ಉತ್ತರಾಧಿಕಾರಿ ಆಯ್ಕೆ ವಿಫಲ, ಸೋನಿಯಾಗೆ ಮತ್ತೆ ಸಾರಥ್ಯ!
Recommended Video
ಬೆಂಗಳೂರು, ಆಗಸ್ಟ್ 11 : ಸುಮಾರು 20 ತಿಂಗಳ ಹಿಂದೆ ರಾಹುಲ್ ಗಾಂಧಿಗೆ ಪಕ್ಷವನ್ನು ಮುನ್ನೆಡೆಸಲು ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ರಾಹುಲ್ ಗಾಂಧಿ ರಾಜೀನಾಮೆ ನೀಡಿದ ಮೂರು ತಿಂಗಳ ಬಳಿಕ ಸೋನಿಯಾ ಪಕ್ಷದ ಮಧ್ಯಂತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸುಮಾರು 12 ಗಂಟೆಗಳ ಕಾಲ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ (ಸಿಡಬ್ಲ್ಯುಸಿ) ರಾಹುಲ್ ಗಾಂಧಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವಲ್ಲಿ ವಿಫಲವಾಗಿದೆ. ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯುವ ತನಕ ಸೋನಿಯಾ ಗಾಂಧಿ ಅಧ್ಯಕ್ಷರಾಗಿರಲಿದ್ದಾರೆ.
ಸೋನಿಯಾ ಗಾಂಧಿ ಮತ್ತೆ ಅಧ್ಯಕ್ಷೆ: ಆಯ್ಕೆಗೆ ಕಾರಣವೇನು?
2017ರ ಡಿಸೆಂಬರ್ನಲ್ಲಿ ಸೋನಿಯಾ ಗಾಂಧಿ ರಾಹುಲ್ಗೆ ಅಧ್ಯಕ್ಷರಾಗಲು ದಾರಿ ಮಾಡಿಕೊಟ್ಟಿದ್ದರು. 2019ರ ಲೋಕಸಭಾ ಚುನಾವಣೆ ಬಳಿಕ ರಾಹುಲ್ ಪದತ್ಯಾಗ ಮಾಡಿದ್ದು, ದೇಶದ ಪುರಾತನ ಪಕ್ಷದ ಸಾರಥ್ಯ ಮತ್ತೆ ಸೋನಿಯಾ ಹೆಗಲೇರಿದೆ.
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಆಯ್ಕೆ
ಜಾರ್ಖಂಡ್, ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯದ ವಿಧಾನಸಭೆ ಚುನಾವಣೆ ನವೆಂಬರ್ನಲ್ಲಿ ನಡೆಯಲಿದ್ದು, ಇದು ಸೋನಿಯಾ ಗಾಂಧಿ ಅವರ ಮುಂದಿನ ಮೊದಲ ಸವಾಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಕುರಿತು ಶನಿವಾರ ನಡೆದ ಸಭೆಯಲ್ಲಿ ಯಾವುದೇ ಚರ್ಚೆ ನಡೆಯದಿರುವುದು ಕುತೂಹಲಕ್ಕೆ ಕಾರಣವಾಗಿದೆ....
ರಾಹುಲ್ ಕಾರ್ಯ ವೈಖರಿಗೆ ಮೆಚ್ಚುಗೆ
ಶನಿವಾರ ನಡೆದ ಸಿಡಬ್ಲ್ಯುಸಿ ಸಭೆ ರಾಹುಲ್ ಗಾಂಧಿ ಪಕ್ಷವನ್ನು ಮುನ್ನಡೆಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಈ ಕುರಿತ ನಿರ್ಣಯವನ್ನು ಪಾಸು ಮಾಡಿದೆ. ಆದರೆ, ರಾಹುಲ್ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ವಿಫಲವಾಗಿದ್ದು, ಸೋನಿಯಾ ಗಾಂಧಿ ಅವರನ್ನು ಮಧ್ಯಂತರ ಅಧ್ಯಕ್ಷರಾಗಿ ನೇಮಕ ಮಾಡಿದೆ.
ನಿರ್ಣಯ ತಿರಸ್ಕರಿಸಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಅವಿರೋಧವಾಗಿ ಸಿಡಬ್ಲ್ಯುಸಿ ಸಭೆ ಕೈಗೊಂಡ ನಿರ್ಣಯವನ್ನು ರಾಹುಲ್ ಗಾಂಧಿ ತಳ್ಳಿ ಹಾಕಿದರು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯಲು ಅವರು ಒಪ್ಪಿಗೆ ನೀಡಲಿಲ್ಲ.
ಇದರ ನಿರೀಕ್ಷೆಯ ಇರಲಿಲ್ಲ
ಸೋನಿಯಾ ಗಾಂಧಿ ಮಧ್ಯಂತರ ಅಧ್ಯಕ್ಷರು ಎಂದು ಸಭೆಯಲ್ಲಿ ನಿರ್ಣಯ ಕೈಗೊಂಡಾಗ ಸೋನಿಯಾ ಗಾಂಧಿ, "ತಕ್ಷಣದ ನೀವೆಲ್ಲರೂ ಈ ತೀರ್ಮಾನಕ್ಕೆ ಬಂದಿದ್ದೀರಿ. ನನಗೆ ಇದರ ನಿರೀಕ್ಷೆಯೇ ಇರಲಿಲ್ಲ" ಎಂದು ಹೇಳಿದ್ದಾರೆ.
ಸವಾಲು ಮುಂದಿದೆ ಸಾರಥ್ಯ ಬೇಕು
ಕಾಂಗ್ರೆಸ್ ಪಕ್ಷ ಸವಾಲಿನ ಪರಿಸ್ಥಿತಿ ಎದುರಿಸುತ್ತಿದೆ. ಮುಂದಿನ ವ್ಯವಸ್ಥೆ ಆಗುವ ತನಕ ಸೋನಿಯಾ ಗಾಂಧಿ ಅಧ್ಯಕ್ಷರಾಗಿರಬೇಕು ಎಂಬ ನಿರ್ಣಯವನ್ನು ಮಂಡನೆ ಮಾಡಿ ಒಪ್ಪಿಗೆ ಪಡೆಯಲಾಯಿತು. ಸೋನಿಯಾ ಅವರನ್ನು ಆಯ್ಕೆ ಮಾಡಿರುವು ಸರಿಯಾದ ನಿರ್ಣಯ ಎಂದು ಕಾಂಗ್ರೆಸ್ನ ಹಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಸಂಕಷ್ಟದ ಸಮಯ
ಸಿಡಬ್ಲ್ಯುಸಿ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ಸೋನಿಯಾ ಗಾಂಧಿ ಸಂಕಷ್ಟ ಸಮಯದಲ್ಲಿ ಪಕ್ಷದ ಅಧ್ಯಕ್ಷ ರಾಗಿದ್ದಾರೆ.ಗಾಂಧಿ ಕುಟುಂಬದವರೇ ಅಧ್ಯಕ್ಷರಾಗಿದ್ದಾರೆ ಅನ್ನೋದು ತಪ್ಪು. ಸಭೆಯಲ್ಲಿ ಅವರ ಪರವಾಗಿ ಹೆಚ್ಚು ಜನ ಆಸಕ್ತಿ ತೋರಿಸಿದರು. ಹೀಗಾಗಿ ಅವರು ಆಗಿದ್ದಾರೆ. ಅಮಿತ್ ಶಾ ಒಂದು ಕಡೆ ಮಿನಿಸ್ಟರ್ ಮತ್ತೊಂದು ಕಡೆ ಅಧ್ಯಕ್ಷ ಆಗಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.