ಮೋದಿ ಹೊಗಳಿದ ಕಾಂಗ್ರೆಸ್ಸಿಗರು: ಹೈಕಮಾಂಡ್ ಸುಸ್ತು!
ನವದೆಹಲಿ, ಸೆ 13: ಲೋಕಸಭಾ ಚುನಾವಣೆಯಲ್ಲಿ ಸೋತು ಹೈರಾಣವಾಗಿರುವ ಕಾಂಗ್ರೆಸ್, ಪಕ್ಷದ ಇಬ್ಬರು ಹಿರಿಯ ಮುಖಂಡರ ಹೇಳಿಕೆಯಿಂದ ತೀವ್ರ ಮುಜುಗರಕ್ಕೀಡಾಗಿದೆ.
ಸಮರ್ಥ ನಾಯಕತ್ವದ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರೇ ಬಿಜೆಪಿ ಮತ್ತು ಮೋದಿ ಆಡಳಿತವನ್ನು ಹೊಗಳುತ್ತಿರುವುದು ಹೈಕಮಾಂಡಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.
ದೆಹಲಿಯಲ್ಲಿ ಸರಕಾರ ರಚಿಸುವ ವಿಚಾರದಲ್ಲಿ ದೆಹಲಿಯ ಮೂರು ಬಾರಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಬಿಜೆಪಿ ಪರ ನಿಲುವು ತಾಳಿದ್ದು ಪಕ್ಷಕ್ಕೆ ಇರಿಸು ಮುರಿಸು ತಂದಿದೆ. (ಸಚಿವ ಸಂಪುಟ ವಿಸ್ತರಣೆಗೆ ದಿಗ್ವಿಜಯ್ ಸರ್ಟಿಫಿಕೇಟ್)
2ಜಿ ಹಗರಣ ಮತ್ತು ಕಾಶ್ಮೀರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಿಸುವಲ್ಲಿ ಯುಪಿಎ ಮೈತ್ರಿಕೂಟದ ಅಂಗ ಪಕ್ಷವಾಗಿದ್ದ ನ್ಯಾಶನಲ್ ಕಾನ್ಫರೆನ್ಸ್ ಎಡವಿದ್ದರ ಬಗ್ಗೆ ಕಾಂಗ್ರೆಸ್ಸಿನ ಕೆಲವು ಮುಖಂಡರು ತಮ್ಮದೇ ಆದ ಹೇಳಿಕೆಯನ್ನು ನೀಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆ ತೆಗೆದುಕೊಳ್ಳುವ ವಿಚಾರದಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಕೂಡಾ ಮೋದಿ ಕಾರ್ಯವೈಖರಿಯನ್ನು ಮೆಚ್ಚಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ದಿಗ್ವಿಜಯ್ ಸಿಂಗ್ ಮತ್ತು ಶೀಲಾ ಹೇಳಿದ್ದೇನು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ
ಕಾಶ್ಮೀರ ಪ್ರವಾಹ
ಕಾಶ್ಮೀರದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಕೇಂದ್ರ ಸರಕಾರ ನಿಭಾಯಿಸಿದ ರೀತಿಗೆ ದಿಗ್ವಿಜಯ್ ಸಿಂಗ್ ಶ್ಲಾಘಿಸಿದ್ದಾರೆ. ಕೇಂದ್ರ ಸರಕಾರ ಉತ್ತಮವಾಗಿ ಕೆಲಸ ಮಾಡಿದೆ - ದಿಗ್ವಿಜಯ್ ಸಿಂಗ್. (ಚಿತ್ರ : ಪಿಟಿಐ)
ಶೀಲಾ ದೀಕ್ಷಿತ್ ಹೇಳಿದ್ದೇನು?
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದ ಪಕ್ಷವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಕಾರ ಬಿಜೆಪಿಯನ್ನು ಸರಕಾರ ರಚಿಸುವಂತೆ ಆಹ್ವಾನಿಸುವುದು ಸೂಕ್ತ - ಶೀಲಾ ದೀಕ್ಷಿತ್ (ಚಿತ್ರ : ಪಿಟಿಐ)
ದಿಗ್ವಿಜಯ್ ಸಿಂಗ್ ಹೇಳಿಕೆ
ರಾಜ್ಯ ಸರಕಾರ ಕೈಚೆಲ್ಲಿ ಕೂತಾಗ ಮೋದಿ ಸರಕಾರ ಕಾಶ್ಮೀರ ಪ್ರವಾಹದ ವಿಚಾರದಲ್ಲಿ ಜನಮೆಚ್ಚುವ ಕೆಲಸ ಮಾಡಿದೆ. ನಮ್ಮ ಸೈನಿಕರಿಗೆ ಅಭಿನಂದನೆಗಳು. ಪಾಕ್ ಆಕ್ರಮಿತ ಕಾಶ್ಮೀರದ ಭಾಗಕ್ಕೆ ಸಹಾಯಹಸ್ತ ನೀಡುವ ಪ್ರಧಾನಿಯವರ ನಿಲುವಿಗೆ ನನ್ನ ಸಹಮತವಿದೆ - ರಾಹುಲ್ ಗಾಂಧಿ ಆಪ್ತ, ಕಾಂಗ್ರೆಸ್ ಹಿರಿಯ ಮುಖಂಡ - ದಿಗ್ವಿಜಯ್ ಸಿಂಗ್. (ಚಿತ್ರ : ಪಿಟಿಐ)
ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ
ದೆಹಲಿಯಲ್ಲಿ ಅಧಿಕಾರಕ್ಕೇರಲು ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಕೆಲವು ದಿನಗಳ ಹಿಂದೆ ಕಾಂಗ್ರೆಸ್ ವಕ್ತಾರರು ಹೇಳಿಕೆ ನೀಡಿದ್ದರು. ಈಗ ಬಿಜೆಪಿಗೆ ಸರಕಾರ ರಚಿಸಲು ಅವಕಾಶ ನೀಡಬೇಕೆನ್ನುವ ಶೀಲಾ ಹೇಳಿಕೆ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ.
ಅದು ಅವರ ವೈಯಕ್ತಿಕ ನಿಲುವು
ಇಬ್ಬರು ಹಿರಿಯ ಮುಖಂಡರ ಅಚ್ಚರಿಯ ಹೇಳಿಕೆಯಿಂದ ಮುಜುಗರದಿಂದ ತಪ್ಪಿಸಿಕೊಳ್ಳಲು, ಇದು ಅವರಿಬ್ಬರ ವೈಯಕ್ತಿಕ ನಿಲುವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ. (ಚಿತ್ರ : ಪಿಟಿಐ)