ತ್ರಿವಳಿ ತಲಾಖ್ ಮಸೂದೆಗೆ ವಿರೋಧ, ಕಾಂಗ್ರೆಸ್ ವಿರುದ್ಧ ಜೇಟ್ಲಿ ವಾಗ್ದಾಳಿ
ನವದೆಹಲಿ, ಜನವರಿ 3: ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷ ಪರೋಕ್ಷವಾಗಿ ತ್ರಿವಳಿ ತಲಾಖ್ ಮಸೂದೆಯನ್ನು ವಿರೋಧಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷದ ವರ್ತನೆಯಿಂದಾಗಿ ಮುಸ್ಲಿಂ ಮಹಿಳೆಯರಿಗಾಗುತ್ತಿರುವ ಅನ್ಯಾಯ ಮುಂದುವರಿಯಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷಗಳ ರಾಜಕೀಯ ಹೇಗಿದೆಯೆಂದರೆ ಒಂದು ಮನೆಯಲ್ಲಿ ಮಸೂದೆಯನ್ನು ಬೆಂಬಲಿಸುವುದು ಇನ್ನೊಂದು ಮನೆಯಲ್ಲಿ ಮಸೂದೆಯನ್ನು ವಿರೋಧಿಸುವುದು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಗದ್ದಲದ ನಡುವೆಯೇ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ
"ತ್ರಿವಳಿ ತಲಾಖ್ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂಬುದು ಖಚಿತವಾಗಿದೆ. ಇದು ನಾವು ಮಸೂದೆಯನ್ನು ಬೆಂಬಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಿಲುವಿಗೆ ವಿರುದ್ಧವಾದುದು. ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರ ಪಡೆಯದಂತೆ ತಡೆಯುವ ಎಲ್ಲಾ ಯತ್ನವನ್ನು ಅವರು ಮಾಡುತ್ತಿದ್ದಾರೆ," ಎಂದು ಜೇಟ್ಲಿ ದೂರಿದ್ದಾರೆ.
"ಮುಸ್ಲಿಂ ಮಹಿಳೆಯರ ಮೇಲೆ ದೀರ್ಘ ಕಾಲದಿಂದ ನಡೆಯುತ್ತಿದ್ದ ಅನ್ಯಾಯವನ್ನು ತಡೆಯುವ ಸುವರ್ಣ ಅವಕಾಶ ಸಂಸತ್ತಿಗೆ ಇಂದು ಲಭ್ಯವಾಗಿತ್ತು . ಆದರೆ ಕಾಂಗ್ರೆಸ್ ವರ್ತನೆಯಿಂದ ಈ ಅನ್ಯಾಯ ಮುಂದೆಯೂ ಮುಂದುವರಿಯುತ್ತದೆ," ಎಂದು ಜೇಟ್ಲಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಬಹುಮತ ಮತ್ತು ದೇಶದ ಜನರ ಅಭಿಪ್ರಾಯವನ್ನು ಗೌರವಿಸಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಈ ಮಸೂದೆಯನ್ನು ಬೆಂಬಲಿಸಲೇಬೇಕಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ 'ಮುಸ್ಲಿಂ ಮಹಿಳಾ (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) ಮಸೂದೆ'ಯನ್ನು ಮಂಡಿಸಿದ್ದರು. ಈ ಹಿಂದೆ ಡಿಸೆಂಬರ್ 28ರಂದೇ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು.
ಆದರೆ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ನೀಡುವುದನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಿರುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಮಸೂದೆ ಅಂಗೀಕರಾ ಪಡೆಯದಂತೆ ತಡೆಯುವಲ್ಲಿ ಯಶಸ್ವಿಯಾಗಿದೆ.
ಮಸೂದೆ ಮಂಡನೆಯಾಗುತ್ತಿದ್ದಂತೆ ಕಾಂಗ್ರೆಸ್ ಸಂಸದರು ಗಲಾಟೆ ಎಬ್ಬಿಸಿದ್ದರಿಂದ ಮಸೂದೆ ಅಂಗೀಕಾರ ಪಡೆಯದೆ ಅಧಿವೇಶನ ಗುರುವಾರ 11 ಗಂಟೆಗೆ ಮುಂದೂಡಲ್ಪಟ್ಟಿದೆ.