'ವಂದೇ ಮಾತರಂ' ಗೀತೆಗೆ ಕತ್ತರಿ ಹಾಕಿದ್ದರಿಂದಲೇ ದೇಶ ವಿಭಜಿಸಿತು: ಶಾ
ಕೋಲ್ಕತ್ತಾ, ಜೂನ್ 28: 'ವಂದೇ ಮಾತರಂ ಗೀತೆಯನ್ನು ತುಂಡರಿಸಿದ್ದು ಕಾಂಗ್ರೆಸ್, ಈ ಮೂಲಕ ಕಾಂಗ್ರೆಸ್ ದೇಶವನ್ನು ವಿಭಜಿಸುವುದಕ್ಕೂ ಕಾರಣವಾಯಿತು' ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.
ವಂದೇ ಮಾತರಂ ಗೀತೆಯ ಕರ್ತೃ ಬಂಕೀಮ್ ಚಂದ್ರ ಚಟ್ಟೋಪಾಧ್ಯಾಯ ಅವರ ಜನ್ಮದಿನಾಚರಣೆ(ಜೂನ್ 27) ನಿಮಿತ್ತ ಕೋಲ್ಕತ್ತದಲ್ಲಿ ಸಂಮಸ್ಮರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ವಂದೇ ಮಾತರಂ ಗೀತೆಯು ಈ ದೇಶದ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತದೆ. ಈ ಗೀತೆಗೆ ಕೋಮು ಬಣ್ಣ ಬಳಿಯುವುದು ಸರಿಯಲ್ಲ. ಈ ಹಾಡು ಯಾವುದೇ ಒಂದು ಧರ್ಮಕ್ಕಾಗಲೀ, ಜನಾಂಗಕ್ಕಾಗಲೀ ಸೀಮಿತವಾಗಿಲ್ಲ' ಎಂದು ಅವರು ಹೇಳಿದರು.
ಯಡಿಯೂರಪ್ಪ-ಅಮಿತ್ ಶಾ ಭೇಟಿಯ ರಹಸ್ಯ ಬಹಿರಂಗ!
'ದೇಶದ ವೈಭವವನ್ನು ವಂದೇ ಮಾತರಂ ಗೀತೆ ಪ್ರಚುರಪಡಿಸುತ್ತದೆ. ಆದರೆ ಇದು ಹಿಂದುಗಳ ಪರವಾಗಿದೆ ಎಂದು ಅದರ ಕೆಲವು ಪ್ಯಾರಾಗಳನ್ನೇ ಕಾಂಗ್ರೆಸ್ ಕತ್ತರಿಸಿದೆ. ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್ ಒಂದೇ ಮಾತರಂ ಅನ್ನು ವಿಭಜಿಸಿತು. ಕಾಂಗ್ರೆಸ್ ನಾಯಕರು ಈ ತಪ್ಪನ್ನು ಮಾಡದೆ ಇದ್ದಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ ಎಂದು ಶಾ ಹೇಳಿದ್ದಾರೆ.
'ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ತಾತ್ಕಾಲಿಕ ಸರ್ಕಾರ ರಚಿಸಿದ್ದಾಗ, ವಂದೇ ಮಾತರಂ ಅನ್ನು ರಾಷ್ಟ್ರಗೀತೆಯನ್ನಾಗಿ ಒಪ್ಪಿಕೊಳ್ಳಲಾಗಿತ್ತು. ಆದರೆ ಇಸ್ಲಿಮರ ಭಾವನೆಗಳಿಗೆ ನೋವಾಗುತ್ತದೆ ಎಂಬ ಸಬೂಬು ನೀಡಿ ಈ ಗೀತೆಯ ಎರಡೇ ಪ್ಯಾರಾಗಳನ್ನು ಹಾಡುವಂತಾಯಿತು' ಎಂದು ಅವರು ಹೇಳಿದರು.
'ಕೆಲವು ಇತಿಹಾಸಜ್ಞರು ಖಿಲಾಫತ್ ಚಳವಳಿ, ಬ್ರಿಟಿಷರ ಒಡೆದು ಆಳುವ ನೀತಿ, ಮುಸ್ಲಿಂ ಲೀಗ್ ನ ದ್ವೈರಾಷ್ಟ್ರ ಪದ್ಧತಿ ಗಳನ್ನು ತೆಗಳುತ್ತಾರೆ. ಆದರೆ ನಾನು ಹೇಳುತ್ತೇನೆ ಇವೆಲ್ಲಕ್ಕಿಂತ ಹೆಚ್ಚಾಗಿ ದೇಶವನ್ನು ವಿಭಜಿಸುವುದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ಸಿಗರ ಅಲ್ಪಸಂಖ್ಯಾತ ಓಲೈಕೆಯ ರಾಜಕೀಯ' ಎಂದು ಶಾ ಗುಡುಗಿದರು.