ಕಾಂಗ್ರೆಸ್ಸಿನಲ್ಲೂ ಕುಟುಂಬಕ್ಕೊಂದೇ ಟಿಕೆಟ್ ಅಂತೆ! ಆದರೆ..
ಸತತ ಸೋಲುಗಳಿಂದ ಹೈರಾಣವಾಗಿರುವ ಕಾಂಗ್ರೆಸ್ ಪಕ್ಷದ ಮೂರು ದಿನಗಳ ರಾಷ್ಟ್ರೀಯ ಚಿಂತನಾ ಶಿಬಿರ ರಾಜಸ್ಥಾನದ ಉದಯಪುರದಲ್ಲಿ ಶುಕ್ರವಾರ (ಮೇ 13) ಆರಂಭವಾಗಿದೆ. ಪಕ್ಷದ ಮುಖಂಡರನ್ನು ಉದ್ದೇಶಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಷಣ ಮಾಡಿದ್ದಾರೆ.
ಪ್ರಮುಖವಾಗಿ ಯುವಕರನ್ನು ಮತ್ತು ಪಕ್ಷಕ್ಕಾಗಿ ದುಡಿಯುತ್ತಿರುವವರನ್ನು ಗುರುತಿಸಿ ಜವಾಬ್ದಾರಿ ನೀಡುವ ಕೆಲಸವಾಗಬೇಕಿದೆ ಎನ್ನುವ ಅಭಿಪ್ರಾಯ ಒಟ್ಟಾರೆಯಾಗಿ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚೆ ನಡೆದಿದೆ.
ರಾಜಸ್ಥಾನ: 'ಬಿಜೆಪಿ-ಆರ್ಎಸ್ಎಸ್ ನೀತಿಗಳು ದೇಶಕ್ಕೆ ಸವಾಲು' ಸೋನಿಯಾ
ಕಳೆದ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ವ್ಯಕ್ತವಾದ ಸಲಹೆಯಂತೆ ಕುಟುಂಬದಲ್ಲಿ ಒಬ್ಬರಿಗೇ ಟಿಕೆಟ್ ಎನ್ನುವ ವಿಚಾರವೂ ಚರ್ಚೆಯಾಗಲಿದೆ ಎಂದು ವರದಿಯಾಗಿದೆ. ಆ ಮೂಲಕ, ಬಿಜೆಪಿ ಹಾದಿಯಲ್ಲೇ ಸಾಗಲು ಕಾಂಗ್ರೆಸ್ ಮುಂದಾದಂತಿದೆ.
ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ನಾಯಕರು ಯಾವರೀತಿ ಸ್ಪಂದಿಸಲಿದ್ದಾರೆ ಎನ್ನುವ ಅಂಶವೂ ಮಹತ್ವವನ್ನು ಪಡೆದುಕೊಂಡಿದೆ. ಆದರೆ, ಕೆಲವೊಂದು ವಿನಾಯತಿ ಇರಲಿದೆ ಎನ್ನುವ ಸ್ಪಷ್ಟನೆಯನ್ನು ಕಾಂಗ್ರೆಸ್ ಮುಖಂಡರೊಬ್ಬರು ನೀಡಿದ್ದಾರೆ.
ರಮ್ಯಾ Vs ಡಿಕೆಶಿ: ರಾಜ್ಯ ಕಾಂಗ್ರೆಸ್ಸಿನಲ್ಲಿ ಏನಾಗುತ್ತಿದೆ, ಬಣ ರಾಜಕೀಯ ಜೋರು?
ಮುಂಬರುವ ವಿಧಾನಸಭಾ ಚುನಾವಣೆ
ಮುಂಬರುವ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯನ್ನು ನವಸಂಕಲ್ಪದೊಂದಿಗೆ ಹೋರಾಡುವ ಮುನ್ನುಡಿಯೊಂದಿಗೆ ಚಿಂತನಾ ಶಿಬಿರ ಆರಂಭವಾಗಿದೆ. ಪಕ್ಷ ಸಂಘಟನೆಗೆ ವಯೋಮಿತಿ ನಿರ್ಬಂಧಿಸುವ ವಿಚಾರವೂ ಪ್ರಸ್ತಾವನೆಗೆ ಬರುವ ಸಾಧ್ಯತೆ ಇರುವುದರಿಂದ ಈ ಶಿಬಿರದ ಅಂತಿಮ ನಿರ್ಧಾರ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲವನ್ನು ಮೂಡಿಸಿದೆ. ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎನ್ನುವ ವಿಚಾರ ಗಾಂಧಿ ಕುಟುಂಬದಿಂದಲೇ ಆರಂಭವಾಗಲಿದೆಯಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಗಾಂಧಿ ಕುಟುಂಬಕ್ಕೂ ಇದೇ ನಿಯಮ ಅನ್ವಯವಾಗಲಿದೆಯಾ
ಒಂದೇ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಗಾಂಧಿ ಕುಟುಂಬಕ್ಕೂ ಇದೇ ನಿಯಮ ಅನ್ವಯವಾಗಲಿದೆಯಾ ಎನ್ನುವ ಪ್ರಶ್ನೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮೇಕನ್, "ಇದರಲ್ಲಿ ಕೆಲವು ವಿನಾಯತಿಗಳನ್ನು ನೀಡಬೇಕಾಗುತ್ತದೆ. ಈ ಬಗ್ಗೆ ಸ್ಪಷ್ಟ ರೂಪುರೇಶೆಯನ್ನು ರೂಪಿಸಲಾಗುವುದು"ಎಂದು ಮೇಕನ್ ಹೇಳಿದ್ದಾರೆ. ಆ ಮೂಲಕ, ಕುಟುಂಬಕ್ಕೊಂದು ಟಿಕೆಟ್ ವಿಚಾರ, ಪಕ್ಷದ ನಾಯಕರ ಸೇವೆ ಮತ್ತು ಶಿಫಾರಸಿನ ಮೇಲೆ ನಿರ್ಧಾರವಾಗಬಹುದು ಎನ್ನುವ ಸುಳಿವನ್ನು ನೀಡಿದ್ದಾರೆ.
ನಾಲ್ಕುನೂರಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ
ಸುಮಾರು ನಾಲ್ಕುನೂರಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ. ರಾಹುಲ್ ಗಾಂಧಿಯವರಿಗೆ ಮತ್ತೆ ಅಧ್ಯಕ್ಷ ಹುದ್ದೆ ನೀಡಬೇಕೆನ್ನುವ ಒತ್ತಾಯ ಶಿಬಿರದಲ್ಲಿ ಕೇಳಿ ಬರುವ ಸಾಧ್ಯತೆಯಿದೆ. ಈ ಬಗ್ಗೆ ಹಲವು ನಾಯಕರು ಮುನ್ಸೂಚನೆಯನ್ನು ನೀಡಿದ್ದಾರೆ. ಕುಟುಂಬಕ್ಕೊಂದು ಟಿಕೆಟ್ ಎನ್ನುವ ವಿಚಾರದಲ್ಲಿ ಹಲವು ಗೊಂದಲಗಳಿವೆ ಎನ್ನುವ ಮಾತನ್ನು ಕಾಂಗ್ರೆಸ್ ನಾಯಕರೂ ಒಪ್ಪಿಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ಸಿನಲ್ಲೂ ಕುಟುಂಬಕ್ಕೊಂದೇ ಟಿಕೆಟ್: ಆದರೆ, ಕೆಲವು ವಿನಾಯತಿ
ಕನಿಷ್ಠ ಐದು ವರ್ಷ ಪಕ್ಷ ಸೇವೆಯಲ್ಲಿ ತೊಡಗಿದ್ದವರಿಗೆ ಮಾತ್ರ ಟಿಕೆಟ್ ನೀಡುವ ವಿಚಾರವೂ ಚರ್ಚೆಗೆ ಬರುವ ಸಾಧ್ಯತೆಯಿದೆ. ಐವತ್ತು ವರ್ಷಕ್ಕಿಂತ ಕಮ್ಮಿ ವಯೋಮಿತಿಯವರಿಗೆ ಪಕ್ಷದ ಎಲ್ಲಾ ಸಮಿತಿಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯತೆ ನೀಡುವ ಬಗ್ಗೆ ಚರ್ಚೆಯಾಗಲಿದೆ. ಐದು ವರ್ಷದ ಸೇವೆಯ ನಂತರ ಕಡ್ಡಾಯವಾಗಿ ಕೆಳಗಿಳಿಯಬೇಕು ಎನ್ನುವ ವಿಚಾರವೂ ಪ್ರಸ್ತಾವನೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.
Recommended Video