ಲೋಕಪಾಲರ ಆಯ್ಕೆ: ಸಮಿತಿ ಸಭೆಗೆ ಹಾಜರಾಗಲು ಖರ್ಗೆ ನಕಾರ
ನವದೆಹಲಿ, ಮಾರ್ಚ್ 15: ಲೋಕಪಾಲ್ ಆಯ್ಕೆಗೆ ವಿಶೇಷ ಆಹ್ವಾನಿತರಾಗಿ ನೀಡಿರುವ ಕೇಂದ್ರ ಸರ್ಕಾರದ ಆಹ್ವಾನವನ್ನು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಏಳನೇ ಬಾರಿ ತಿರಸ್ಕರಿಸಿದ್ದಾರೆ.
ಭ್ರಷ್ಟಾಚಾರ ನಿಗ್ರಹಕ್ಕೆಂದು ರಚಿಸುವ ಲೋಕಪಾಲ್ಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಸಲುವಾಗಿ ಆಯ್ಕೆ ಸಮಿತಿಯು ಶುಕ್ರವಾರ ಸಭೆ ಸೇರಬೇಕಿತ್ತು.
ಲೋಕಪಾಲ ಮಸೂದೆ ಜಾರಿ ಭರವಸೆ ಅಣ್ಣಾ ಹಜಾರೆ ಉಪವಾಸ ಅಂತ್ಯ
ಲೋಕಪಾಲರ ನೇಮಕಕ್ಕೆ ಆಯ್ಕೆ ಸಮಿತಿಯು ಸಭೆ ಸೇರಲು ಹತ್ತು ದಿನಗಳ ಒಳಗೆ ಒಂದು ದಿನಾಂಕವನ್ನು ಆಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿತ್ತು.
ಆದರೆ ಕೇಂದ್ರದ ಆಹ್ವಾನವನ್ನು ತಿರಸ್ಕರಿಸಿರುವ ಖರ್ಗೆ, 'ಲೋಕಪಾಲರ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿಶೇಷ ಆಹ್ವಾನಿತರಿಗೆ ಯಾವುದೇ ಅಧಿಕಾರವಿಲ್ಲ ಮತ್ತು ಇಂತಹ ಗಂಭೀರ ವಿಚಾರದಲ್ಲಿ ವಿರೋಧಪಕ್ಷವನ್ನು ಧ್ವನಿ ಇಲ್ಲದಂತೆ ಮಾಡಿರುವುದನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಲೋಕಪಾಲರ ನೇಮಕ: ಕೇಂದ್ರದ ಶೋಧನಾ ಸಮಿತಿಯಲ್ಲಿ ಇಬ್ಬರು ಕನ್ನಡಿಗರು
'ವಿಪಕ್ಷ ಸ್ಥಾನದಲ್ಲಿರುವ ಅತ್ಯಂತ ದೊಡ್ಡ ಪಕ್ಷಕ್ಕೆ ಲೋಕಪಾಲ ಆಯ್ಕೆ ಸಮಿತಿಯ ಸದಸ್ಯತ್ವ ನೀಡುವ ಸಲುವಾಗಿ ಲೋಕಪಾಲ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು 2014ರಿಂದಲೂ ಸರ್ಕಾರ ಯಾವುದೇ ಪ್ರಯತ್ನ ನಡೆಸಿಲ್ಲ' ಎಂದು ಖರ್ಗೆ ಆರೋಪಿಸಿದ್ದಾರೆ.