'ವರ್ಣಭೇದ': ಯುಕೆ ಪ್ರಯಾಣ ಮಾರ್ಗಸೂಚಿಯ ವಿರುದ್ದ ಕಾಂಗ್ರೆಸ್ ಮುಖಂಡ ವಾಗ್ದಾಳಿ
ನವದೆಹಲಿ, ಸೆಪ್ಟೆಂಬರ್ 20: ಯುನೈಟೆಡ್ ಕಿಂಗ್ಡಮ್ನ ಕೊರೊನಾ ವೈರಸ್ ಸೋಂಕು ಹಿನ್ನೆಲೆ ಜಾರಿಗೆ ತರಲಾದ ಹೊಸ ಪ್ರಯಾಣ ಮಾರ್ಗಸೂಚಿಯು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಯುನೈಟೆಡ್ ಕಿಂಗ್ಡಮ್ನ ನೂತನ ಪ್ರಯಾಣ ಮಾರ್ಗಸೂಚಿಯ ಪ್ರಕಾರ ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳ ಜನರು ಕೊರೊನಾ ವಿರುದ್ದ ಲಸಿಕೆ ಪಡೆಯದವರು ಎಂದು ಗುರುತಿಸಲಾಗುತ್ತದೆ. ಯಾರು ಆಸ್ಟ್ರಾಜೆನಿಕಾದ ಕೋವಿಶೀಲ್ಡ್ ಲಸಿಕೆಯನ್ನು ಪಡೆದಿದ್ದರೋ ಅವರನ್ನು ಕೋವಿಡ್ ವಿರುದ್ದ ಲಸಿಕೆ ಪಡೆಯದವರು ಎಂದು ಗುರುತಿಸಲಾಗುತ್ತದೆ. ಎರಡು ಡೋಸ್ ಲಸಿಕೆ ಪಡೆದಿದ್ದರೂ ಕೂಡಾ ಈ ನಿಯಮ ಅನ್ವಯ ಆಗುತ್ತದೆ. ಈ ನಿಯಮವು ಈಗ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಯುಕೆಯು ಈ ನೂತನ ಪ್ರಯಾಣ ನಿರ್ಬಂಧವನ್ನು ಶುಕ್ರವಾರ ಘೋಷಣೆ ಮಾಡಿದ್ದು ಇದು ಅಕ್ಟೋಬರ್ 4 ರಿಂದ ಜಾರಿಗೆ ಬರಲಿದೆ. ಯುಕೆಯ ಈ ನೂತನ ಪ್ರಯಾಣ ಮಾರ್ಗಸೂಚಿ ವಿಚಾರದಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ. ಈ ನೂತನ ಕೋವಿಡ್ ಹಿನ್ನೆಲೆಯ ಪ್ರಯಾಣ ಮಾರ್ಗಸೂಚಿಯು "ವರ್ಣಭೇದ ಮಾಡುವಂತದ್ದು ಆಗಿದೆ" ಹಾಗೂ "ಸಂಪೂರ್ಣವಾಗಿ ವಿಚಿತ್ರವಾದುದು" ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅಭಿಪ್ರಾಯಿಸಿದ್ದಾರೆ.
ಯುಕೆ ಕೆಂಪು ಪಟ್ಟಿಯಿಂದ ಭಾರತ ಔಟ್: ಪ್ರಯಾಣಿಕರಿಗೆ ಕೋವಿಡ್ ನಿರ್ಬಂಧ ಸಡಿಲಿಕೆ
"ಕೋವಿಶೀಲ್ಡ್ ಲಸಿಕೆಯನ್ನು ಮೂಲವಾಗಿ ಯುಕೆಯಲ್ಲಿಯೇ ಅಭಿವೃದ್ದಿ ಪಡಿಸಲಾಗಿದೆ. ಹಾಗೆಯೇ ಪುಣೆಯ ಸೀರಮ್ ಸಂಸ್ಥೆಯಲ್ಲಿ ಈ ಕೋವಿಶೀಲ್ಡ್ ಲಸಿಕೆಯ ಉತ್ಪಾದನೆ ಂಆಡಿ ಯುಕೆಗೂ ರಫ್ತು ಮಾಡಲಾಗಿದೆ. ಹೀಗಿರುವಾಗ ಈಗ ಯುಕೆಯೇ ಕೋವಿಶೀಲ್ಡ್ನ ಎರಡು ಡೋಸ್ ಲಸಿಕೆ ಹಾಕಿದರೂ ಕೂಡಾ ಅವರನ್ನು ಲಸಿಕೆ ಪಡೆಯದವರು ಎಂದು ಪರಿಗಣಿಸುವುದು ವಿಚಿತ್ರ. ಇದು ವರ್ಣಭೇದ ನೀತಿಯ ಮೇಲಿನ ಒಂದು ಭಾಗ," ಎಂದು ಹೇಳಿದ್ದಾರೆ.
ಈ ಯುಕೆಯ ಹೊಸ ನಿಯಮವು ಅಕ್ಟೋಬರ್ 4 ರಿಂದ ಜಾರಿಗೆ ಬರಲಿದೆ. ಯುಕೆಯ ಕೊರೊನಾ ವೈರಸ್ ಹಿನ್ನೆಲೆ ಜಾರಿಗೆ ತಂದಿರುವ ಪ್ರಯಾಣ ಮಾರ್ಗಸೂಚಿಯಲ್ಲಿ ಈ ಹಿಂದೆ ಭಾರತವನ್ನು ಕೆಂಪು ಪಟ್ಟಿಯಿಂದ ಹೊರತೆಗೆಯಲಾಗಿತ್ತು. ಈ ಮೂಲಕ ಭಾರತದ ಪ್ರಯಾಣಿಕರಿಗೆ ನಿರ್ಬಂಧವನ್ನು ಸಡಿಲಿಕೆ ಮಾಡಲಾಗಿತ್ತು. "ಯುಎಇ, ಕತಾರ್, ಭಾರತ ಮತ್ತು ಬಹ್ರೇನ್ ಅನ್ನು ಕೆಂಪು ಪಟ್ಟಿಯಿಂದ ಅಂಬರ್ ಪಟ್ಟಿಗೆ ವರ್ಗಾಯಿಸಲಾಗುವುದು. ಎಲ್ಲಾ ಬದಲಾವಣೆಗಳು ಆಗಸ್ಟ್ 8 ರಂದು ಬೆಳಿಗ್ಗೆ 4 ಗಂಟೆಗೆ ಜಾರಿಗೆ ಬರಲಿವೆ," ಎಂದು ಯುಕೆ ಸಾರಿಗೆ ಕಾರ್ಯದರ್ಶಿ ಟ್ವೀಟ್ ಮಾಡಿದ್ದರು.
ಇನ್ನು ಮುಂಬರುವ ಮಾರ್ಗಸೂಚಿಯ ಪ್ರಕಾರ ಕೋವಿಶೀಲ್ಡ್ ಪಡೆದ ಭಾರತೀಯರು ಲಸಿಕೆಯೇ ಪಡೆದಿಲ್ಲ ಎಂದು ಆಗುತ್ತದೆ. ಹಾಗೆಯೇ ಅಕ್ಟೋಬರ್ 4 ರಿಂದ "ಯುಕೆ, ಯುರೋಪ್ ಅಥವಾ ಯುಎಸ್" ನಲ್ಲಿ ಅನುಮೋದನೆ ಮಾಡಲಾಗಿರುವ ಲಸಿಕೆಯನ್ನು ಪಡೆಯದ ಪ್ರಯಾಣಿರು 10 ದಿನಗಳವರೆಗೆ ಸ್ವಯಂ-ಕ್ವಾರಂಟೈನ್ಗೆ ಒಳಗಾಗಬೇಕು, ಜೊತೆಗೆ ಎರಡು ಬಾರಿ ಮಾಡಲಾಗುವ ಕೋವಿಡ್ ಪರೀಕ್ಷೆಗಳಿಗೆ ಪಾವತಿ ಮಾಡಬೇಕು. ಕ್ವಾರಂಟೈನ್ನಿಂದ ಬಿಡುಗಡೆಯಾದ ಬಳಿಕ ಈ ಹಣವನ್ನು ಪಾವತಿ ಮಾಡಬಹುದು.
ಎಲ್ಲರಿಗೂ ಕೊರೊನಾ ಬೂಸ್ಟರ್ ಡೋಸ್ ಅಗತ್ಯವಿದೆಯೇ? ಬ್ರಿಟನ್ ತಜ್ಞರ ಅಭಿಪ್ರಾಯ
ಭಾರತದಲ್ಲಿ ಅಸ್ಟ್ರಾಜೆನಿಕಾದ ಕೋವಿಶೀಲ್ಡ್ ಲಸಿಕೆಯನ್ನು ಪಡೆದವರನ್ನು ಇನ್ನು ಯುಕೆಯಲ್ಲಿ ಕೋವಿಡ್ ಲಸಿಕೆ ಪಡೆಯದವರು ಎಂದು ಗುರುತಿಸಲಾಗುತ್ತದೆ. ಆದರೆ ಈ ನಡುವೆ ಅಸ್ಟ್ರಾಜೆನಿಕಾದ ಲಸಿಕೆಯನ್ನು ನೀಡಲಾಗುವ ಆಸ್ಟ್ರೇಲಿಯಾ, ಬೆಹರ್ರೇನ್, ಇಸ್ರೇಲ್, ಸೌದಿ ಅರೇಬಿಯಾ, ಸಿಂಗಾಪುರ ಹಾಗೂ ಸೌತ್ ಕೊರಿಯಾಗೆ ಈ ನಿಯಮವು ಅನ್ವಯ ಆಗುವುದಿಲ್ಲ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತದಲ್ಲಿ ಅಧಿಕವಾಗಿ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತದೆ. ಈ ಹಿನ್ನೆಲೆ ಭಾರತದ ಮೇಲೆ ಈ ಯುಕೆಯ ಪ್ರಯಾಣ ನಿರ್ಬಂಧವು ಭಾರೀ ಸಮಸ್ಯೆಯನ್ನು ಉಂಟು ಮಾಡುತ್ತದೆ. ಕೋವಿಶೀಲ್ಡ್ ಅನ್ನು ಯುಕೆಯಲ್ಲಿ ಅನುಮೋದನೆ ಮಾಡಿಲ್ಲವಾದರೂ, ಈ ಲಸಿಕೆಯನ್ನೇ ಯುಕೆ ಯಲ್ಲಿ ಬೇರೆ ಹೆಸರಿನಲ್ಲಿ ಅನುಮೋದನೆ ಮಾಡಿ ನೀಡಲಾಗುತ್ತಿದೆ. ಈ ನೂತನ ನಿಯಮವು ವಿದ್ಯಾರ್ಥಿಗಳು, ಪ್ರವಾಸಿಗರು, ವ್ಯಾಪಾರಿಗಳು ಹಾಗೂ ಇತತರಿಗೆ ಭಾರೀ ಸಮಸ್ಯೆಯನ್ನು ಉಂಟು ಮಾಡಲಿದೆ. ಕೋವಿಶೀಲ್ಡ್ ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣೀಕೃತ ಲಸಿಕೆಯಾಗಿದೆ. ಇನ್ನು ಫ್ರಾನ್ಸ್, ಜರ್ಮನಿ, ಸ್ವೀಡನ್, ನೆದರ್ ಲ್ಯಾಂಡ್ ದೇಶಗಳು ಕೂಡಾ ಭಾರತದಲ್ಲಿ ಉತ್ಪಾದನೆ ಆಗುವ ಕೋವಿಶೀಲ್ಡ್ ಲಸಿಕೆಯನ್ನು ನೀಡುತ್ತಿದೆ. ಇನ್ನು ಕೋವಿಶೀಲ್ಡ್ ಎರಡೂ ಲಸಿಕೆಯನ್ನು ಪಡೆಯದ ಜನರು ಈ ದೇಶಗಳಿಗೆ ಹೋಗಲು ನೆಗೆಟಿವ್ ಪ್ರಮಾಣ ಪತ್ರವನ್ನು ಹೊಂದಬೇಕಾಗಿಲ್ಲ.
(ಒನ್ ಇಂಡಿಯಾ ಸುದ್ದಿ)