ವಿಪ್ ಉಲ್ಲಂಘಿಸಿದ ಗುಜರಾತ್ ನ ಎಂಟು ಶಾಸಕರ ಉಚ್ಚಾಟನೆ
ನವದೆಹಲಿ, ಆಗಸ್ಟ್ 9 : ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದ್ದಕ್ಕಾಗಿ ಆರು ವರ್ಷದ ಕಾಲ ಪಕ್ಷದ ಎಂಟು ಶಾಸಕರನ್ನು ಬುಧವಾರ ಕಾಂಗ್ರೆಸ್ ಉಚ್ಚಾಟನೆ ಮಾಡಿದೆ.
ಪಟೇಲ್ ಗೆಲುವಿಂದ ಸಂತೋಷ, ನಿರಾಳವಾಗಿದೆ ಎಂದ ಸೋನಿಯಾ ಗಾಂಧಿ
ಪಕ್ಷದಿಂದ ಇತರ ಆರು ಶಾಸಕರನ್ನು ಮುಂದಿನ ದಿನಗಳಲ್ಲಿ ಉಚ್ಚಾಟನೆ ಮಾಡಲಾಗುವುದು. "ಗುಜರಾತ್ ನಲ್ಲಿ ಕಾಂಗ್ರೆಸ್ ನ ಎಂಟು ಶಾಸಕರನ್ನು ಈಗಾಗಲೇ ಉಚ್ಚಾಟನೆ ಮಾಡಲಾಗಿದೆ. ರಾಜ್ಯಸಭಾ ಚುನಾವಣೆ ವಿಪ್ ಉಲ್ಲಂಘಿಸಿದ್ದಕ್ಕಾಗಿ ಇನ್ನೂ ಶಾಸಕರನ್ನು ಆರು ಉಚ್ಚಾಟಿಸಲಾಗುವುದು" ಎಂದು ಗುಜರಾತ್ ಕಾಂಗ್ರೆಸ್ ನ ಉಸ್ತುವಾರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಮೂಲಗಳ ಪ್ರಕಾರ, ರಾಜ್ಯಸಭಾ ಚುನಾವಣೆಗೆ ಮುಂಚೆ ಪಕ್ಷ ಬಿಟ್ಟ ಶಾಸಕರು ಹಿರಿಯ ನಾಯಕ ಶಂಕರ್ ಸಿಂಗ್ ವಘೇಲಾರ ಆಪ್ತರು. ಪ್ರತಿಷ್ಠೆಯ ಕಣವಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಅವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಲವಂತ್ ಸಿನ್ಹಾ ಅವರನ್ನು ಮಂಗಳವಾರ ಸೋಲಿಸಿದರು.
ಇಬ್ಬರು ಕಾಂಗ್ರೆಸ್ ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಮತದಾನದ ವೇಳೆ ಬ್ಯಾಲೆಟ್ ಪೇಪರ್ ಅನ್ನು ಬಿಜೆಪಿ ಅವರಿಗೆ ತೋರಿಸಿದರು ಎಂಬ ಕಾರಣಕ್ಕೆ ಆ ಎರಡು ಮತವನ್ನು ಚುನಾವಣೆ ಆಯೋಗವು ಅಸಿಂಧುಗೊಳಿಸಿತ್ತು. ಇದರಿಂದ ಅಹ್ಮದ್ ಪಟೇಲ್ ರ ಗೆಲುವಿನ ಹಾದಿ ಸಲೀಸಾಯಿತು.