ರೈತರು ಪೂಜಿಸುವ ಟ್ರಾಕ್ಟರ್ ಗೆ ಬೆಂಕಿ ಹಚ್ಚಿದ್ದೇಕೆ ಕಾಂಗ್ರೆಸ್ಸಿಗರು?: ಮೋದಿ
ನವದೆಹಲಿ, ಸಪ್ಟೆಂಬರ್.29: ಕೇಂದ್ರ ಸರ್ಕಾರವು ಜಾರಿಗೊಳಿಸುವ ಪ್ರತಿಯೊಂದು ಉತ್ತಮ ಕಾಯ್ದೆಗಳ ವಿರುದ್ಧ ಪ್ರತಿಭಟಿಸುದನ್ನೇ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಹವ್ಯಾಸ ಮಾಡಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ.
ಉತ್ತರಾಖಂಡದಲ್ಲಿ ಎಫ್ ಸಿಕ್ಸ್ ಮೆಗಾ ಯೋಜನೆಗಳನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಇತ್ತೀಚೆಗೆ ನಡೆದ ಸಂಸತ್ತಿನ ಅಧಿವೇಶನದಲ್ಲಿ ರೈತರು, ಕಾರ್ಮಿಕರು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸುಧಾರಣೆ ತರಲಾಯಿತು. ಈ ಸುಧಾರಣೆಗಳು ಕಾರ್ಮಿಕರು, ಯುವಕರು, ಮಹಿಳೆಯರು, ರಾಷ್ಟ್ರದ ರೈತರನ್ನು ಬಲಪಡಿಸುತ್ತದೆ ಎಂದು ಹೇಳಿದರು.
ರೈತರನ್ನು ಕೆರಳಿಸಿದ ಕೃಷಿ ಮಸೂದೆ ಮತ್ತು ರಾಜ್ಯಗಳ ವಿರೋಧದ ವಿವರ
ನವದೆಹಲಿ ಇಂಡಿಯಾ ಗೇಟ್ ಬಳಿ ಸೋಮವಾರ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿದ ಘಟನೆಯನ್ನು ಪ್ರಧಾನಿ ಮೋದಿ ಖಂಡಿಸಿದ್ದಾರೆ. ರೈತರು ಪೂಜಿಸುವ ಯಂತ್ರ ಮತ್ತು ಸಲಕರಣೆಗಳಿಗೆ ಬೆಂಕಿ ಹಚ್ಚುವ ಮೂಲಕ ರೈತರನ್ನು ಕಾಂಗ್ರೆಸ್ ಅವಮಾನಿಸುತ್ತಿದೆ ವಾಗ್ದಾಳಿ ನಡೆಸಿದ್ದಾರೆ.
ಅನ್ನದಾತರ ಸ್ವಾತಂತ್ರ್ಯ ಕಿತ್ತುಕೊಳ್ಳುವ ಪ್ರಯತ್ನ
"ದೇಶಾದ್ಯಂತ ರೈತರು ಎಲ್ಲಿ ಬೇಕಾದರೂ ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಬಹುದು. ಕೇಂದ್ರ ಸರ್ಕಾರವು ರೈತರ ಹಕ್ಕನ್ನು ನೀಡಲು ಮುಂದಾಗಿದ್ದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ತೆರೆದ ಮಾರುಕಟ್ಟೆಗಳಲ್ಲಿ ರೈತರೇ ತಮ್ಮ ಬೆಳೆಯನ್ನು ಮಾರಾಟ ಮಾಡುವುದು ಅವರಿಗೆ ಇಷ್ಟವಿಲ್ಲ. ಅವರಿಗೆ ಮಧ್ಯವರ್ತಿಗಳು ಬೇಕಾಗಿದ್ದು, ರೈತರಿಗೆ ಸ್ವಾತಂತ್ರ್ಯ ನೀಡುವುದಕ್ಕೆ ವಿರೋಧಿಸುತ್ತಿದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
"ರಾಜಕೀಯ ಉದ್ದೇಶಕ್ಕಾಗಿಯಷ್ಟೇ ಕಾಂಗ್ರೆಸ್ ಹೋರಾಟ"
ಕಾಂಗ್ರೆಸ್ ಹೋರಾಟದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಿಂದಿನ ಘಟನೆಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ವಾಗ್ದಾಳಿ ನಡೆಸಿದರು. ಈ ಹಿಂದೆ ಪುಲ್ವಾಮಾ ದಾಳಿ ನಡೆಸಿದ ಉಗ್ರರು ಶಿಬಿರಗಳ ಮೇಲೆ ಪ್ರತಿದಾಳಿ ನಡೆಸಿದ್ದನ್ನೂ ಕಾಂಗ್ರೆಸ್ ಪ್ರಶ್ನೆ ಮಾಡಿತ್ತು. ಉಗ್ರರನ್ನು ಹತ್ಯೆ ಮಾಡಿರುವ ಬಗ್ಗೆ ಸಾಕ್ಷಿ ಕೊಡಿ ಎಂದು ಕೇಂದ್ರ ಸರ್ಕಾರವನ್ನೇ ಪ್ರಶ್ನೆ ಮಾಡಿದ್ದು, ಸೇನಾ ಸಾಮರ್ಥ್ಯವನ್ನೇ ಅನುಮಾನಿಸಿದಂತಿತ್ತು. ಇದರ ಬೆನ್ನಲ್ಲೇ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ವಿರೋಧಿಸಿತ್ತು. ಕೊವಿಡ್-19 ನಡುವೆ ರಾಮ ಮಂದಿರ ಭೂಮಿ ಪೂಜೆಯನ್ನೂ ವಿರೋಧಿಸಿತ್ತು. ಇದೆಲ್ಲ ಕೇವಲ ರಾಜಕೀಯ ಉದ್ದೇಶಕ್ಕಾಗಿಯೇ ಹೊರತೂ ಬೇರೇನೂ ಇಲ್ಲ ಎಂದು ಮೋದಿ ಹೇಳಿದ್ದಾರೆ.
ಏಕತೆ ಪ್ರತಿಮೆ ಸ್ಥಳಕ್ಕೆ ಒಬ್ಬ ಕಾಂಗ್ರೆಸ್ಸಿಗರು ಭೇಟಿ ನೀಡಿಲ್ಲ
ವಿಶ್ವ ಯೋಗ ದಿನಾಚರಣೆಯ ದಿನದಂದು ಇಡೀ ಜಗತ್ತು ಭಾರತವನ್ನು ಅನುಸರಿಸುತ್ತದೆ. ಆದರೆ ಭಾರತದಲ್ಲೇ ಇರುವ ಕಾಂಗ್ರೆಸ್ ಯೋಗವನ್ನು ವಿರೋಧಿಸುತ್ತದೆ. ಭಾರತದ ಕೀರ್ತಿಯನ್ನು ಹೆಚ್ಚಿಸಿದ ಸರ್ದಾರ್ ವಲ್ಲಭಾಯ್ ಪಟೇಲ್ ರ ಏಕತೆ ಪ್ರತಿಮೆಗೂ ಕಾಂಗ್ರೆಸ್ ವಿರೋಧಿಸಿತ್ತು. ಅಲ್ಲದೇ ಇದುವರೆಗೂ ಒಬ್ಬರೇ ಒಬ್ಬ ಕಾಂಗ್ರೆಸ್ ನಾಯಕರು ಏಕತೆ ಪ್ರತಿಮೆ ಇರುವ ಸ್ಥಳಕ್ಕೆ ಭೇಟಿ ನೀಡಿಲ್ಲ.
ಅಮೃತಸರ್ ನಲ್ಲಿ ರೈಲ್ ರೋಖೋ ಆಂದೋಲನ
ಅಮೃತಸರ್ ನಲ್ಲಿರುವ ದೇವಿದಾಸ್ ಪುರ್ ಗ್ರಾಮದಲ್ಲಿ ಕಿಸಾನ್ ಮಜದೂರ್ ಸಂಘರ್ಷ ಸಮಿತಿ ನಡೆಸುತ್ತಿರುವ 'ರೈಲ್ ರುಖೋ'(ರೈಲು ತಡೆ) ಪ್ರತಿಭಟನೆಯು 6ನೇ ದಿನಕ್ಕೆ ಕಾಲಿಟ್ಟಿದೆ. ರೈಲು ಹಳಿಗಳ ಮೇಲೆ ಕಪ್ಪು ಬಟ್ಟೆ ಧರಿಸಿದ ರೈತರು ಹೋರಾಟ ಮುಂದುವರಿಸಿದ್ದಾರೆ. ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ಅಕ್ಟೋಬರ್.01ರಂದು ದೇಶಾದ್ಯಂತ ಕಿಸಾನ್ ಮಜದೂರ್ ಸಂಘರ್ಷ ಸಮಿತಿ ಉಗ್ರ ಹೋರಾಟ ನಡೆಸುವುದಾಗಿ ಸಂಘಟನೆಯ ಕಾರ್ಯದರ್ಶಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ರಾಷ್ಟ್ರಪತಿ ಅನುಮೋದನೆ ನೀಡಿದ ಕೃಷಿ ಕಾಯ್ದೆಗಳು
ಸಂಸತ್ ನಲ್ಲಿ ತೀವ್ರ ಸದ್ದು ಗದ್ದಲಕ್ಕೆ ಕಾರಣವಾದ ಕೃಷಿ ಸಂಬಂಧಿತ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾನುವಾರ ಅನುಮೋದನೆ ನೀಡಿದ್ದಾರೆ. ಇದರಿಂದ ಮೂರು ಮಸೂದೆಗಳು ಇದೀಗ ಕಾಯ್ದೆಗಳಾಗಿ ಬದಲಾಗಿವೆ. ಈ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ
2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ
3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ