ವಿಧಾನಸಭೆಯಲ್ಲಿ ಗೆದ್ದಿದ್ದನ್ನು ಲೋಕಸಭೆಯಲ್ಲಿ ಕಳೆದುಕೊಂಡ ಕಾಂಗ್ರೆಸ್
ನವದೆಹಲಿ, ಮೇ 23 : ಕಳೆದ ಡಿಸೆಂಬರ್ ನಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್ ಗಢದಲ್ಲಿ ಗೆಲುವನ್ನು ಸಾಧಿಸಿದ್ದ ರಾಹುಲ್ ಗಾಂಧಿ ಅವರು, ಅದೇ ಕಣದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ.
ಮಧ್ಯ ಪ್ರದೇಶದಲ್ಲಿ ಇರುವ 29 ಕ್ಷೇತ್ರಗಳಲ್ಲಿ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಕಂಡಿದೆ. ಭಾರತೀಯ ಜನತಾ ಪಕ್ಷ ಉಳಿದ 28 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜಸ್ಥಾನದಲ್ಲಿ ಕೂಡ ಒಂದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಂದಿದೆ. ಇರುವ 25 ಕ್ಷೇತ್ರಗಳಲ್ಲಿ ಬಿಜೆಪಿ 24ರಲ್ಲಿ ಮುಂದಿದೆ. ಛತ್ತೀಸ್ ಗಢದಲ್ಲಿಯೂ ಅದೇ ಕಥೆ ಮುಂದುವರಿದಿದೆ. 11 ಕ್ಷೇತ್ರಗಳಲ್ಲಿ ಬಿಜೆಪಿ 10ರಲ್ಲಿ ಮುಂದಿದ್ದರೆ, ಕಾಂಗ್ರೆಸ್ 1ರಲ್ಲಿ ಮಾತ್ರ ಮುನ್ನಡೆ ಕಾದುಕೊಂಡಿದೆ.
ನರೇಂದ್ರ ಮೋದಿ-ಅಮಿತ್ ಶಾ ಜೋಡಿಯನ್ನು ಶ್ಲಾಘಿಸಿದ ಓಮರ್ ಅಬ್ದುಲ್ಲಾ
ವಿಧಾನಸಭೆ ಚುನಾವಣೆಯಲ್ಲಿ ಛತ್ತೀಸ್ ಗಢದಲ್ಲಿ 90ರಲ್ಲಿ 68 ಸೀಟು ಗೆದ್ದು ಬೀಗಿದ್ದ ಕಾಂಗ್ರೆಸ್, ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುತ್ತಿರುವುದು ಅರಗಿಸಿಕೊಳ್ಳಲು ಕಾಂಗ್ರೆಸ್ಸಿಗೆ ಕಷ್ಟವಾಗುವಂತಿದೆ. ವಿಧಾನಸಭೆ ಚುನಾವಣೆಯಲ್ಲಿ ಕಳಪೆ ಸಾಧನೆ ತೋರಿದ್ದ ಬಿಜೆಪಿ ಲೋಕಸಭೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸುತ್ತ ಸಾಗಿದೆ.
ರಾಜಸ್ಥಾನದಲ್ಲಿ ಕೇವಲ 1 ಸೀಟಿನಿಂದ ಬಹುಮತ ಗಳಿಸಲು ವಿಫಲವಾಗಿದ್ದರೂ, ಸ್ವತಂತ್ರ ಅಭ್ಯರ್ಥಿಗಳ ಸಹಾಯದಿಂದ ಸರಕಾರ ರಚಿಸಿದ್ದ ಕಾಂಗ್ರೆಸ್, ಲೋಕಸಭೆಯಲ್ಲಿ ಇಷ್ಟು ಹೀನಾಯವಾಗಿ ಸೋಲುತ್ತದೆಂದು ಎಣಿಸಿರಲಿಲ್ಲ. ಮಧ್ಯಪ್ರದೇಶದಲ್ಲಿ ಕೂಡ 114 ಸೀಟು ಗೆದಿದ್ದ ಕಾಂಗ್ರೆಸ್ ಲೋಕಸಭೆಯಲ್ಲಿ ಕೇವಲ 1 ಸೀಟು ಗೆಲ್ಲುವಲ್ಲಿಯೂ ತಿಣುಕಾಡುತ್ತಿದೆ.
ಹುಟ್ಟಿದ ಒಂದು ವರ್ಷದ ದಿನವೇ ಮಹಾಘಟಬಂಧನ್ ಅವಸಾನ!
ಮಧ್ಯ ಪ್ರದೇಶದಲ್ಲಿ ರಾಹುಲ್ ಗಾಂಧಿ ಅವರ ರೈಟ್ ಹ್ಯಾಂಡ್ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಸೋಲು ಕಂಡಿದ್ದಾರೆ. ಇನ್ನು ಪ್ರಗ್ಯಾ ಸಿಂಗ್ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಕೂಡ ಭಾರೀ ಅಂತರದಿಂದ ಸೋತಿದ್ದಾರೆ. ಒಟ್ಟಿನಲ್ಲಿ ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ತಲೆಯೆತ್ತದಂತಾಗಿದೆ.
ಈ ನಡುವೆಯೇ, ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಬಿಜೆಪಿ ಸರ್ವ ಪ್ರಯತ್ನವನ್ನೂ ಮಾಡುತ್ತಿದೆ. ಈಗಾಗಲೆ, ಆಪರೇಷನ್ ಕಮಲ ಮಾಡಿ ಕೆಲ ಕಾಂಗ್ರೆಸ್ ಶಾಸಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂಬ ಮಾತು ಕೂಡ ಕೇಳಿಬಂದಿದೆ. ಈ ಪ್ರಯತ್ನದಿಂದಾಗಿಯೇ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವನ್ನು ಉರುಳಿಸುವ ಪ್ರಯತ್ನದಿಂದ ಬಿಜೆಪಿ ತಾತ್ಕಾಲಿಕವಾಗಿ ಹಿಂದೆ ಸರಿದಿದೆ.