ಮೋದಿಯನ್ನು ಇವಾಂಕಾ ಹೊಗಳಿದ್ದಕ್ಕೆ ಕಾಂಗ್ರೆಸ್ ಕಣ್ಣು ಕೆಂಪು
Recommended Video
ನವದೆಹಲಿ, ನವೆಂಬರ್ 29 : "ಇವಾಂಕಾ ಟ್ರಂಪ್ ಅವರು ಭಾಗವಹಿಸುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆ ಉನ್ನತ ಸ್ಥಾನಕ್ಕೆ ಅಗೌರವ ತಂದಿದ್ದಾರೆ" ಎಂದು ಕಾಂಗ್ರೆಸ್ ಧುರೀಣ ಆನಂದ್ ಶರ್ಮಾ ಅವರು ಟೀಕಿಸಿದ್ದಾರೆ.
ಆ ಸಮಾರಂಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಇದ್ದರು. ಇದರಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸುವ ಅಗತ್ಯವೇನಿತ್ತು. ಅವರಿಗೆ ಹೊರಗಿನವರಿಂದ ಮತ್ತು ವಿದೇಶಿ ರೇಟಿಂಗ್ ಸಂಸ್ಥೆಗಳಿಂದ ಸರ್ಟಿಫಿಕೇಟ್ ಪಡೆದುಕೊಳ್ಳುವ ಅವಶ್ಯಕತೆಯೇನಿದೆ ಎಂದು ಅವರು ವಂಗ್ಯವಾಡಿದ್ದಾರೆ.
ಚಹಾವಾಲಾನಿಂದ ಪ್ರಧಾನಿ, ನಿಮ್ಮ ಪರಿವರ್ತನೆ ಅಮೋಘ: ಇವಾಂಕಾ
ಚಾಯ್ ವಾಲಾನಿಂದ ಪ್ರಧಾನ ಮಂತ್ರಿಯವರೆಗೆ ನರೇಂದ್ರ ಮೋದಿಯವರ ಪಯಣ ಅಮೋಘವಾಗಿದೆ. ಅವರ ಅಡಿಯಲ್ಲಿ ಭಾರತದ ಆರ್ಥಿಕ ಸ್ಥಿತಿ ಸದೃಢವಾಗಿದೆ. ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಟ್ರಂಪ್ ಅಡಿಯಲ್ಲಿ ಎರಡೂ ದೇಶಗಳ ಬಾಂಧವ್ಯ ಗಾಢವಾಗಿರುತ್ತದೆ ಎಂದು ಟ್ರಂಪ್ ಮಗಳು ಇವಾಂಕಾ ಶ್ಲಾಘಿಸಿದ್ದರು.
ಈ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಟೀಕಾಸ್ತ್ರವನ್ನು ನರೇಂದ್ರ ಮೋದಿ ಮೇಲೆ ಎಸೆದಿದ್ದಾರೆ. ಅವರು ಅವರಿವರಿಂದ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವ ಬದಲು ಅವರ ತವರು ರಾಜ್ಯವಾದ ಗುಜರಾತ್ ನ ಜನರಿಂದ ಪಡೆದುಕೊಳ್ಳಲಿ ಎಂದು ಅವರು ಮೋದಿಗೆ ಸವಾಲು ಹಾಕಿದ್ದಾರೆ.
ಮೋದಿಯನ್ನು ಹಾಡಿ ಹೊಗಳಿದ್ದ ಇವಾಂಕಾ
ಹೈದರಾಬಾದ್ ನಲ್ಲಿ ನಡೆಯಲಿರುವ ಮೂರು ದಿನಗಳ ಜಾಗತಿಕ ಉದ್ಯಮಶೀಲತಾ ಶೃಂಗಸಭೆಯನ್ನು ನರೇಂದ್ರ ಮೋದಿಯವರು ಇವಾಂಕಾ ಟ್ರಂಪ್ ಜೊತೆ ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಮೋದಿಯವರನ್ನು ಇವಾಂಕಾ ಅವರು ಹಾಡಿ ಹೊಗಳಿದ್ದರು. ಇದು ಈಗ ಕಾಂಗ್ರೆಸ್ ಕಣ್ಣು ಕೆಂಪಾಗುವಂತೆ ಮಾಡಿದೆ.
ಶರ್ಮಾ ಟೀಕೆಗೆ ಟ್ವಿಟ್ಟಿಗರ ಪ್ರತಿಟೀಕೆಗಳು
ಆನಂದ್ ಶರ್ಮಾ ಅವರು ಮಾಡಿರುವ ಟೀಕೆಗೆ ಪ್ರತಿಟೀಕೆಗಳು ಕೂಡ ಬಂದಿವೆ. ಯಾವ ದೇಶದಿಂದ ಆನಂದ್ ಸಿಂಗ್ ಎಂಬುವವರನ್ನು ಕಾಂಗ್ರೆಸ್ ಆಮದು ಮಾಡಿಕೊಂಡಿದೆ, ಯಾರಿಗಾದರೂ ಐಡಿಯಾ ಇದೆಯಾ ಎಂದು ಬಿಕಾಶ್ ಕುಮಾರ್ ಎಂಬುವವರು ವಂಗ್ಯವಾಡಿದ್ದಾರೆ.
ಯಾರು ಈ ಚೆಂದುಳ್ಳಿ ಚೆಲುವೆ ಇವಾಂಕಾ ಟ್ರಂಪ್..?
ಇಡೀ ಕಾಂಗ್ರೆಸ್ ಸಿಕ್ಕಾಪಟ್ಟೆ ಇಂಟೆಲಿಜೆಂಟ್
ಈ ಕಾರಣಕ್ಕಾಗಿಯೇ ಜವಾಹರಲಾಲ್ ನೆಹರೂ ಅವರು ವಿಶ್ವಸಂಸ್ಥೆಯ ಸೀಟಿಗಾಗಿ ದುಂಬಾಲು ಬೀಳಲಿಲ್ಲ. ಅವರಿಗೆ ಯಾವುದೇ ವಿದೇಶಿ ಸಂಸ್ಥೆಯಿಂದ ಸರ್ಟಿಫಿಕೇಟ್ ಬೇಕಾಗಿಲ್ಲ. ನೆಹರೂ ಅವರಂತೆಯೇ ಇಡೀ ಕಾಂಗ್ರೆಸ್ ಪಾರ್ಟಿ ಸಿಕ್ಕಾಪಟ್ಟೆ ಬುದ್ಧಿವಂತಿಕೆಯಿಂದ ಕೂಡಿದೆ ಎಂದು ಬಿನಯ್ ಎಂಬುವವರು ಕುಹಕವಾಡಿದ್ದಾರೆ.
ಗುಜರಾತಿ ಜನರೇ ಡಿ.18ರಂದು ಸರ್ಟಿಫಿಕೇಟ್ ನೀಡಲಿದ್ದಾರೆ
ಡಿಸೆಂಬರ್ 18ನೇ ತಾರೀಖಿನಂದು ಗುಜರಾತಿಗಳಿಂದ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ ಎಂದು ಅಮಿತ್ ಎಂಬುವವರು ಮಾರ್ಮಿಕವಾಗಿ ನುಡಿದಿದ್ದಾರೆ. ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14ರಂದು ವಿಧಾನಸಭೆಗೆ ಮತದಾನ ನಡೆಯಲಿದ್ದು, ಡಿಸೆಂಬರ್ 18ರಂದು ಫಲಿತಾಂಶ ಹೊರಬೀಳಲಿದೆ.
ಈಗ ಬರ್ನಾಲ್ ಹಚ್ಚಿಕೊಳ್ಳುವ ಸಮಯ
ಕಾಂಗ್ರೆಸ್ ನವರು ಈಗ ಬರ್ನಾಲ್ ಹಚ್ಚಿಕೊಳ್ಳುವ ಸಮಯ. ಈಗ ಮಾತ್ರವಲ್ಲ ಮುಂದೆ 2019ರಲ್ಲಿ ಕೂಡ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆಗೆ ಕೂಡದೆ ಬೇರೆ ದಾರಿಯಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಈ ರೀತಿ ಮಾತನಾಡಲು ನಿಮಗೆ ನಾಚಿಕೆ ಬರಬೇಕು ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.