ತಂದೆಗಾದ ಅವಮಾನ ತನಗೂ: ಕಾಂಗ್ರೆಸ್ ಮೇಲೆ ಜ್ಯೋತಿರಾದಿತ್ಯ ಸಿಂಧಿಯಾ ಭಾರೀ ಸಿಟ್ಟಿಗೆ ಇದಾ ಕಾರಣ?
ತಂದೆಗಾದ ಅವಮಾನ ತನಗೂ:ಕಾಂಗ್ರೆಸ್ ಮೇಲೆ ಸಿಂಧಿಯಾ ಸಿಟ್ಟಿಗೆ ಇದಾ ಕಾರಣ?
ಒಂದು ಕಡೆ ಲೋಕಸಭಾ ಚುನಾವಣೆಯ ಹೀನಾನ ಸೋಲಿನಿಂದ ಇನ್ನೂ ಹೊರಬರಲು ಒದ್ದಾಡುತ್ತಿರುವುದು, ಇನ್ನೊಂದೆಡೇ, ಪಕ್ಷದ ಹಿರಿಯ ಮುಖಂಡರು, ಪ್ರಧಾನಿ ಮೋದಿಯವನ್ನು ಸಮರ್ಥಿಸಿಕೊಳ್ಳುತ್ತಿರುವುದು, ಕಾಂಗ್ರೆಸ್ಸಿಗೆ ನುಂಗಲಾರದ ತುತ್ತಾಗುತ್ತಿದೆ.
ಇತ್ತ, ಬಿಜೆಪಿ, ಯುವ ಸಮುದಾಯದವರನ್ನು ಮುನ್ನಲೆಗೆ ತರುತ್ತಿದ್ದರೆ, ಕಾಂಗ್ರೆಸ್ ಇನ್ನೂ ಹಳೆ ತಲೆಗಳಿಗೆ ಮಣೆ ಹಾಕುತ್ತಿರುವುದು, ಪಕ್ಷದ ಯುವ ಸಮುದಾಯದ ಮುಖಂಡರ ಬೇಸರಕ್ಕೆ ಕಾರಣವಾಗಿದೆ. ಎಐಸಿಸಿ ಅಧ್ಯಕ್ಷ ಹುದ್ದೆಗೆ ಹಲವು ಯುವ ಮುಖಂಡರ ಹೆಸರು ಕೇಳಿಬಂದರೂ, ಹಿರಿಯರ ಒತ್ತಾಯದ ಮೇರೆಗೆ, ಕೊನೆಗೂ, ಸೋನಿಯಾ ಗಾಂಧಿಯನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.
ಇದರಿಂದಾಗಿ, ಪಕ್ಷದ ನಿಷ್ಟಾವಂತ ಎಂದೇ ಕರೆಯಲ್ಪಡುವ ಮತ್ತು ರಾಹುಲ್ ಗಾಂಧಿ ಆಪ್ತವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಜ್ಯೋತಿರಾದಿತ್ಯ ಸಿಂಧಿಯಾ, ಇತ್ತೀಚಿನ ದಿನಗಳಲ್ಲಿ ಪಕ್ಷದ ಚಟುವಟಿಕೆಗಳಿಂದ ಹಿಂದಕ್ಕೆ ಸರಿಯುತ್ತಿದ್ದಾರೆ. ಸಿಂಧಿಯಾ ಹೆಸರು ಕೂಡಾ, ಎಐಸಿಸಿ ಅಧ್ಯಕ್ಷ ಹುದ್ದೆಗೆ ಕೇಳಿಬರುತ್ತಿತ್ತು. ಜ್ಯೋತಿರಾದಿತ್ಯ ಸಿಂಧಿಯಾ ತಂದೆ ಮಾಧವರಾವ್ ಸಿಂಧಿಯಾಗೂ ಇದೇ ರೀತಿ ಅವಮಾನ ಮಾಡಲಾಗಿತ್ತು.
ಕಾಂಗ್ರೆಸ್ ಗೆ ಗುಡ್ ಬೈ ಹೇಳಲಿದ್ದಾರಾ ಜ್ಯೋತಿರಾದಿತ್ಯ ಸಿಂದಿಯಾ?
ಮಧ್ಯಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಜೊತೆಗಿನ ಜಿದ್ದಾಜಿದ್ದಿಯ ಫೈಟ್ ನಂತರ ಅಧಿಕಾರಕ್ಕೆ ಬಂದಿತ್ತು. ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಸಿಂಧಿಯಾಗೆ ಕಾಂಗ್ರೆಸ್ ಮೇಲೆ ಬೇಸರ ಆಗಲು ಆರಂಭವಾಗಿದ್ದೇ ಅಲ್ಲಿಂದ.
ಕಮಲ್ ನಾಥ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು
ಸಿಎಂ ಆಯ್ಕೆಯ ವಿಚಾರದಲ್ಲಿ ಬೇಸರಿಸಿಕೊಂಡಿದ್ದ ಸಿಂಧಿಯಾ ಜೊತೆ, ಸೋನಿಯಾ, ಪ್ರಿಯಾಂಕ, ರಾಹುಲ್ ಗಾಂಧಿ ಸಾಲುಸಾಲು ಮಾತುಕತೆಯ ನಂತರ ಇವರು ಸಿಎಂ ಹುದ್ದೆಯಿಂದ ಹಿಂದಕ್ಕೆ ಸರಿದಿದ್ದರು, ಕಮಲ್ ನಾಥ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಇದಾದ ನಂತರ ಲೋಕಸಭಾ ಚುನಾವಣೆಯಲ್ಲಿ, ಪಕ್ಷದ ಟಿಕೆಟ್ ನೀಡುವ ವಿಚಾರದಲ್ಲಿ ಮತ್ತೆ ಕಮಲ್ ನಾಥ್ ಗೆ ಮೇಲುಗೈ ಸಾಧಿಸಿದ್ದರಿಂದ, ಸಿಂಧಿಯಾ ಮತ್ತೆ ಬೇಸರಿಸಿಕೊಳ್ಳಲು ಕಾರಣ.
ಅರ್ಜುನ್ ಸಿಂಗ್ ಮತ್ತು ಮಾಧವರಾವ್ ಸಿಂಧಿಯಾ
ಸುಮಾರು ಮೂರು ದಶಕಗಳ ಹಿಂದೆ, ಮಧ್ಯಪ್ರದೇಶದಲ್ಲಿ ಅರ್ಜುನ್ ಸಿಂಗ್ ಮತ್ತು ಮಾಧವರಾವ್ ಸಿಂಧಿಯಾ ನಡುವೆ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಪಾರುಪತ್ಯ ಸ್ಥಾಪಿಸಲು ಪೈಪೋಟಿ ನಡೆಯುತ್ತಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ, ಸಿಂಧಿಯಾ ಬದಲು ಅರ್ಜುನ್ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು.
ಮೋದಿ ಸರ್ಕಾರ ಬೆಂಬಲಿಸಿದ ರಾಹುಲ್ ಆಪ್ತ ಜ್ಯೋತಿರಾದಿತ್ಯ ಸಿಂದಿಯಾ!
ಅರ್ಜುನ್ ಸಿಂಗ್ ರಾಜೀನಾಮೆ
ಆದರೆ, ಹಗರಣವೊಂದರಲ್ಲಿ ಅರ್ಜುನ್ ಸಿಂಗ್ ಸಿಲುಕಿ ರಾಜೀನಾಮೆ ನೀಡುವ ಪ್ರಸಂಗ ಎದುರಾಯಿತು. ಆಗ, ಮಾಧವರಾವ್ ಸಿಂಧಿಯಾ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿತ್ತು. ಆದರೆ, ಕೊನೇ ಕ್ಷಣದಲ್ಲಿ ಆ ಜಾಗಕ್ಕೆ ಮೋತಿಲಾಲ್ ವೋರಾ ಅವರನ್ನು ಸಿಎಂ ಅನ್ನಾಗಿ ಮಾಡಿ, ಕಾಂಗ್ರೆಸ್, ಮಾಧವರಾವ್ ಸಿಂಧಿಯಾಗೆ ಅವಮಾನ ಮಾಡಿತ್ತು.
ಜ್ಯೋತಿರಾದಿತ್ಯ ಸಿಂಧಿಯಾ ಮೂಲೆಗುಂಪು
ಈಗ, ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಕೂಡಾ, ಅದೇ ರೀತಿ ಮೂಲೆಗುಂಪು ಮಾಡಲು, ಮಧ್ಯಪ್ರದೇಶದ ಒಂದು ಗುಂಪು ವ್ಯವಸ್ಥಿತ ಪ್ರಯತ್ನ ನಡೆಸುತ್ತಿದೆ. ಜೊತೆಗೆ, ಈ ಪ್ರಯತ್ನದಲ್ಲಿ ಯಶಸ್ಸನ್ನು ಕಾಣುತ್ತಿರುವುದರಿಂದ, ಸಿಂಧಿಯಾ, ಕಾಂಗ್ರೆಸ್ ತೊರೆಯುವ ಚಿಂತನೆಯನ್ನು ಆರಂಭಿಸಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ.
ಉತ್ತರ ಪ್ರದೇಶದಲ್ಲಿ ಪಕ್ಷ ಸಂಘಟನೆಗೆ ನೇಮಕ
ಸಿಂಧಿಯಾಗೆ ಮೊದಲು ಸಿಎಂ, ಅದಾಗದ ನಂತರ ಡಿಸಿಎಂ ಹುದ್ದೆ ನೀಡುವ ಆಮಿಷವೊಡ್ಡಲಾಗಿತ್ತು. ಅವೆರಡೂ ಆಗದಿದ್ದಾಗ, ಉತ್ತರ ಪ್ರದೇಶದಲ್ಲಿ ಪಕ್ಷ ಸಂಘಟನೆಗೆ ನೇಮಕ ಮಾಡಲಾಯಿತು. ಪಕ್ಷ ವಹಿಸಿದ ಆ ಕೆಲಸದಲ್ಲಿ ಸಕ್ರಿಯರಾಗಿದ್ದಾಗ, ಗುಣಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸೋತರು. ಹಾಗಾಗಿ, ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎನ್ನುವ ಹಾಗೇ, ಪಕ್ಷದ ಮೇಲೆ ಸಿಟ್ಟಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ, ಕಾಂಗ್ರೆಸ್ ತೊರೆಯುವ ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.