ವಿಶ್ವಾಸ ಮತಕ್ಕೆ ಸೋಲು, ಪುದುಚೆರಿಯಲ್ಲಿ ಸರ್ಕಾರ ಪತನ
ಪುದುಚೆರಿ, ಫೆಬ್ರವರಿ 22: ಪುದುಚೆರಿಯಲ್ಲಿ ಕಾಂಗ್ರೆಸ್-ಡಿಎಂಕೆ ಸರ್ಕಾರ ಪತನಗೊಂಡಿದೆ. ಸೋಮವಾರ ನಡೆದ ವಿಶ್ವಾಸಮತ ಯಾಚನೆಯ ವೇಳೆ ಮೈತ್ರಿಕೂಟದ ಸದಸ್ಯರು ಸಭಾತ್ಯಾಗ ನಡೆಸಿದ್ದರಿಂದ ಮುಖ್ಯಮಂತ್ರಿ ವಿ. ನಾರಾಯಣಸಾಮಿ ಅವರು ವಿಶ್ವಾಸ ಮತ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಚುನಾವಣೆ ಸನ್ನಿಹಿತದಲ್ಲಿರುವ ಕೇಂದ್ರಾಡಳಿತ ಪ್ರದೇಶದ ರಾಜಕೀಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ.
ಲೆಫ್ಟಿನೆಂಟ್ ಗವರ್ನರ್ ತಮಿಳ್ಸಾಯಿ ಸೌಂದರರಾಜನ್ ಅವರು ಸೋಮವಾರ ವಿಶ್ವಾಸಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ವಿ. ನಾರಾಯಣಸಾಮಿ ಅವರಿಗೆ ಆದೇಶಿಸಿದ್ದರು. ಸೋಮವಾರ ನಡೆದ ವಿಧಾನಸಭೆ ವಿಶೇಷ ಅಧಿವೇಶನಕ್ಕೂ ಮುನ್ನ ಮಾತನಾಡಿದ ನಾರಾಯಣಸಾಮಿ ತಮಗೆ ಬಹುಮತ ಇರುವುದಾಗಿ ಹೇಳಿಕೊಂಡಿದ್ದರು. ಇದೇ ಆತ್ಮವಿಶ್ವಾಸದಲ್ಲಿ ಸದನದಲ್ಲಿ ವಿಶ್ವಾಸಮತ ಯಾಚಿಸಿದ್ದರು.
ಆದರೆ ಸದನವನ್ನು ಉದ್ದೇಶಿಸಿ ನಾರಾಯಣಸಾಮಿ ಅವರು ಮಾತನಾಡಿದ ಬಳಿಕ ವಿಶ್ವಾಸಮತ ಯಾಚನೆಗೂ ಮುನ್ನವೇ ಆಡಳಿತಾರೂಢ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಸದಸ್ಯರು ಸದನದಿಂದ ಹೊರ ನಡೆದರು. ಈ ಸಂದರ್ಭದಲ್ಲಿ ವಿರೋಧಪಕ್ಷ ಬಿಜೆಪಿ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಬಳಿಕ ನಾರಾಯಣಸಾಮಿ ಕೂಡ ಸದನದಿಂದ ಹೊರನಡೆದರು. ನಾರಾಯಣ ಸ್ವಾಮಿ ಸರ್ಕಾರರ ಬಹುಮತ ಕಳೆದುಕೊಂಡಿದೆ ಎಂದು ಸ್ಪೀಕರ್ ವಿ.ಪಿ. ಶಿವಕೊಳುಂಡು ಪ್ರಕಟಿಸಿದರು.
ಸರ್ಕಾರದ ಬಲ ಕುಸಿತ
26 ಸದಸ್ಯರ ಸಂಖ್ಯೆಯಿರುವ ವಿಧಾನಸಭೆಯಲ್ಲಿ 14 ಬಹುಮತದ ಸಂಖ್ಯೆಯಾಗಿದೆ. ಆದರೆ ಸಾಲು ಸಾಲು ಶಾಸಕರ ರಾಜೀನಾಮೆಯಿಂದ ಸರ್ಕಾರದ ಬಲ 12ಕ್ಕೆ ಕುಸಿದಿತ್ತು. ಬಿಜೆಪಿಯ ಮೂವರು ನಾಮನಿರ್ದೇಶಿತ ಸದಸ್ಯರಿಗೆ ಮತ ಚಲಾಯಿಸಲು ಅವಕಾಶ ನೀಡಬಾರದು ಎಂದು ಸ್ಪೀಕರ್ ಅವರನ್ನು ಕಾಂಗ್ರೆಸ್ ಒತ್ತಾಯಿಸಿತ್ತು. ಈ ಶಾಸಕರನ್ನು ಹೊರತುಪಡಿಸಿದರೆ ಆಡಳಿತಾರೂಢ ಕಾಂಗ್ರೆಸ್ಗೆ ಬಹುಮತ ಸಿಗುತ್ತಿತ್ತು. ಆದರೆ ನಾಮನಿರ್ದೇಶಿತ ಸದಸ್ಯರು ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮತ ಚಲಾಯಿಸುವ ಅಧಿಕಾರ ಹೊಂದಿದ್ದಾರೆ ಎಂದು ಈ ಹಿಂದೆಯೇ ಸುಪ್ರೀಂಕೋರ್ಟ್ ಆದೇಶಿಸಿತ್ತು.
ಕೇಂದ್ರ ಸರ್ಕಾರದಿಂದ ದ್ರೋಹ
ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮತ್ತು ಕೇಂದ್ರ ಸರ್ಕಾರವು ವಿರೋಧಪಕ್ಷದೊಂದಿಗೆ ಸೇರಿಕೊಂಡು ಸರ್ಕಾರ ಉರುಳಿಸಲು ಪ್ರಯತ್ನಿಸಿದ್ದರು. ನಮ್ಮ ಶಾಸಕರು ಒಗ್ಗಟ್ಟಿನಿಂದ ಇದ್ದು ಐದು ವರ್ಷದಿಂದ ಸರ್ಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ನಾವು ಕೇಳಿದ ಅನುದಾನ ನೀಡದೆ ಕೇಂದ್ರ ಸರ್ಕಾರ ಪುದುಚೆರಿಯ ಜನತೆಗೆ ದ್ರೋಹ ಎಸಗಿದೆ ಎಂದು ನಾರಾಯಣಸಾಮಿ ಆರೋಪಿಸಿದರು.
ಸಾರ್ವಜನಿಕ ಸಭೆ ಭಾಷಣ
ನಾರಾಯಣಸ್ವಾಮಿ ಅವರ ಭಾಷಣಕ್ಕೆ ವಿಪಕ್ಷ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಇರುವ ಮುಖ್ಯಮಂತ್ರಿಗಳು ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುವಂತೆ ಏಕೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಆದರೆ ಶಾಸಕರಿಗೆ ಕೂರುವಂತೆ ಸೂಚಿಸಿದ ಸ್ಪೀಕರ್, ಮಾತು ಮುಂದುವರಿಸಲು ಅವಕಾಶ ನೀಡಿದರು.
ರಾಜಕೀಯ ವೇಶ್ಯಾವಾಟಿಕೆ
ಪುದುಚೆರಿಯಲ್ಲಿ ಈಗ ನಡೆದಿರುವುದು ರಾಜಕೀಯ ವೇಶ್ಯಾವಾಟಿಕೆ. ಆದರೆ ಸತ್ಯ ಹೊರಬೀಳಲಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬಿಜೆಪಿ ಹಾದಿತಪ್ಪಿಸುತ್ತಿದೆ. ತಮಿಳುನಾಡು ಮತ್ತು ಪುದುಚೆರಿಯಲ್ಲಿ ನಾವು ಎರಡು ಭಾಷಾ ವ್ಯವಸ್ಥೆ ಅನುಸರಿಸುತ್ತಿದ್ದೇವೆ. ಆದರೆ ಬಿಜೆಪಿ ಇಲ್ಲಿ ಹಿಂದಿ ಹೇರಿಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ನಾರಾಯಣಸಾಮಿ ಆರೋಪಿಸಿದರು.
ಅವಕಾಶವಾದಿ ಶಾಸಕರು
ಶಾಸಕರು ತಮ್ಮ ಪಕ್ಷಕ್ಕೆ ನಿಷ್ಠರಾಗಿರಬೇಕು. ರಾಜೀನಾಮೆ ನೀಡಿದ ಶಾಸಕರು ಜನರನ್ನು ಎದುರಿಸಲು ಮುಖ ಹೊಂದಿರುವುದಿಲ್ಲ. ಏಕೆಂದರೆ ಅವರನ್ನು ಅವಕಾಶವಾದಿಗಳು ಎಂದು ಜನರು ಹೀಗಳೆಯುತ್ತಾರೆ. ನಾವು ಡಿಎಂಕೆ ಮತ್ತು ಸ್ವತಂತ್ರ ಶಾಸಕರ ಬೆಂಬಲದಿಂದ ಸರ್ಕಾರ ರಚಿಸಿದ್ದೆವು. ಅದರ ಬಳಿಕ ನಾವು ಅನೇಕ ಚುನಾವಣೆಗಳನ್ನು ಎದುರಿಸಿದ್ದೇವೆ. ಉಪ ಚುನಾವಣೆಗಳಲ್ಲಿ ಗೆದ್ದಿದ್ದೇವೆ. ಪುದುಚೆರಿಯ ಜನರು ನಮ್ಮ ಮೇಲೆ ನಂಬಿಕೆ ಇರಿಸಿದ್ದಾರೆ ಎನ್ನುವುದುಕ್ಕೆ ಇದೇ ಸಾಕ್ಷಿ ಎಂದರು.