ಅಮಿತ್ ಶಾ 8 ಪ್ರಶ್ನೆಗಳಿಗೆ ಕಾಂಗ್ರೆಸ್ ಒಂದೇ ವಾಕ್ಯದ ಉತ್ತರ!
ನವದೆಹಲಿ, ಫೆಬ್ರವರಿ, 15: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಹುಲ್ ಗಾಂಧಿಗೆ ಎಸೆದಿದ್ದ ಪ್ರಶ್ನೆಗಳ ಬಾಣಕ್ಕೆ ಕಾಂಗ್ರೆಸ್ ಒಂದೇ ವಾಕ್ಯದ ಉತ್ತರ ನೀಡಿದೆ. "ನಮಗೆ ದೇಶಭಕ್ತಿಯ ಪಾಠ ಹೇಳಿಕೊಡುವ ಅಗತ್ಯ ಇಲ್ಲ" ಎಂದು ತಿರುಗೇಟು ನೀಡಿದೆ.
ಮಹತ್ಮಾ ಗಾಂಧೀಜಿ ಹತ್ಯೆ, ಆ ಸಮಯದಲ್ಲಿ ಸಂಭವಿಸಿದ ಗಲಭೆ ಪರಿಸ್ಥಿತಿಯನ್ನು ಅವಲೋಕನ ಮಾಡಿದರೆ ನಿಜ ಸ್ಥಿತಿ ಅರ್ಥವಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸರ್ಜೆವಾಲಾ ಹೇಳಿದ್ದಾರೆ.[ದೆಹಲಿ ಗಲಾಟೆ: ರಾಹುಲ್ ಗಾಂಧಿಗೆ ಅಮಿತ್ ಶಾ ಎಸೆದ 8 ಪ್ರಶ್ನೆ]
ದೇಶದ ಐಕ್ಯತೆ ಮತ್ತು ಸಮಗ್ರತೆ ಕಾಪಾಡಲು ಕಾಂಗ್ರೆಸ್ ನ ನಾಯಕರು ತ್ಯಾಗ ಮಾಡಿದ್ದನ್ನು ಯಾರು ಮರೆತಿಲ್ಲ. ಅಂಥ ಶ್ರೇಷ್ಠ ಇತಿಹಾಸ ಪಕ್ಷಕ್ಕಿದೆ. ಮೋದಿ ಸರ್ಕಾರ ವಿದ್ಯಾರ್ಥಿಗಳ ಧ್ವನಿ ಅಡಗಿಸಲು ಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ದೇಶದ್ರೋಹದ ಘೋಷಣೆ ಕೂಗಿದವರನ್ನು ಶಿಕ್ಷಿಸಬೇಕು. ಅದಕ್ಕೆ ಬದಲು ಸರ್ಕಾರದ ಕ್ರಮದ ವಿರುದ್ಧ ತಿರುಗಿ ನಿಂತ ಎಲ್ಲರನ್ನು ದೇಶದ್ರೋಹಿಗಳು ಎಂದು ಕರೆಯುವುದು ಎಷ್ಟು ಸರಿ ಎಂದು ಸಿಂಗ್ ಪ್ರಶ್ನೆ ಮಾಡಿದ್ದಾರೆ.[ಸಂಸತ್ ದಾಳಿ ಸಮಗ್ರ ಇತಿಹಾಸ]
ದೇಶ ದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜವಾಗರ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ದೇಶ ವಿರೋಧಿ ಘೋಷಣೆ ಕೂಗಿದ್ದರು ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ ಕನ್ಹಯ್ಯ ಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ವೇಳೆ ವಕೀಲರು ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.