ನಿಮ್ಮ ಆಡಳಿತ ವ್ಯವಸ್ಥೆಗೆ ಭಾರತವನ್ನು ಬಲಿಪಶು ಮಾಡಬೇಡಿ; ರಾಹುಲ್ ಗಾಂಧಿ
ನವದೆಹಲಿ, ಏಪ್ರಿಲ್ 26: ದೇಶದಲ್ಲಿ ಕೊರೊನಾ ಮಿತಿ ಮೀರುತ್ತಿದ್ದು, ಈ ಸಮಯದಲ್ಲಿ ಎಲ್ಲರಿಗೂ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.
ಸೋಮವಾರ ಉಚಿತ ಕೊರೊನಾ ಲಸಿಕೆಯ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿರುವ ರಾಹುಲ್ ಗಾಂಧಿ, "ಭಾರತವನ್ನು ಬಿಜೆಪಿ ಆಡಳಿತ ವ್ಯವಸ್ಥೆಯ ಬಲಿಪಶು ಮಾಡಬೇಡಿ" ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, "ಇನ್ನು ಕೊರೊನಾ ನಿರ್ವಹಣೆ ಕುರಿತು ಚರ್ಚೆಗಳು ಸಾಕು. ದೇಶದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಬೇಕು" ಎಂದು ಆಗ್ರಹಿಸಿದ್ದಾರೆ.
ಅಗತ್ಯವಿಲ್ಲದ ಯೋಜನೆಗಳಿಗೆ ಖುರ್ಚು ಮಾಡುವ ಹಣವನ್ನು ಕೊರೊನಾ ಲಸಿಕೆ ಉತ್ಪಾದನೆಗೆ ಬಳಸಿ: ರಾಹುಲ್
ಭಾನುವಾರ ಪ್ರಧಾನಿ ಮೋದಿ ಮನ್ ಕಿ ಬಾತ್ ಕುರಿತು ಪ್ರತಿಕ್ರಿಯಿಸಿದ್ದ ರಾಹುಲ್, "ಕೊರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಸಂದರ್ಭ ಜನರ ಬಗ್ಗೆ ಮಾತನಾಡುವುದು ಬಹಳ ಅವಶ್ಯಕ. ಈ ಕಠಿಣ ಸಂದರ್ಭದಲ್ಲಿ ಜವಾಬ್ದಾರಿಯುತ ನಾಗರಿಕರ ಅವಶ್ಯಕತೆಯಿದೆ. ಕಾಂಗ್ರೆಸ್ನ ಎಲ್ಲಾ ಸದಸ್ಯರು ರಾಜಕೀಯ ಕೆಲಸಗಳನ್ನು ಬಿಟ್ಟು ಜನರಿಗೆ ನೆರವು ಒದಗಿಸಬೇಕು" ಎಂದು ಮನವಿ ಮಾಡಿದ್ದರು.
ದೆಹಲಿ, ಮಹಾರಾಷ್ಟ್ರ, ಹರಿಯಾಣ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳು ತಮ್ಮ ರಾಜ್ಯದ ಜನರಿಗೆ ಉಚಿತವಾಗಿ ಲಸಿಕೆ ನೀಡಲು ನಿರ್ಧರಿಸಿವೆ.
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೇ 1ರಿಂದ ಕೊರೊನಾ ಲಸಿಕೆ ನೀಡುವುದಾಗಿ ಕೇಂದ್ರ ಏಪ್ರಿಲ್ 19ರಂದು ಘೋಷಿಸಿತ್ತು. ಕೊರೊನಾ ಲಸಿಕೆ ಉತ್ಪಾದಕರಿಂದಲೇ ರಾಜ್ಯ ಸರ್ಕಾರಗಳು ಲಸಿಕೆಯನ್ನು ನೇರವಾಗಿ ಪಡೆಯಬಹುದು ಎಂದು ತಿಳಿಸಿ, ಲಸಿಕೆ ಉತ್ಪಾದಕರು ಶೇ 50ರಷ್ಟು ಲಸಿಕೆಯನ್ನು ರಾಜ್ಯಗಳಿಗೆ ನೀಡಬಹುದು ಎಂದು ತಿಳಿಸಿತ್ತು. ಈ ಘೋಷಣೆ ನಂತರ ಹಲವು ರಾಜ್ಯಗಳು, ತಮ್ಮ ರಾಜ್ಯದ ಜನತೆಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದವು.