ಇವಿಎಂ ವಿರುದ್ಧದ ಅಭಿಯಾನವನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡ ಕಾಂಗ್ರೆಸ್
ನವದೆಹಲಿ, ಡಿಸೆಂಬರ್ 10 : ವಿದ್ಯುನ್ಮಾನ ಮತ ಯಂತ್ರ ಬರೀ ಮೋಸ, ಅವನ್ನು ದುರ್ಬಳಸಿಕೊಳ್ಳಲಾಗುತ್ತಿದೆ, ಹಾಗೆ ಹೀಗೆ ಎಂದು ಸದಾ ಕ್ಯಾತೆ ತೆಗೆಯುತ್ತಲೇ ಇದ್ದ ಕಾಂಗ್ರೆಸ್ ಈಬಾರಿ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ (ಇವಿಎಂ) ಅನ್ನು ತನ್ನ ಲಾಭಕ್ಕೆ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದೆ.
ಚುನಾವಣೆ ಪ್ರಕ್ರಿಯೆ ಆರಂಭವಾದಂದಿನಿಂದಲೇ ಕಾಂಗ್ರೆಸ್ ಇವಿಎಂ ವಿರುದ್ಧ ತನ್ನ ಅಭಿಯಾನ ಪ್ರಾರಂಭಿಸಿತ್ತು. ಮತದಾನ ಆದ ನಂತರ ಕೂಡ ಹಲವಾರು ಕಡೆಗಳಲ್ಲಿ ಮತಯಂತ್ರ ಕೆಟ್ಟಿದ್ದರಿಂದ ಅಲ್ಲೆಲ್ಲ ಮರುಮತದಾನ ಮಾಡಬೇಕು ಎಂದು ಕಮಲ್ ನಾಥ್ ಅವರು ಒತ್ತಾಯಿಸುತ್ತಲೇ ಇದ್ದರು.
ಇದು ಯಾವ ರೀತಿ ಮುಂದುವರಿಯಿತೆಂದರೆ, ಇವಿಎಂ ವಿರುದ್ಧದ ಧ್ವನಿ ಕ್ರಮೇಣ ಚಳವಳಿಯಾಗುವಂತೆ ಕಾಂಗ್ರೆಸ್ ನೋಡಿಕೊಂಡಿತು. ಯಾರ್ಯಾರು ಇವಿಎಂ ವಿರೋಧಿಸುತ್ತಾರೋ ಅವರೆಲ್ಲ ಭಾರತೀಯ ಜನತಾ ಪಕ್ಷದ ವಿರುದ್ಧ ಎಂಬಂತೆ ಬಿಂಬಿಸಲು ಆರಂಭಿಸಿತು. ಇದರಿಂದ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಬಲವಾಗುತ್ತ ಸಾಗಿತು.
'ಇವಿಎಂ ಮೇಲೆ ಕಣ್ಣಿಡಿ, ಮೋದಿ ಭಾರತದಲ್ಲಿ ಅವಕ್ಕೆ ನಿಗೂಢ ಶಕ್ತಿಯಿದೆ'
ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಕ್ಷಮತೆಯನ್ನು ಸಂಶಯಿಸಿ ನಡೆಸಿದ ಆಂದೋಲನ ಮಧ್ಯ ಪ್ರದೇಶದಲ್ಲಿ ಮಾತ್ರವಲ್ಲ ರಾಜಸ್ಥಾನದಲ್ಲಿಯೂ ಕಾಂಗ್ರೆಸ್ಸಿಗೆ ಭರ್ಜರಿ ಬಳುವಳಿಯನ್ನು ತಂದುಕೊಟ್ಟಿದೆ. ಶ್ರೀಸಾಮಾನ್ಯರು ಮಾತ್ರವಲ್ಲ, ಸರಕಾರಿ ನೌಕರರು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಪಲ್ಗೊಂಡ ಕಾರ್ಯಕರ್ತರು ಕೂಡ ಇವಿಎಂ ಕಾರ್ಯಕ್ಷಮತೆಯನ್ನು ಸಂಶಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಇದು ಒಳ್ಳೆಯ ಬೆಳವಣಿಗೆ ಅಲ್ಲ
ಆದರೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಚುನಾವಣಾ ಪಂಡಿತರು ಅಭಿಪ್ರಾಯ ಪಡುತ್ತಿದ್ದಾರೆ. ಏಕೆಂದರೆ, ಯಾವುದೇ ಚುನಾವಣೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುವಲ್ಲಿ ಚುನಾವಣಾ ಆಯೋಗದ ಪಾತ್ರ ಹಿರಿದಾಗಿರುತ್ತದೆ ಮತ್ತು ಇವಿಎಂ ಮೇಲೆ ಸಂಪೂರ್ಣ ನಂಬಿಕೆ ಇಡಬೇಕಾಗುತ್ತದೆ. ಇವಿಎಂ ಮೇಲೆ ಅಪನಂಬಿಕೆ ವ್ಯಕ್ತಪಡಿಸುವುದರಿಂದ ಇಡೀ ಚುನಾವಣೆ ಪ್ರಕ್ರಿಯೆಯ ಮೇಲೆ ಅನುಮಾನ ಮೂಡಿಸಿದಂತಾಗುತ್ತದೆ. ಚುನಾವಣಾ ಆಯೋಗದ ಮೇಲೆ ನಂಬಿಕೆ ಬರುವಂತೆ ಮಾತನಾಡುವುದು ಎಲ್ಲ ಸರಕಾರಿ ನೌಕರರ ಕರ್ತವ್ಯ. ಆದರೆ, ಅವರು ಅದನ್ನು ಮಾಡಿಲ್ಲದಿರುವುದು ನಿಜಕ್ಕೂ ವಿಪರ್ಯಾಸ ಎಂಬುದು ಅವರ ಅಭಿಪ್ರಾಯ.
ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ : ಡೇಲಿಹಂಟ್ ನಲ್ಲಿ ತ್ವರಿತ ಅಪ್ಡೇಟ್ ಪಡೆಯಿರಿ
ಅಮರಿಕೊಂಡ ಇವಿಎಂ ವಿರುದ್ಧದ ಕಾರ್ಮೋಡ
ಮಧ್ಯ ಪ್ರದೇಶದಲ್ಲಾಗಲಿ ಅಥವಾ ರಾಜಸ್ಥಾನದಲ್ಲಾಗಲಿ ಮತದಾನ ಹೆಚ್ಚಾಗಲೆಂದು ಚುನಾವಣಾ ಆಯೋಗ ಸಾಕಷ್ಟು ಶ್ರಮ ವಹಿಸಿದೆ. ಆದರೆ, ಇವಿಎಂ ಬಳಸುವುದರಿಂದ ಪಾರದರ್ಶಕವಾಗಿ ಮತ್ತು ಮುಕ್ತವಾಗಿ ಮತದಾನ ಮಾಡಬಹುದು ಎಂದು ಜನರಲ್ಲಿ ಜಾಗೃತಿ ಮೂಡಿಸಿ, ಇವಿಎಂ ಮೇಲೆ ಅಮರಿಕೊಂಡಿದ್ದ ಕಾರ್ಮೋಡವನ್ನು ಸರಿಸುವಲ್ಲಿ ಅಷ್ಟೊಂದು ಪ್ರಯತ್ನ ನಡೆಸಿಲ್ಲ. ಮತದಾನ ಹಾಕಿದ ಮತ ತಾವು ಇಚ್ಛಿಸಿದ ಪಕ್ಷಕ್ಕೇ ಹೋಗಿದೆ ಎಂದು ಸ್ಪಷ್ಟಪಡಿಸುವಂಥ ವಿವಿಪ್ಯಾಟ್ ಮಷೀನ್ ಅನ್ನು ಕೂಡ ಬಳಸಲಾಗಿದ್ದರೂ, ಇವಿಎಂ ಮೇಲೆ ಸಂಪೂರ್ಣ ನಂಬಿಕೆ ಹುಟ್ಟುವಂತೆ ಮಾಡಲು ಆಯೋಗವೇ ವಿಫಲವಾಗಿದೆ.
ವಿಶ್ಲೇಷಣೆ : ಅಕಸ್ಮಾತ್ ಚುನಾವಣೋತ್ತರ ಸಮೀಕ್ಷೆ ಸತ್ಯವಾದರೆ...
ರಾಜಕೀಯ ಪಂಡಿತರ ಮಾತು ಒಪ್ಪದ ಆಯೋಗ
ರಾಜಕೀಯ ಪಂಡಿತರ ಈ ಅಭಿಪ್ರಾಯವನ್ನು ಮಧ್ಯ ಪ್ರದೇಶದ ಚುನಾವಣಾ ಆಯುಕ್ತ ಕಾಂತ ರಾವ್ ಅವರು ಒಪ್ಪುವುದಿಲ್ಲ. ಇವಿಎಂ ಮೇಲೆ ಆವರಿಸಿಕೊಂಡಿದ್ದ ಎಲ್ಲ ಸಂಶಯಗಳನ್ನು ನಿವಾರಿಸಲು ಚುನಾವಣಾ ಆಯೋಗ ಎಲ್ಲ ಪ್ರಯತ್ನ ನಡೆಸಿದೆ. ಆದರೆ, ಇವಿಎಂಗಳು ಕೂಡ ಆಡಳಿತ ನಡೆಸುತ್ತಿರುವ ಪಕ್ಷದ ಅಧೀನ ಅಥವಾ ಹಿಡಿತದಲ್ಲಿಯೇ ಇರುತ್ತವೆ, ಅವನ್ನು ದುರ್ಬಳಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿ ಮನೆಮಾಡಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ಸಿನ ಸ್ಟ್ರಾಟಜಿ ತುಂಬಾ ಚೆನ್ನಾಗಿ ಕೆಲಸ ಮಾಡಿದೆ.
ಬಿಜೆಪಿಗೆ 'ಟುಡೇಸ್ ಚಾಣಕ್ಯ' ಶಾಕ್: ಲೋಕಸಮರಕ್ಕೂ ಮುನ್ನ ಮುಖಭಂಗ
ತನ್ನ ಬೆನ್ನು ತಾನೇ ತಟ್ಟಿಕೊಂಡ ಕಾಂಗ್ರೆಸ್
ಇವಿಎಂ ಬಗ್ಗೆ ಇಂಥ ತಪ್ಪು ಕಲ್ಪನೆ ಇದ್ದರೂ ಮಧ್ಯ ಪ್ರದೇಶವಾಗಲಿ, ರಾಜಸ್ಥಾನವಾಗಲಿ ಹೆಚ್ಚು ಸಂಖ್ಯೆಯಲ್ಲಿ ಮತದಾರರು ಮತದಾನ ಮಾಡಿದ್ದಾರೆ. ಮಧ್ಯ ಪ್ರದೇಶದಲ್ಲಿ ಶೇ.65.5ರಷ್ಟು ಮತದಾನವಾಗಿದ್ದರೆ, ರಾಜಸ್ಥಾನದಲ್ಲಿ ಅದಕ್ಕಿಂತಲೂ ಹೆಚ್ಚು, ಅಂದರೆ ಶೇ. 74.21ರಷ್ಟು ಮತದಾನವಾಗಿದೆ. ಇವಿಎಂ ವಿರುದ್ಧ ಭಾರೀ ಪ್ರಮಾಣದಲ್ಲಿ ಅಭಿಯಾನ ಆರಂಭಿಸಿದ್ದರಿಂದಲೇ ಹೆಚ್ಚು ಸಂಖ್ಯೆಯಲ್ಲಿಮತದಾನರರು ಬಂದು ಮತದಾನ ಮಾಡಲು ಸಾಧ್ಯವಾಯಿತು ಎಂದು ಕಾಂಗ್ರೆಸ್ ತನ್ನ ಬೆನ್ನು ತಾನೇ ತಟ್ಟಿಕೊಂಡಿದೆ. ಆದರೆ, ಇದು ಸರಿಯಾದ ಸ್ಟ್ರಾಟಜಿಯಾ? ಇದು ಎಲ್ಲಾ ಚುನಾವಣೆಯಲ್ಲೂ ಕೈಗೂಡುವುದಾ? ಅಥವಾ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಭರ್ಜರಿಯಾಗಿ ಕೈಕೊಡಲಿದೆಯಾ?