ಶತ್ರು ರಾಷ್ಟ್ರದಲ್ಲಿ ಕೂತು ಮೋದಿ ವಿರುದ್ದ ಹಿರಿಯ ಕಾಂಗ್ರೆಸ್ಸಿಗನ ಅಸಹಿಷ್ಣುತೆ
ಕೆಲವೊಂದು ರಾಜಕೀಯ ಮುಖಂಡರಿಗೆ ಸದಾ ಸುದ್ದಿಯಲ್ಲಿರಬೇಕು, ತಮ್ಮ ಬಾಯಿಚಪಲದಿಂದಾಗಿ ಯಾರಿಗೆ ಮುಜುಗರ ಆದರೂ ಇವರಿಗೆ ಅದರ ಅರಿವು ಇರುವುದಿಲ್ಲ, ಬೇಕಾಗಿಯೂ ಇರುವುದಿಲ್ಲ.
ಇಂತಹ ಅಗ್ರ ಪಂಕ್ತಿಯ ರಾಜಕೀಯ ಮುಖಂಡರಿಗೆ ವಿರೋಧಿಗಳನ್ನು ಕೆಣಕಲು ಸ್ವದೇಶ ಅಥವಾ ವಿದೇಶ ಎನ್ನುವುದು ಗಣನೆಗೆ ಬರುವುದಿಲ್ಲ. ಎಲ್ಲಿ ಆಖಾಡಕ್ಕೆ ಇಳಿಯಬೇಕು, ಎಲ್ಲಿ ಏನು ಮಾತನಾಡಬೇಕು ಎನ್ನುವ ಕನಿಷ್ಠ ಜ್ಞಾನವಿರದ ಇವರೆಲ್ಲಾ ನಮ್ಮ ನಾಯಕರು!
ಹಿರಿಯ ಕಾಂಗ್ರೆಸ್ಸಿಗ, ಮಾಜಿ ಕೇಂದ್ರ ಪಂಚಾಯತ್ ರಾಜ್ ಸಚಿವ ಮಣಿಶಂಕರ್ ಅಯ್ಯರ್ ಉಗ್ರರ ಬಗ್ಗೆ, ಮೋದಿ ಬಗ್ಗೆ, ಉಗ್ರರ ವಿರುದ್ದ ಕಾರ್ಯಾಚರಣೆಯ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿರುವುದು ಹೊಸದೇನೂ ಅಲ್ಲ.
ಆದರೆ, ವೈರಿ ರಾಷ್ಟ್ರದಲ್ಲಿ ಕೂತು ನಮ್ಮ ಪ್ರಧಾನಿಯ ಬಗ್ಗೆ ಕೇವಲವಾಗಿ ಮಾತನಾಡಬಾರದು ಎನ್ನುವ ಪರಿಜ್ಞಾನ ಇಲ್ಲದೇ ಇರುವುದು ನಮ್ಮ ರಾಜಕೀಯ ವ್ಯವಸ್ಥೆಯ ದುರಂತವೋ ಅಥವಾ ಅಧಿಕಾರ ಇಲ್ಲ ಎನ್ನುವ ದಾಹವೋ?
ಭಾರತದ ವಿರುದ್ದದ ಎಲ್ಲಾ ಉಗ್ರ ಚಟುವಟಿಕೆಯ ಪ್ಲಾನ್ ಹೆಚ್ಚುಕಮ್ಮಿ ಪಾಕಿಸ್ತಾನದಲ್ಲಿ ನಡೆಯುತ್ತಿದೆ ಅನ್ನೋ ನಗ್ನಸತ್ಯ ತಿಳಿದಿದ್ದರೂ, ಪಾಕಿಸ್ತಾನದಲ್ಲಿ ಕೂತು ಅಲ್ಲಿನ ಮಾಧ್ಯಮದ ಜೊತೆ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಮಣಿಶಂಕರ್ ಅಯ್ಯರ್ ಕೀಳುಮಟ್ಟದ ಹೇಳಿಕೆಯನ್ನು ನೀಡಿದ್ದಾರೆ.
ಮಣಿಶಂಕರ್ ಅಯ್ಯರ್ ಮೋದಿ ಬಗ್ಗೆ ಹೇಳಿದ್ದು, ಈ ಹಿಂದಿನ ಅವರ ಮತ್ತು ಕಾಂಗ್ರೆಸ್ಸಿನ ಮತ್ತೊಬ್ಬ ಹಿರಿಯ ಮುಖಂಡರೊಬ್ಬರ ಬೇಜಾಬ್ದಾರಿ ಹೇಳಿಕೆ, ಸ್ಲೈಡಿನಲ್ಲಿ..
ಪಾಕ್ ಟಿವಿಯ ಸಂದರ್ಶನದಲ್ಲಿ ಮಣಿಶಂಕರ್
ಕಾಶ್ಮೀರದ ವಿಚಾರದ ಬಗ್ಗೆ ಸ್ಥಳೀಯ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಮಣಿಶಂಕರ್ ಅಯ್ಯರ್, ಇನ್ಹೇ ಹಟಾಯಿಯೇ, ಹಮೆ ಲೇ ಆಯಿಯೇ ಎಂದು ಅಸಂಬದ್ದ ಹೇಳಿಕೆಯನ್ನು ನೀಡಿದ್ದಾರೆ. ಆ ಕೆಲಸ ನಿಮ್ಮಿಂದ ಆಗಬೇಕೆಯೇ ಹೊರತು ನಮ್ಮಿಂದಲ್ಲ ಎಂದು ಮಾಧ್ಯಮ ಪ್ರತಿನಿಧಿ ಉತ್ತರಿಸಿದಾಗ ಮಣಿಶಂಕರ್ ಅಯ್ಯರ್ ನಿರುತ್ತರರಾಗಿದ್ದಾರೆ.
ಪಾಕ್ ಜೊತೆಗಿನ ಸಂಬಂಧ
"ಉಭಯ ದೇಶ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಶಾಂತಿ ಮಾತುಕತೆ ಪುನಾರಂಭವಾಗಬೇಕಾದರೆ ಭಾರತದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರಬೇಕು. ಬಿಜೆಪಿ ಅಧಿಕಾರದಲ್ಲಿ ಇದ್ದರೆ ಆಗುವುದಿಲ್ಲ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸಿ, ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ"ಎಂದು ಮನವಿ ಮಾಡಿ, ಮಣಿಶಂಕರ್ ಅಯ್ಯರ್ ರಾಜಕೀಯದ ಬಾಲ್ಯಾವಸ್ಥೆಗೆ ಇಳಿದಿದ್ದಾರೆ.
ವೀರ ಸಾರ್ವಕರ್ ಬಗ್ಗೆಯೂ ಹೇಳಿದ್ದರು
ಅಂಡಮಾನ್ ಜೈಲಿನಲ್ಲಿದ್ದ ಮೊಹಮ್ಮದ್ ಆಲಿ ಜಿನ್ನಾ ಮತ್ತು ವೀರ ಸಾರ್ವಕರ್ ನಡುವೆ ಏನೂ ವ್ಯತ್ಯಾಸವಿಲ್ಲ. ಇಬ್ಬರೂ ಒಂದೇ ಎಂದು ಈ ಹಿಂದೆ ಅಯ್ಯರ್ ಹೇಳಿದ್ದರು.
ಲೋಕಸಭೆಯ ಚುನಾವಣೆಯ ವೇಳೆ
ಇಂದಿನ ಕಾಲಘಟ್ಟದಲ್ಲಿ ಟೀ ಮಾರುವವರು ಪ್ರಧಾನಿಯಾಗಲು ಸಾಧ್ಯವಿಲ್ಲ, ಅವರಿಗೆ ಬೇಕಾದರೆ ಕಾಂಗ್ರೆಸ್ ವತಿಯಿಂದ ನಾವೇ ಟೀಸ್ಟಾಲ್ ಹಾಕಿಕೊಡುತ್ತೇವೆ ಎಂದು ಪ್ರಧಾನಮಂತ್ರಿ ಅಭ್ಯರ್ಥಿಯಾಗಿದ್ದ ಮೋದಿ ವಿರುದ್ದ ಅಯ್ಯರ್ ಅಣಕವಾಡಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.
ಮುಸ್ಲಿಂ ವಿರೋಧಿ ಫೋಬಿಯಾ
ಪ್ರಮುಖವಾಗಿ ಯುರೋಪ್ ರಾಷ್ಟ್ರಗಳು ಮುಸ್ಲಿಂ ವಿರೋಧಿ ಧೋರಣೆಯಿಂದ ಹೊರಬರಬೇಕು. ಇವರ ಮನಸ್ಥಿತಿಯಿಂದಾಗಿಯೇ ಅಲ್ಲಿ ಉಗ್ರರ ಚಟುವಟಿಕೆ ಹೆಚ್ಚಾಗುತ್ತಿದೆ. ಫ್ರಾನ್ಸ್ ನಲ್ಲಿರುವ ಮುಸ್ಲಿಂರಿಗೆ ಸೂಕ್ತ ಭದ್ರತೆ ಸಿಗಬೇಕು - ಮಣಿಶಂಕರ್ ಅಯ್ಯರ್
ಸಲ್ಮಾನ್ ಖುರ್ಷಿದ್
ಮೋದಿಯವರನ್ನು ಈ ಹಿಂದೆ ನಪುಂಸಕ ಎಂದು ಜರಿದಿದ್ದ ಖುರ್ಷಿದ್, ಮುಂಬೈ ಸ್ಪೋಟದ ರೂವಾರಿ ಅಜ್ಮಲ್ ಕಸಬ್ ನನ್ನು ಗಲ್ಲಿಗೇರಿಸಿದಾಗ ಆತನ ಪರವಾಗಿ ದುಃಖದ ಮಾತನ್ನಾಡಿ, ಕ್ಷಮಾಪಣೆ ನೀಡಬೇಕಿತ್ತು ಎಂದು ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.