"ಕಾಂಗ್ರೆಸ್ನಲ್ಲಿ 700 ಶಾಸಕರಿದ್ದಾರೆ"; ಮಮತಾ ಬ್ಯಾನರ್ಜಿಗೆ ಅಧೀರ್ ಉತ್ತರ
ನವದೆಹಲಿ, ಮಾರ್ಚ್ 13: ಕಾಂಗ್ರೆಸ್ ಪಕ್ಷದ ವಿಶ್ವಾಸಾರ್ಹತೆ ಪ್ರಶ್ನೆ ಮಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಿಜೆಪಿಯ ದಲ್ಲಾಳಿಯಂತೆ ಕಾಣುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧರಿ ತಿರುಗೇಟು ನೀಡಿದ್ದಾರೆ.
ದೇಶಾದ್ಯಂತ ಕಾಂಗ್ರೆಸ್ ಪಕ್ಷ ಅಸ್ತಿತ್ವವನ್ನು ಹೊಂದಿದೆ. ಪ್ರತಿಪಕ್ಷಗಳ ಒಟ್ಟು ಮತಗಳಲ್ಲಿ ಕಾಂಗ್ರೆಸ್ ಶೇ.20ರಷ್ಟು ಪಾಲು ಹೊಂದಿದೆ. ಆದರೆ ನಿಮ್ಮ ಪಕ್ಷ ಎಲ್ಲಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರನ್ನು ಅವರು ಪ್ರಶ್ನೆ ಮಾಡಿದ್ದಾರೆ.
ಉ.ಪ್ರ: ಕಣದಲ್ಲಿದ್ದ 399 ಕಾಂಗ್ರೆಸ್ ಅಭ್ಯರ್ಥಿಗಳು, ಠೇವಣಿ ಕಳೆದುಕೊಂಡವರೆಷ್ಟು?
ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಪಂಜಾಬ್ ಮತ್ತು ಮಣಿಪುರ ವಿಧಾನಸಭೆ ಚುನಾವಣಾ ಫಲಿತಾಂಶದ ಬಗ್ಗೆ ಉಲ್ಲೇಖಿಸಿದ್ದ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದರು. ಬಿಜೆಪಿ ವಿರುದ್ಧ ಹೋರಾಡುವ ಎಲ್ಲ ಸ್ಥಳೀಯ ಪಕ್ಷಗಳು ಒಟ್ಟಾಗಬೇಕಿದೆ. ಕಾಂಗ್ರೆಸ್ ಪಕ್ಷ ಎಲ್ಲೆಡೆ ಸೋಲು ಕಾಣುತ್ತಿದೆ. ಈಗ ಆ ಪಕ್ಷದ ನಾಯಕರಿಗೆ ಗೆಲ್ಲುವ ಉತ್ಸಾಹವೇ ಇಲ್ಲದಂತೆ ಆಗಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವು ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದ್ದು, ಅದರ ಮೇಲೆ ಅವಲಂಬಿಸುವುದು ಸೂಕ್ತವಲ್ಲ ಎಂದು ಹೇಳಿದ್ದರು.
ಹುಚ್ಚರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದ ಅಧೀರ್:
"ಹುಚ್ಚು ವ್ಯಕ್ತಿಗಳಿಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷವು ದೇಶಾದ್ಯಂತ 700 ಶಾಸಕರನ್ನು ಹೊಂದಿದೆ, ದೀದಿಯವರ ಬಳಿ ಅಷ್ಟು ಶಾಸಕರಿದ್ದಾರೆಯೇ?. ಪ್ರತಿಪಕ್ಷಗಳ ಮತಗಳಲ್ಲಿ ಕಾಂಗ್ರೆಸ್ ಶೇ.20ರಷ್ಟು ಪಾಲನ್ನು ಹೊಂದಿದೆ, ಆದರೆ ದೀದಿಯವರ ಪಾಲು ಎಷ್ಟಿದೆ?, ಬಿಜೆಪಿಯ ದಲ್ಲಾಳಿಯ ಹಾಗೆ ವರ್ತಿಸುವುದಕ್ಕಾಗಿ ಅವರು ಇಷ್ಟೆಲ್ಲಾ ಟೀಕೆಗಳನ್ನು ಮಾಡುತ್ತಿದ್ದಾರೆ," ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧರಿ ತಿರುಗೇಟು ಕೊಟ್ಟಿದ್ದಾರೆ.
1997ರಲ್ಲಿ ಕಾಂಗ್ರೆಸ್ನಿಂದ ಬೇರ್ಪಟ್ಟು ತೃಣಮೂಲ ಕಾಂಗ್ರೆಸ್ನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಮಮತಾ ಬ್ಯಾನರ್ಜಿ ಅವರನ್ನು ಗೇಲಿ ಮಾಡಿದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್ ಅಸ್ತಿತ್ವದಲ್ಲಿಲ್ಲದಿದ್ದರೆ ಅವರು ರಾಜಕೀಯವಾಗಿ ಹುಟ್ಟುತ್ತಿರಲಿಲ್ಲ ಎಂದರು. ಗೋವಾದಲ್ಲಿ ಕಾಂಗ್ರೆಸ್ ಅನ್ನು ಅವರೇ ದುರ್ಬಲಗೊಳಿಸಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಇಲ್ಲದಿದ್ದರೆ ಮಮತಾ ಬ್ಯಾನರ್ಜಿ ಎಲ್ಲಿರುತ್ತಿದ್ದರು?
"ಕಾಂಗ್ರೆಸ್ ವಿರುದ್ಧ ನೀವು ಏಕೆ ಟೀಕೆ ಮಾಡುತ್ತಿದ್ದೀರಿ? ಕಾಂಗ್ರೆಸ್ ಇಲ್ಲದಿದ್ದರೆ ಮಮತಾ ಬ್ಯಾನರ್ಜಿ ಅಂಥವರು ಹುಟ್ಟುತ್ತಿರಲಿಲ್ಲ. ಇದನ್ನು ಅವರು ನೆನಪಿಟ್ಟುಕೊಳ್ಳಬೇಕು. ಅವರು ಬಿಜೆಪಿಯನ್ನು ಮೆಚ್ಚಿಸುವುದಕ್ಕಾಗಿ ಗೋವಾಗೆ ಹೋದರು, ಅವರೇ ಕಾಂಗ್ರೆಸ್ ಅನ್ನು ಸೋಲಿಸಿದರು, ಗೋವಾದಲ್ಲಿ ಕಾಂಗ್ರೆಸ್ ಅನ್ನು ದುರ್ಬಲಗೊಳಿಸಿದ್ದೀರಿ ಎಂಬುದು ಎಲ್ಲರಿಗೂ ತಿಳಿದಿದೆ," ಎಂದು ಅಧೀರ್ ರಂಜನ್ ಚೌಧರಿ ಹೇಳಿದರು.