ಚುನಾವಣಾ ಚಾಣಕ್ಯನ ಪಕ್ಷ 'ಪುನರುಜ್ಜೀವನ ಯೋಜನೆ' ಬಗ್ಗೆ ಕಾಂಗ್ರೆಸ್ ಸಭೆ
ನವದೆಹಲಿ, ಜು. 30: ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸಲು ಮತ್ತು 2024 ರ ಲೋಕಸಭಾ ಚುನಾವಣೆಗೆ ಈಗಲೇ ಸಿದ್ದವಾಗಲು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಪ್ರಸ್ತಾಪಿಸಿದ ಕ್ರಿಯಾ ಯೋಜನೆಯ ಬಗ್ಗೆ ಕಾಂಗ್ರೆಸ್ ನಾಯಕತ್ವ ಚರ್ಚಿಸುತ್ತಿದೆ. ಪಕ್ಷದ ಮೂಲಗಳು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರು "ಸುಧಾರಣೆ ಮತ್ತು ಪುನರುಜ್ಜೀವನ" ಕಾರ್ಯಸೂಚಿಯನ್ನು ಚರ್ಚಿಸಲು ಗುಂಪುಗಳಾಗಿ ಭೇಟಿಯಾಗುತ್ತಿದ್ದಾರೆ ಎಂದು ಹೇಳಿದರು.
ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಈ ತಿಂಗಳಿನ ಪ್ರಾರಂಭದಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ ಹಾಗೂ ರಾಹುಲ್ ಗಾಂಧಿಯನ್ನು ಭೇಟಿಯಾದಾಗ ಚರ್ಚೆಯಲ್ಲಿರುವ ನೀಲನಕ್ಷೆಯನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜುಲೈ 13 ರಂದು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಭೇಟಿಯಾಗುವ ಮುನ್ನವೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾಗಿದ್ದರು.
ಗಾಂಧಿ ಕುಟುಂಬ, ಪ್ರಶಾಂತ್ ಭೇಟಿಯ ಹಿಂದಿನ ನೈಜ ಕಾರಣವೇನು?
ಇನ್ನು ಸಭೆಗಳಲ್ಲಿ ಭಾಗಿಯಾಗಿದ್ದ ಹೆಚ್ಚಿನ ನಾಯಕರು ಪ್ರಶಾಂತ್ ಕಿಶೋರ್ ಪ್ರಸ್ತಾಪಗಳ ಬಗ್ಗೆ ಬಿಗಿಯಾಗಿದ್ದರು. ಆದರೆ ಓರ್ವ ನಾಯಕ ''ಚುನಾವಣಾ ಕಾರ್ಯತಂತ್ರ, ಸಮನ್ವಯ, ನಿರ್ವಹಣೆ ಮತ್ತು ಮೈತ್ರಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಬಯಸುತ್ತೇನೆ,'' ಎಂದು ಹೇಳಿದ್ದಾರೆ.
ಹಾಗೆಯೇ ಇನ್ನೋರ್ವ ಕಾಂಗ್ರೆಸ್ ನಾಯಕ, ''ಪ್ರಶಾಂತ್ ಕಿಶೋರ್ ನೀಡಿದ ಈ ಪಟ್ಟಿಯು, ಕಾಂಗ್ರೆಸ್ ಹಾಗೂ ಎಲ್ಲವನ್ನೂ ಹೇಗೆ ಪುನರುಜ್ಜೀವನಗೊಳಿಸುವುದು ಎಂಬುದರ ಕುರಿತು ದೊಡ್ಡ ಪಟ್ಟಿ. ತದನಂತರ ಕಿಶೋರ್ ಔಪಚಾರಿಕವಾಗಿ ಪಕ್ಷಕ್ಕೆ ಬರಲು ಬಯಸುತ್ತಾರೆ. ಹಾಗಾಗಿ ಪ್ರಸ್ತುತ ನಮ್ಮ ಕಣ್ಣೆದುರು ಇರುವ ಚರ್ಚೆಗಳು ಅದನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಎಂಬುದರ ಕುರಿತು. ಇದಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರೇರಕ ಶಕ್ತಿಯಾಗಿದ್ದಾರೆ," ಎಂದಿದ್ದಾರೆ ಎಂದು ವರದಿಯಾಗಿದೆ.
ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಶಕ್ತ ಗುಂಪನ್ನು ಸ್ಥಾಪಿಸಲು ಕಿಶೋರ್ ಸೂಚಿಸಿದ್ದಾರೆ ಮತ್ತು ರಾಜ್ಯ ಮತ್ತು ಜಿಲ್ಲಾ ಸಮಿತಿಗಳನ್ನು ಬಲಪಡಿಸುವ ಕ್ರಮಗಳನ್ನು ಕಿಶೋರ್ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾ ಚಾಣಕ್ಯ ಕಾಂಗ್ರೆಸ್ ಸೇರ್ಪಡೆ?: ಗಾಂಧಿಗಳ ಜೊತೆ ಭೇಟಿ ಸೃಷ್ಟಿಸಿದ ಅನುಮಾನ
"ಮತಗಟ್ಟೆ ಮಟ್ಟದಿಂದಲೇ ಪರಿಣಾಮಕಾರಿ ಚುನಾವಣಾ ಕಾರ್ಯವಿಧಾನವನ್ನು ಹೇಗೆ ಮಾಡುವುದು ಎಂಬುದು ಮೂಲಭೂತ ವಿಷಯವಾಗಿದೆ. ಇವುಗಳು ಪ್ರಸ್ತಾಪಗಳಾಗಿವೆ. ಈ ಪೈಕಿ ಕೆಲವನ್ನು ಪಕ್ಷವು ಈಗಾಗಲೇ ಮಾಡುತ್ತಿದೆ," ಎಂದು ನಾಯಕರೋರ್ವರು ಹೇಳಿದ್ದಾರೆ.
ಸಭೆಯಲ್ಲಿ ನಡೆದಿದ್ದು ಏನು?
15 ಸಿಡಬ್ಲ್ಯೂಸಿ ಸದಸ್ಯರು, ಗುರುದ್ವಾರ ರಕಾಬ್ ಗಂಜ್, ಪಕ್ಷದ ವಾರ್ ರೂಂನಲ್ಲಿ ಪ್ರಸ್ತಾಪಗಳ ಕುರಿತು ಚರ್ಚಿಸಲು ಗುಂಪುಗಳಲ್ಲಿ ಹಲವು ಬಾರಿ ಭೇಟಿಯಾಗಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಸ್ಥೆ) ಕೆ ಸಿ ವೇಣುಗೋಪಾಲ್ ಮತ್ತು ಹಿರಿಯ ನಾಯಕ ಎ ಕೆ ಆಂಟನಿ ಸಭೆಗಳನ್ನು ಆಯೋಜಿಸುತ್ತಿದ್ದಾರೆ ಎಂದು ಎಂದು ಹೇಳಲಾಗಿದೆ. ಹಾಗೆಯೇ ಅವುಗಳಲ್ಲಿ ಕನಿಷ್ಠ ಮೂರು ಸಭೆಗಳಲ್ಲಿ ಹಾಜರಿದ್ದರು ಎನ್ನಲಾಗಿದೆ. ಆದಾಗ್ಯೂ, ಮೇಲೆ ಉಲ್ಲೇಖಿಸಿದ ನಾಯಕರೊಬ್ಬರ ಪ್ರಕಾರ, ಪ್ರಸ್ತಾಪಗಳನ್ನು ಸಿಡಬ್ಲ್ಯೂಸಿ ಸದಸ್ಯರೊಂದಿಗೆ ವಿವರವಾಗಿ ಹಂಚಿಕೊಳ್ಳಲಾಗಿಲ್ಲ. "ನಮಗೆ ಕೆಲವು ಬುಲೆಟ್ ಪಾಯಿಂಟ್ಗಳನ್ನು ಮಾತ್ರ ನೀಡಲಾಗಿದೆ" ಎಂದು ಮೂರನೇ ನಾಯಕ ಹೇಳಿದರು.
ಈ ಸಭೆಗಳಲ್ಲಿ ಮೊದಲನೆಯದಾಗಿ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಿ.ಚಿದಂಬರಂ, ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಆಡಳಿತ) ಪವನ್ ಕುಮಾರ್ ಬನ್ಸಾಲ್ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಎರಡನೇ ಸಭೆಯಲ್ಲಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕ ಆನಂದ ಶರ್ಮಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್, ಕಮಲ್ ನಾಥ್, ರಘುವೀರ್ ಮೀನಾ ಮತ್ತು ಅಂಬಿಕಾ ಸೋನಿ ಇದ್ದರು. ಮೂರನೇ ಸಭೆಯಲ್ಲಿ ಪ್ರಿಯಾಂಕಾ, ದಿಗ್ವಿಜಯ ಸಿಂಗ್, ತಾರಿಕ್ ಅನ್ವರ್ ಮತ್ತು ಜೈರಾಮ್ ರಮೇಶ್ ಭಾಗವಹಿಸಿದ್ದರು.
ಚರ್ಚೆಗಳು ನಡೆಯುತ್ತಿದ್ದರೂ ಪ್ರಸ್ತಾಪಗಳ ಬಗ್ಗೆ ಈಗ ಗಂಭೀರ ಚಿಂತನೆ ನಡೆಯುತ್ತಿಲ್ಲ ಎಂದು ನಾಯಕರೊಬ್ಬರು ಹೇಳಿದ್ದಾರೆ. "ಇದೀಗ, ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸುವುದು ಸವಾಲಾಗಿದೆ. 2024 ಇನ್ನೂ ಮೂರು ವರ್ಷಗಳು ಇದೆ. ಆದರೆ ಈ ಎಲ್ಲಾ ತಯಾರಿಗಳನ್ನು ನೋಡಿದಾಗ ಕಾಂಗ್ರೆಸ್ ನಾಯಕತ್ವವು ಗಂಭೀರವಾಗಿದೆ ಎಂದು ತೋರುತ್ತದೆ. ನಮ್ಮಂತಹ ದೊಡ್ಡ ಪಕ್ಷದಲ್ಲಿ, ಚರ್ಚೆಗಳು ಮತ್ತು ಸಭೆಗಳು ನಡೆಯುತ್ತಲೇ ಇರುತ್ತವೆ," ಎಂದು ನಾಯಕರೊಬ್ಬರು ಈ ಚರ್ಚೆಗಳ ಬಗ್ಗೆ ವಿವರಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)