ಸೋಲಿನ ಬಗ್ಗೆ ತುರ್ತು ಮತ್ತು ಆಳವಾದ ಆತ್ಮಾವಲೋಕನ ನಡೆಸಬೇಕಿದೆ ಎಂದು ಸಲಹೆ ನೀಡಿದ್ದಾರೆ.
'ನಾವು ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ಕಾಂಗ್ರೆಸ್ನ ಕಳಪೆ ಪ್ರದರ್ಶನದಿಂದಾಗಿ ಬಿಹಾರವು ಮಹಾಘಟಬಂಧನ ಸರ್ಕಾರ ಹೊಂದುವುದರಿಂದ ವಂಚಿತವಾಯಿತು' ಎಂದು ತಾರೀಖ್ ಅನ್ವರ್ ಹೇಳಿದ್ದಾರೆ.
'ಕಾಂಗ್ರೆಸ್ ತಾನು ಎಲ್ಲಿ ಎಡವಿದ್ದು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಾಗೆಯೇ ಬಿಹಾರದಲ್ಲಿ ಎಐಎಂಐಎಂ ಪ್ರವೇಶ ಪಡೆದಿರುವುದು ಒಳ್ಳೆಯ ಸೂಚನೆಯಲ್ಲ. ಎಲ್ಲ ಮಾದರಿಯಲ್ಲಿನ ಕೋಮುವಾದವನ್ನೂ ಕಾಂಗ್ರೆಸ್ ವಿರೋಧಿಸುತ್ತದೆ. ಬಿಜೆಪಿಯು ಹಿಂದೂಗಳನ್ನು ಸೇರಿಸುವಂತೆಯೇ ಎಐಎಂಐಎಂ ಮುಸ್ಲಿಮರ ಬೆಂಬಲವನ್ನು ಕ್ರೋಡೀಕರಿಸುತ್ತದೆ. ಇಬ್ಬರೂ ಒಬ್ಬರಿಗೊಬ್ಬರು ನೆರವಾಗುತ್ತಾರೆ' ಎಂದು ಟೀಕಿಸಿದ್ದಾರೆ.
'ಇದು ಸಮಾಜಕ್ಕೆ ದೊಡ್ಡ ಪ್ರಮಾಣದಲ್ಲಿ ಒಳ್ಳೆಯ ಸಂಗತಿಯಲ್ಲ. ಜನಸಾಂದ್ರತೆ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಹೆಸರಾದ ಮುಸ್ಲಿಮರು ಇರುವ ಕೋಸಿ ಸೀಮಾಂಚಲದಲ್ಲಿ ಎಐಎಂಐಎಂ ತನ್ನ ಖಾತೆ ತೆರೆದಿದೆ. 70 ಸೀಟುಗಳಲ್ಲಿ ಸ್ಪರ್ಧಿಸಿ 51ರಲ್ಲಿ ಪಕ್ಷವು ಸೋಲು ಕಂಡಿರುವುದು ಭಾರಿ ಹಿನ್ನಡೆಯಾಗಿದೆ' ಎಂದಿದ್ದಾರೆ.