ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಿ: ಬಿಜೆಪಿಗೆ ಮಾಯಾವತಿ ಸವಾಲ್
ನಾಗಪುರ, ಡಿಸೆಂಬರ್ 11: ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ (ಇವಿಎಂ)ಗಳ ಬದಲು ಬ್ಯಾಲೆಟ್ ಪೇಪರ್ ನಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಸಿ ಎಂದು ಬಿಜೆಪಿಗೆ ಬಿಎಸ್ಪಿ ವರಿಷ್ಠೆ ಮಾಯಾವತಿ ಸವಾಲು ಹಾಕಿದ್ದಾರೆ.
'ಬ್ಯಾಲೆಟ್ ಪೇಪರ್' ಬಳಸಿದರೆ 2019ರಲ್ಲಿ ಬಿಜೆಪಿಗೆ ಸೋಲು: ಮಾಯಾವತಿ
ನಾಗಪುರದಲ್ಲಿ ಭಾನುವಾರ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, "ಒಂದೊಮ್ಮೆ ಬಿಜೆಪಿಯವರು ತಾವು ತುಂಬಾ ಪ್ರಾಮಾಣಿಕರು, ಪಾರದರ್ಶಕರು ಎಂಬು ಭಾವಿಸಿದ್ದಲ್ಲಿ ದೇಶದ ಮುಂದಿನ ಎಲ್ಲಾ ಚುನಾವಣೆಗಳನ್ನು ಇವಿಎಂ ಬದಲು ಬ್ಯಾಲೆಟ್ ಪೇಪರ್ ನಲ್ಲಿ ನಡೆಸಲಿ," ಎಂದು ಸವಾಲು ಹಾಕಿದರು.
2014ರ ನಂತರ ದೇಶದಲ್ಲಿ ನಡೆದ ಹಲವು ಚುನಾವಣೆಗಳಲ್ಲಿ ಇವಿಎಂ ಅಕ್ರಮ ನಡೆದಿದೆ. ಈ ವಿಚಾರದಲ್ಲಿ ಬಿಜೆಪಿ ಮೌನವಹಿಸಿದೆ ಎಂದು ಮಾಯಾವತಿ ದೂರಿದ್ದಾರೆ. ಇವಿಎಂ ಅಕ್ರಮದಿಂದಾಗಿ 2014ರ ಲೋಕಸಭೆ ಚುನಾವಣೆ ಮತ್ತು 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಪಿ ಭಾರೀ ನಷ್ಟ ಅನುಭವಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.
ಮಿಷನ್ 150: ಗುಜರಾತ್ ನಲ್ಲಿ ಬಿಜೆಪಿಗೆ ಕಾಂಗ್ರೆಸ್ ದಾಖಲೆ ಮುರಿಯುವ ತವಕ
ಇದೇ ವೇಳೆ ಅವರು ಆರ್.ಎಸ್.ಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಪಾಲಕರು ಎಂದು ಹೇಳಿಕೊಳ್ಳುವ ಇವರ ವರ್ತನೆ ಬದಲಾಗದಿದ್ದಲ್ಲಿ, ಬುಡಕಟ್ಟು ಹಿಂದುಳಿದ ಸಮುದಾಯ, ದಲಿತರು, ಅಲ್ಪಸಂಖ್ಯಾತರ ಬಗ್ಗೆ ಇಬ್ಬಗೆ ನೀತಿ ಮುಂದುವರಿಸಿದಲ್ಲಿ ತಾವು ತಮ್ಮ ಬೆಂಬಲಿಗರ ಜತೆ ಅಂಬೇಡ್ಕರರಂತೆ ಬೌದ್ಧ ಧರ್ಮಕ್ಕೆ ಮತಾಂತರವಾಗುವುದಾಗಿ ಬೆದರಿಕೆ ಹಾಕಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಲಿದೆ. ತನ್ನ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿ ಹಾಕಲು ಬಿಜೆಪಿ ಈ ತಂತ್ರ ಅನುಸರಿಸಲಿದೆ ಎಂದು ಮಾಯಾವತಿ ಇದೇ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.