ಪ್ರತಿ ಮಂಗಳವಾರ ಸಂಪೂರ್ಣ ಲಾಕ್ ಡೌನ್; ಸಿಎಂ ಘೋಷಣೆ
ಪುದುಚೇರಿ, ಆಗಸ್ಟ್ 12 : ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ಸೋಂಕು ಹರಡುವಿಕೆ ತಡೆಯಲು ಲಾಕ್ ಡೌನ್ ಮೊರೆ ಹೋಗಲಾಗಿದೆ.
ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಬುಧವಾರ ಈ ಕುರಿತು ಘೋಷಣೆ ಮಾಡಿದ್ದಾರೆ. "ಕೋವಿಡ್ ಸೋಂಕು ಹರಡುವಿಕೆ ತಡೆಯಲು ಪ್ರತಿ ಮಂಗಳವಾರ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತದೆ" ಎಂದು ಘೋಷಣೆ ಮಾಡಿದ್ದಾರೆ.
ಬುಧವಾರ ಪುದುಚೇರಿಯಲ್ಲಿ 481 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 6,381ಕ್ಕೆ ಏರಿಕೆಯಾಗಿದೆ.
2,609 ಸಕ್ರಿಯ ಪ್ರಕರಣಗಳು ಪುದುಚೇರಿಯಲ್ಲಿ ದಾಖಲಾಗಿವೆ. ಇದುವರೆಗೂ 96 ಜನರು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಬುಧವಾರ ಸಹ 5 ಜನರು ಸಾವನ್ನಪ್ಪಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಅನ್ ಲಾಕ್ 3.0 ಮಾರ್ಗಸೂಚಿ ಪ್ರಕಟಿಸುವಾಗ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ನಿಯಂತ್ರಣ ಮಾಡಲು ಅಗತ್ಯ ತೀರ್ಮಾನ ಕೈಗೊಳ್ಳುವ ಅಧಿಕಾರ ನೀಡಿದೆ. ಯಾವುದೇ ರಾಜ್ಯ ಅಥವ ಕೇಂದ್ರಾಡಳಿತ ಪ್ರದೇಶಗಳು ಲಾಕ್ ಡೌನ್ ಘೋಷಣೆ ಮಾಡಬಹುದು.
ಅಂತರಾಜ್ಯಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರಬಾರದು, ಪಾಸುಗಳ ವ್ಯವಸ್ಥೆ ಮಾಡಬಾರದು ಎಂದು ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ.