ಪಕ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಸೋನಿಯಾ, ರಾಹುಲ್ ಗೈರು: ಏನಾಗುತ್ತಿದೆ ಕಾಂಗ್ರೆಸ್ ನಲ್ಲಿ?
ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ 136ನೇ ಸಂಸ್ಥಾಪನಾ ದಿನಾಚರಣೆಯನ್ನು ಸೋಮವಾರ (ಡಿ 28) ಆಚರಿಸಿಕೊಂಡಿತು. ಕಾಂಗ್ರೆಸ್ ಹುಟ್ಟಿದ್ದು, ಬೆಳೆದದ್ದು, ದೇಶಕ್ಕಾಗಿ ಕಾಂಗ್ರೆಸ್ ಮುಖಂಡರು ಮಾಡಿದ ತ್ಯಾಗವನ್ನು ಈ ಕಾರ್ಯಕ್ರಮದಲ್ಲಿ ಮುಖಂಡರು ವಿವರಿಸಿದರು.
ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷ ಅಲ್ಲ. ಅದೊಂದು ಆಂದೋಲನ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಪಕ್ಷ. ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ವೈಜ್ಞಾನಿಕ ಪ್ರಗತಿಗೆ ಕಾರಣ ಕಾಂಗ್ರೆಸ್.. ಹೀಗೆ, ಪಕ್ಷದ ಬಗ್ಗೆ ಮುಖಂಡರು ವಿವರಣೆಯನ್ನು ನೀಡಿದರು.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ರಾಹುಲ್ ಗಾಂಧಿ?
ಆದರೆ, ಪಕ್ಷದ ಕೇಂದ್ರ ಕಚೇರಿ ದೆಹಲಿಯಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ಕಳೆಗಟ್ಟಲಿಲ್ಲ. ಕಾರಣ, ಪಕ್ಷದ ಟಾಪ್ ಟು ನಾಯಕರು ಕಾರ್ಯಕ್ರಮದಲ್ಲಿ ಗೈರಾಗಿದ್ದು. ಒಂದು, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ, ಸಂಸದ ರಾಹುಲ್ ಗಾಂಧಿ.
ಪಕ್ಷದ ಹಲವಾರು ಉನ್ನತ ನಾಯಕರ ಸಭೆ ಕರೆದ ಸೋನಿಯಾ ಗಾಂಧಿ: ಬಂಡಾಯ ಶಮನಗೊಳಿಸುವ ಪ್ರಯತ್ನ!
ಶಿಸ್ತು ಮತ್ತು ಹೈಕಮಾಂಡ್ ಎಂದರೆ ಹೇಗೆ ಸ್ಟ್ರಾಂಗ್ ಆಗಿ ಇರಬೇಕು ಎನ್ನುವುದಕ್ಕೆ ಕೆಲವು ವರ್ಷಗಳ ಹಿಂದೆ ಸೋನಿಯಾ ಗಾಂಧಿ ಉದಾಹರಣೆಯಾಗಿದ್ದರು. ಬಿಜೆಪಿ ಪ್ರಾಬಲ್ಯ, ಸತತ ಸೋಲುಗಳು ಮತ್ತು ಆರೋಗ್ಯ ಸಮಸ್ಯೆಯಿಂದಾಗಿ, ಸೋನಿಯಾ ಗಾಂಧಿಯವರಿಗೆ ಪಕ್ಷದ ಮೇಲಿನ ಹಿಡಿತ ಸಡಿಲಗೊಳ್ಳಲಾರಂಭಿಸಿತು. ಹಾಗಾಗಿ, ಪಕ್ಷದ ಕಾರ್ಯವೈಖರಿ ಮತ್ತು ಮೊದಲ ಪಂಕ್ತಿಯ ನಾಯಕರ ಮೇಲೆ ಅಪಸ್ವರ ಏಳಲಾರಂಭಿಸಿತು.
ರಾಜಧಾನಿಯ ಅಕ್ಬರ್ ರಸ್ತೆಯಲ್ಲಿರುವ ದೆಹಲಿಯ ಎಐಸಿಸಿ ಪ್ರಧಾನ ಕಚೇರಿ
ದೆಹಲಿಯಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಇದ್ದವರು ಎ.ಕೆ.ಆಂಟನಿ, ಪ್ರಿಯಾಂಕಾ ವಾದ್ರಾ. ಇದರ ಜೊತೆಗೆ, ಸಂಘಟನೆಯಲ್ಲಿ ಬದಲಾವಣೆ, ಖಾಯಂ ಅಧ್ಯಕ್ಷರು ಪಕ್ಷಕ್ಕೆ ಬೇಕು ಎಂದು ಪತ್ರ ಬರೆದಿದ್ದ ಗುಲಾಂನಬಿ ಆಜಾದ್, ಆನಂದ್ ಶರ್ಮಾ ಕೂಡಾ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಮೂಲಕ ಪಕ್ಷದಲ್ಲಾಗಬೇಕಾಗಿರುವ ಬದಲಾವಣೆಗೆ ವೇದಿಕೆ ಸಿದ್ದವಾಗಬಹುದು ಎನ್ನುವ ಹಲವು ಮುಖಂಡರ ಊಹೆ ಸುಳ್ಳಾಯಿತು.
ಪಕ್ಷದಲ್ಲಿ ಬದಲಾವಣೆಯಾಗಬೇಕೆಂದು ಬಂಡಾಯ ಎದ್ದಿದ್ದ ನಾಯಕರು
ಪಕ್ಷದಲ್ಲಿ ಬದಲಾವಣೆಯಾಗಬೇಕೆಂದು ಪತ್ರ ಮುಖೇನ ಬಂಡಾಯ ಎದ್ದಿದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚು ನಾಯಕರಿಗೆ, ಸೋನಿಯಾ ಮತ್ತು ರಾಹುಲ್ ಗಾಂಧಿ ಗೈರು ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ಸೋನಿಯಾ ಗಾಂಧಿಯವರು ಕೋವಿಡ್ ಹಿನ್ನಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಸಂಸ್ಥಾಪನಾ ದಿನಾಚರಣೆಯ ಮುನ್ನಾದಿನವೇ ರಾಹುಲ್ ವಿದೇಶಕ್ಕೆ ಹಾರುವುದೆಂದರೆ, ಪಕ್ಷ ಸಂಘಟನೆಯಲ್ಲಿ ಇವರಿಗೆ ಉತ್ಸಾಹವಿಲ್ಲವೇ, ಹೀಗಾದರೆ ಬಿಜೆಪಿಯನ್ನು ಎದುರಿಸುವುದಾದರೂ ಹೇಗೆ ಎನ್ನುವುದು ಹಲವರ ಕೋಪಕ್ಕೆ ಕಾರಣವಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿಕೆ
"ರಾಹುಲ್ ಗಾಂಧಿಯವರು ಅವರ ಅಜ್ಜಿಯನ್ನು ನೋಡಲು ವಿದೇಶಕ್ಕೆ ಹೋಗಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ, ಖಾಸಗಿ ಪ್ರವಾಸ ಮಾಡಲು ಅವರಿಗೆ ಹಕ್ಕಿಲ್ಲವೇ, ಎಲ್ಲವನ್ನೂ ಬಹಿರಂಗ ಪಡಿಸಲು ಸಾಧ್ಯವೇ. ಬಿಜೆಪಿ ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದೆ"ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ. ಆದರೆ, ವೇಣುಗೋಪಾಲ್ ಅವರ ಹೇಳಿಕೆಗೆ ಅವರ ಪಕ್ಷದಲ್ಲೇ ಒಮ್ಮತವಿಲ್ಲ ಎನ್ನುವುದು ಗೌಪ್ಯವಾಗಿ ಉಳಿದಿಲ್ಲ.
ಪಕ್ಷದ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮಕ್ಕೆ ಸೋನಿಯಾ, ರಾಹುಲ್ ಗೈರು: ಏನಾಗ್ತಿದೆ ಕಾಂಗ್ರೆಸ್ ನಲ್ಲಿ?
ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಈಗಾಗಲೇ ಧುಮುಕಿಯಾಗಿದೆ. ಇನ್ನೊಂದು ಕಡೆ, ಅನ್ನದಾತರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಕಾಂಗ್ರೆಸ್ ಬಹಳ ಅಗ್ರೆಸ್ಸೀವ್ ಆಗಿ ಇರಬೇಕಾಗಿರುವ ಇಂತಹ ಸಮಯದಲ್ಲಿ ಟಾಪ್ ಟು ನಾಯಕರು ಇಲ್ಲವೆಂದರೆ ಹೇಗೆ, ಹೀಗಾದರೆ ಮುಂದಿನ ದಿನಗಳಲ್ಲಿ ಪಕ್ಷವನ್ನು ಜಯದ ಟ್ರ್ಯಾಕ್ ಗೆ ತಂದು ನಿಲ್ಲಿಸುವುದು ಸಾಧ್ಯವೇ ಎನ್ನುವುದು ಹಲವು ಕಾಂಗ್ರೆಸ್ಸಿಗರ ಚಿಂತೆಯ ವಿಷಯವಾಗಿದೆ.