ಯುಪಿಎ ಅವಧಿಯಲ್ಲಿ 6 ಸರ್ಜಿಕಲ್ ಸ್ಟ್ರೈಕ್ ನಡೆಸಿದ ಪಟ್ಟಿ ನೀಡಿದ ಕಾಂಗ್ರೆಸ್
ನವದೆಹಲಿ, ಮೇ 2: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಹಲವು ಬಾರಿ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ದಾಳಿಗಳನ್ನು ನಡೆಸಲಾಗಿತ್ತು ಎಂದು ಕಾಂಗ್ರೆಸ್ನ ಅನೇಕ ನಾಯಕರು ಹೇಳಿಕೆ ನೀಡಿದ್ದರು.
ಈಗ ಕಾಂಗ್ರೆಸ್ ಸರ್ಜಿಕಲ್ ದಾಳಿ ನಡೆಸಿದ ದಿನಾಂಕ ಮತ್ತು ಸ್ಥಳಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯುಪಿಎ ಅವಧಿಯಲ್ಲಿ ಆರು ಕಡೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು ಎಂದು ಅದು ಪ್ರತಿಪಾದಿಸಿದೆ.
ಯುಪಿಎ ಅವಧಿಯಲ್ಲಿ ಅನೇಕ ಸರ್ಜಿಕಲ್ ಸ್ಟ್ರೈಕ್ಸ್ ನಡೆದಿದ್ದವು: ಮನಮೋಹನ್ ಸಿಂಗ್
ಸುದ್ದಿಗೋಷ್ಠಿಯೊಂದರಲ್ಲಿ ಗುರುವಾರ ಕಾಂಗ್ರೆಸ್ ಹಿರಿಯ ಮುಖಂಡ ರಾಜೀವ್ ಶುಕ್ಲಾ, ಆರು ದಾಳಿಗಳನ್ನು ಕಾಂಗ್ರೆಸ್ ಸರ್ಕಾರ ನಡೆಸಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಎರಡು ಸರ್ಜಿಕಲ್ ಸ್ಟ್ರೈಕ್ಗಳನ್ನು ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಉರಿಯಲ್ಲಿನ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಪ್ರತಿಕಾರವಾಗಿ ಕಳೆದ ವರ್ಷದ 2016ರ ಸೆ. 29ರಂದು ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರದೇಶದೊಳಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಈ ವರ್ಷ ಪುಲ್ವಾಮಾ ಉಗ್ರರ ದಾಳಿಯ ನಂತರ ಫೆಬ್ರವರಿ 26ರಂದು ಪಾಕಿಸ್ತಾನದೊಳಗಿನ ಜೈಶ್ ಎ ಮೊಹಮ್ಮದ್ ಉಗ್ರರ ನೆಲೆಗಳ ಮೇಲೆ ವಾಯುಪಡೆ ವೈಮಾನಿಕ ದಾಳಿ ನಡೆಸಿತ್ತು.
ಭಟ್ಟಾಲ್ ಮತ್ತು ಶಾರ್ದಾ ಸೆಕ್ಟರ್
ಯುಪಿಎ ಅವಧಿಯಲ್ಲಿ ಮೊದಲ ಸರ್ಜಿಕಲ್ ಸ್ಟ್ರೈಕ್ಅನ್ನು 2008ರ ಜೂನ್ 19ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಭಟ್ಟಾಲ್ ಸೆಕ್ಟರ್ನಲ್ಲಿ ನಡೆಸಲಾಗಿತ್ತು. ಎರಡನೆಯ ದಾಳಿಯನ್ನು 2011ರ ಆಗಸ್ಟ್ 30-ಸೆಪ್ಟೆಂಬರ್ 1ರಂದು ಕೇಲ್ನ ನೀಲಂ ನದಿ ಕಣಿವೆಯುದ್ದಕ್ಕೂ ಇರುವ ಶಾರ್ದಾ ಸೆಕ್ಟರ್ನಲ್ಲಿ ಕೈಗೊಳ್ಳಲಾಗಿತ್ತು.
ಉಳಿದ ನಾಲ್ಕು ದಾಳಿಗಳು
ಮೂರನೇ ಸರ್ಜಿಕಲ್ ದಾಳಿಯನ್ನು 2013ರ ಜನವರಿ 6ರಂದು ಸಾವನ್ ಪಾತ್ರಾ ತಪಾಸಣಾ ನೆಲೆಯಲ್ಲಿ ನಡೆಸಲಾಗಿತ್ತು. ನಾಲ್ಕನೆಯ ದಾಳಿ 2013ರ ಜುಲೈ 27-28ರಂದು ನಾಜಾಪಿರ್ ವಲಯದಲ್ಲಿ ನಡೆದಿತ್ತು. ಐದನೆಯದು 2013ರ ಆಗಸ್ಟ್ 6 ಮತ್ತು ಆರನೇ ಸರ್ಜಿಕಲ್ ದಾಳಿಯನ್ನು 2014ರ ಜನವರಿ 14ರಂದು ನಡೆಸಲಾಗಿತ್ತು ಎಂದು ಶುಕ್ಲಾ ಹೇಳಿದ್ದಾರೆ.
ಪಾಕ್ ನ F 16 ಯುದ್ಧ ವಿಮಾನ ಹೊಡೆದುರುಳಿಸಿದ್ದಕ್ಕೆ ಸಾಕ್ಷ್ಯ ಬಿಡುಗಡೆ
ವಾಜಪೇಯಿ ಆಡಳಿತಾವಧಿಯಲ್ಲಿ
ವಾಜಪೇಯಿ ಆಡಳಿತಾವಧಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ಸ್ನ ಮಾಹಿತಿಯನ್ನೂ ಶುಕ್ಲಾ ಬಿಡುಗಡೆ ಮಾಡಿದ್ದಾರೆ. 2000ರ ಜನವರಿ 21ರಂದು ನೀಲಂ ನದಿಯುದ್ದಕ್ಕೂ ಇರುವ ನಾದಲಾ ಎನ್ಕ್ಲೇವ್ನಲ್ಲಿ ಮೊದಲ ಸರ್ಜಿಕಲ್ ಸ್ಟ್ರೈಕ್ಸ್ ನಡೆಸಲಾಗಿತ್ತು. 2003ರ ಸೆಪ್ಟೆಂಬರ್ 18ರಂದು ಪೂಂಚ್ನ ಬಾರೋಹ್ ಸೆಕ್ಟರ್ನಲ್ಲಿ ನಡೆಸಲಾಗಿತ್ತು ಎಂದು ವಿವರಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ 15 ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು: ಗೆಹ್ಲೋಟ್
ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದು
ಕಾಂಗ್ರೆಸ್ ಎಂದಿಗೂ ಈ ದಾಳಿಗಳ ಶ್ರೇಯಸ್ಸನ್ನು ಪಡೆದುಕೊಳ್ಳಲು ಬಯಸಿರಲಿಲ್ಲ. ಒಂದೇ ಒಂದು ಸರ್ಜಿಕಲ್ ದಾಳಿ ನಡೆಸಿದವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಈ ದಾಳಿಗಳಿಗೆ ಶ್ರೇಯಸ್ಸು ಪಡೆದುಕೊಳ್ಳಲು ಮನಮೋಹನ್ ಸಿಂಗ್ ಅವರಾಗಲೀ, ಅಟಲ್ ಬಿಹಾರಿ ವಾಜಪೇಯಿ ಅವರಾಗಲೀ ಸುದ್ದಿಗೋಷ್ಠಿ ನಡೆಸಿರಲಿಲ್ಲ ಎಂದು ಶುಕ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟಕಿಯಾಡಿದ್ದಾರೆ.