ವಿಜಯ್ ಮಲ್ಯ ಗಡಿಪಾರು ವಿಳಂಬಕ್ಕೆ 'ರಹಸ್ಯ' ಕಾರಣ
ನವದೆಹಲಿ, ನವೆಂಬರ್ 20: ದೇಶಭ್ರಷ್ಟ ಅರ್ಥಿಕ ಅಪರಾಧಿ ಎಂಬ ಹಣೆಪಟ್ಟಿ ಹೊತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಮರಳಿ ಕರೆತರುವ ಪ್ರಯತ್ನಕ್ಕೆ ಪದೇ ಪದೇ ಹಿನ್ನಡೆಯಾಗುತ್ತಿದೆ. ಲಂಡನ್ನಲ್ಲಿರುವ ವಿಜಯ್ ಮಲ್ಯ, ತಮ್ಮನ್ನು ಭಾರತಕ್ಕೆ ಗಡಿಪಾರು ಮಾಡದಂತೆ ಅಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಪರಾರಿಯಾದ ಮಲ್ಯ ಅವರ ಗಡಿಪಾರಿಗೆ 'ಗೋಪ್ಯ ಕಾನೂನು ಸಮಸ್ಯೆ' ಒಂದು ಅಡ್ಡಿಪಡಿಸುತ್ತಿದೆ ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ.
'ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಒಂದು ರಹಸ್ಯ ಕಾನೂನು ಸಮಸ್ಯೆಯಿದ್ದು, ಅದನ್ನು ಬಗೆಹರಿಸಬೇಕಿದೆ ಎಂದು ನಮಗೆ ತಿಳಿಸಲಾಗಿದೆ. ಅದನ್ನು ಪರಿಹರಿಸಲು ನಮಗೆ ಯಾವುದೇ ನಿರ್ದಿಷ್ಟ ಕಾಲಾವಧಿಯನ್ನು ಹೇಳಿಲ್ಲ. ಹೀಗಾಗಿ ಬ್ರಿಟನ್ ಅಧಿಕಾರಿಗಳ ಜತೆಗೆ ಈ ವಿಚಾರವಾಗಿ ಚರ್ಚೆ ನಡೆಸುವುದನ್ನು ಮುಂದುವರಿಸಲಿದ್ದೇವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.
ಈ ಹಿಂದೆ ಇದ್ದ ಕಿಂಗ್ ಫಿಶರ್ ಏರ್ಲೈನ್ಸ್ಗಾಗಿ ವಿಜಯ್ ಮಲ್ಯ ಸುಮಾರು 9,000 ಕೋಟಿ ರೂ. ಸಾಲ ಪಡೆದಿದ್ದರು. ಆದರೆ ಅದನ್ನು ಮರಳಿಸಿರಲಿಲ್ಲ. ಈ ಕುರಿತು ತಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಮುನ್ಸೂಚನೆ ಅರಿತ ಮಲ್ಯ ಅವರು ಪರಾರಿಯಾಗಿದ್ದರು. 2016ರ ಮಾರ್ಚ್ ತಿಂಗಳಿನಿಂದ ಅವರು ಬ್ರಿಟನ್ನಲ್ಲಿದ್ದು, ಭಾರತಕ್ಕೆ ತಮ್ಮನ್ನು ಗಡಿಪಾರು ಮಾಡುವುದರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
64 ವರ್ಷದ ಉದ್ಯಮಿ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಬ್ರಿಟನ್ ಕೋರ್ಟ್ ಮೇ ತಿಂಗಳಲ್ಲಿ ಆದೇಶಿಸಿತ್ತು. ಆದರೆ ಬ್ರಿಟನ್ ಕೈಗೊಂಡಿರುವ ರಹಸ್ಯ ವಿಚಾರಣೆಗಳ ಕಾರಣದಿಂದ ಅವರ ಗಡಿಪಾರು ವಿಳಂಬವಾಗುತ್ತಿದೆ ಎಂದು ಸುಪ್ರೀಂಕೋರ್ಟ್ಗೆ ಸರ್ಕಾರ ಕಳೆದ ತಿಂಗಳು ತಿಳಿಸಿತ್ತು.