ದೇಶಕ್ಕೆ ಅನ್ನ ನೀಡುವ ರೈತರನ್ನು ಬೆಂಬಲಿಸುವುದು ನಮ್ಮ ಕರ್ತವ್ಯ: ರಾಹುಲ್ ಗಾಂಧಿ
ನವದೆಹಲಿ, ಡಿಸೆಂಬರ್ 5: ಕೃಷಿ ಕಾಯ್ದೆಗಳ ವಿರುದ್ದ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಮೂರು ವಿವಾದಾತ್ಮಕ ಕಠಿಣ ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆದುಕೊಳ್ಳುವಂತೆ ರೈತರಿಗೆ ಎಲ್ಲ ಭಾರತೀಯರೂ ಬೆಂಬಲ ವ್ಯಕ್ತಪಡಿಸುವಂತೆ ಕರೆ ನೀಡಿದ್ದಾರೆ.
ಬಿಹಾರದಲ್ಲಿ 2006ರಲ್ಲಿ ಎಪಿಎಂಸಿಗಳು ಮತ್ತು ಸರ್ಕಾರದ ಮಂಡಿಗಳು ಒಟ್ಟಿಗೆ ಹೇಗೆ ರದ್ದುಗೊಂಡವು ಮತ್ತು ಅದರ ಬಳಿಕ ರೈತರು ತಮ್ಮ ಉತ್ಪನ್ನಕ್ಕೆ ಕನಿಷ್ಠ ಬೆಂಬಲ ಬೆಲೆಯನ್ನು ಪಡೆದಿಲ್ಲ ಎಂಬ ಕುರಿತಾದ ವರದಿಗಳನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಹೊಸ ಕಾಯ್ದೆಗಳ ಮೂಲಕ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದರು.
ರೈತರ ಆದಾಯವನ್ನು ಅರ್ಧಕ್ಕಿಳಿಸಿದ ಸೂಟು ಬೂಟಿನ ಸರ್ಕಾರ: ರಾಹುಲ್ ಕಿಡಿ
'ಬಿಹಾರದ ರೈತರು ಎಂಎಸ್ಪಿ-ಎಪಿಎಂಸಿ ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಪ್ರಧಾನಿ ಇಡೀ ದೇಶವನ್ನು ಈ ಬಾವಿಗೆ ತಳ್ಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶಕ್ಕೆ ಅನ್ನ ನೀಡುವ ರೈತರನ್ನು ಬೆಂಬಲಿಸುವುದು ನಮ್ಮ ಕರ್ತವ್ಯ' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಎಪಿಎಂಸಿ ವ್ಯವಸ್ಥೆಯನ್ನು ರದ್ದುಗೊಳಿಸುವ ಕಾನೂನು ಒಂದು ಹೇಗೆ ರೈತರಿಗೆ ಪ್ರಯೋಜನ ನೀಡಲಿದೆ ಎಂಬ ಪ್ರಧಾನಿ ಮೋದಿ ಅವರ ವಿವಿಧ ಹೇಳಿಕೆಗಳನ್ನು ಜೋಡಿಸಲಾಗಿದೆ.
बिहार का किसान MSP-APMC के बिना बेहद मुसीबत में है और अब PM ने पूरे देश को इसी कुएँ में धकेल दिया है।
— Rahul Gandhi (@RahulGandhi) December 5, 2020
ऐसे में देश के अन्नदाता का साथ देना हमारा कर्तव्य है। pic.twitter.com/Err20Pp0kv
ಇತ್ತೀಚೆಗೆ ಮುಖ್ಯಮಂತ್ರಿಗಳ ಜತೆಗೆ ಸಭೆ ನಡೆಸಿದ್ದ ಪ್ರಧಾನಿ ಮೋದಿ ಅವರು ಬಿಹಾರದ ಉದಾಹರಣೆ ನೀಡಿದ್ದರು. 'ಎಪಿಎಂಸಿ ಕಾಯ್ದೆ ತೊಂದರೆಗಳನ್ನು ಸೃಷ್ಟಿಸಿತ್ತು. ಹೀಗಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ 14 ವರ್ಷಗಳ ಹಿಂದೆ ಅವುಗಳನ್ನು ರದ್ದುಗೊಳಿಸಿದ್ದರು' ಎಂದು ಹೇಳಿದ್ದರು.