'ಭಾರತದಲ್ಲಿ ಸಮುದಾಯಕ್ಕೆ ಹರಡಿದೆ ಕೊರೊನಾ': ಆಘಾತಕಾರಿ ವಿಷಯ ಬಿಚ್ಚಿಟ್ಟ ತಜ್ಞರು
ದೆಹಲಿ, ಜೂನ್ 13: ಭಾರತದಲ್ಲಿ ಕೊರೊನಾ ವೈರಸ್ ರೋಗಿಗಳ ಸಂಖ್ಯೆ 3 ಲಕ್ಷ ಗಡಿ ದಾಟಿದೆ. ಕೇವಲ ಹತ್ತು ದಿನದಲ್ಲಿ ಒಂದು ಲಕ್ಷ ಕೊವಿಡ್ ಪ್ರಕರಣಗಳು ದಾಖಲಾಗಿದೆ. ಮುಂಬೈ, ಚೆನ್ನೈ, ಥಾಣೆ, ಪುಣೆ, ಅಹಮದಬಾದ್ ಅಂತಹ ನಗರಗಳಲ್ಲಿ ಕೊರೊನಾ ಕೇಸ್ಗಳು ಸ್ಫೋಟಗೊಂಡಿದೆ.
Recommended Video
ಅತಿ ಹೆಚ್ಚು ಸೋಂಕಿತರ ಹೊಂದಿರುವ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಏರಿದೆ. 8 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಷ್ಟು ಗಂಭೀರವಾದ ಸ್ಥಿತಿಗೆ ಬಂದು ನಿಂತಿರುವ ಭಾರತದಲ್ಲಿ 'ಕೊವಿಡ್ ಸಮುದಾಯ ಹಂತಕ್ಕೆ ಹರಡಿಲ್ವಾ?' ಎಂಬ ಬಲವಾದ ಅನುಮಾನ ಕಾಡುವುದು ಸಹಜ.
ಕೊರೊನಾ ಬಗ್ಗೆ ಎಚ್ಚರವಿರಲಿ, ಹೊಸದಾಗಿ ಎರಡು ರೋಗಲಕ್ಷಣ ಸೇರ್ಪಡೆ?
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಐಸಿಎಂಆರ್ ಅಧಿಕಾರಿಗಳು ಎಲ್ಲರೂ 'ಸಮುದಾಯ ಹಂತ ತಲುಪಿಲ್ಲ' ಎಂದು ಸತ್ಯ ಮುಚ್ಚಿಡುತ್ತಿದ್ದಾರೆ. ಆದರೆ, ದೇಶದ ಅನೇಕ ಭಾಗಗಳಲ್ಲಿ ಕೊರೊನಾ ಸಮದಾಯ ಹಂತಕ್ಕೆ ತಲುಪಿದೆ ಎಂದು ತಜ್ಞರು ಆಘಾತಕಾರಿ ಸಂಗತಿ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ.....
ಸತ್ಯ ಸ್ವೀಕರಿಸಲು ಸಿದ್ಧವಿಲ್ಲ
ಭಾರತದಲ್ಲಿ ಕೊರೊನಾ ವೈರಸ್ ಸಮುದಾಯ ಹಂತಕ್ಕೆ ಪ್ರವೇಶ ಆಗಿಲ್ಲ ಎಂದು ಐಸಿಎಂಆರ್ ಸಮೀಕ್ಷೆ ಹೇಳಿದೆ. ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ''ಭಾರತದಲ್ಲಿ ಸಮುದಾಯ ಹಂತ ತಲುಪಿಲ್ಲ'' ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಅದು ಸುಳ್ಳು ಎಂದು ತಜ್ಞರ ತಂಡ ವಿರೋಧಿಸಿದೆ. ದೇಶದ ಅನೇಕ ಕಡೆ ಸಮುದಾಯ ಹಂತಕ್ಕೆ ಕೊವಿಡ್ ತಲುಪಿದೆ. ಆದರೆ ಕೇಂದ್ರ ಸರ್ಕಾರ ಇದನ್ನು ಒಪ್ಪಿಕೊಳ್ಳಲು 'ಹಠಮಾರಿತನ' ತೋರುತ್ತಿದೆ ಎಂದು ತಜ್ಞರು ಟೀಕಿಸಿದ್ದಾರೆ.
ಐಸಿಎಂಆರ್ ಸಮೀಕ್ಷೆ ಅಸರ್ಮಕ
ಲಾಕ್ಡೌನ್ನಿಂದ ಅನ್ಲಾಕ್ ಮಾಡಿರುವುದು ಮತ್ತು ವಲಸೆ ಕಾರ್ಮಿಕರು ಸಾಮೂಹಿಕವಾಗಿ ಸಂಚಾರ ಮಾಡಲು ಅನುಮತಿ ನೀಡಿದ ಮೇಲೆ ದೇಶದಲ್ಲಿ ಹೆಚ್ಚು ಕೊವಿಡ್ ಕೇಸ್ಗಳು ದಾಖಲಾಗಿದೆ ಎಂದು ಏಮ್ಸ್ ಮಾಜಿ ನಿರ್ದೇಶಕ ಡಾ.ಎಂ.ಸಿ ಮಿಶ್ರಾ ಹೇಳಿದ್ದಾರೆ. ಇನ್ನು ಐಸಿಎಂಆರ್ ನಡೆಸಿರುವ ಸಿರೊ-ಸಮೀಕ್ಷೆ ಅಸರ್ಮಪಕವಾಗಿದೆ. ದೊಡ್ಡ ಜನಸಂಖ್ಯೆ ಮತ್ತು ದೇಶದ ವೈವಿಧ್ಯತೆ ಹೊಂದಿರುವ ಭಾರತದಲ್ಲಿ 26,400 ಜನರ ಗಾತ್ರದ ಮೂಲಕ ಸಂಶೋಧನೆ ಮಾಡಿ ಸೋಂಕಿನ ಪ್ರಮಾಣ ಪತ್ತೆ ಹಚ್ಚುವ ಪ್ರಯತ್ನ ಸರಿ ಇಲ್ಲ ಎಂದು ಟೀಕಿಸಿದ್ದಾರೆ.
ಬಹಳ ಹಿಂದೆಯೇ ಸಮುದಾಯ ಹಂತ ತಲುಪಿದೆ
ಕೊರೊನಾ ವೈರಸ್ ವಿಚಾರದಲ್ಲಿ ಭಾರತ ಬಹಳ ಹಿಂದೆಯೇ ಸಮುದಾಯ ಹಂತ ತಲುಪಿತು ಎಂದು ಖ್ಯಾತ ವೈರಾಲಜಿಸ್ಟ್ ಶಾಹಿದ್ ಜಮೀಲ್ ಹೇಳಿದ್ದಾರೆ. ''ಇದನ್ನು ಐಸಿಎಂಆರ್ ಒಪ್ಪಿಕೊಳ್ಳುತ್ತಿಲ್ಲ. ಅವರ ಸಂಶೋಧನೆಯಲ್ಲಿ ಒಳಗೊಂಡಿರುವ ಶೇಕಡಾ 40 ರಷ್ಟು ಜನರು ವಿದೇಶಿ ಪ್ರಯಾಣದ ಹಿನ್ನೆಲೆ ಹೊಂದಿಲ್ಲ ಹಾಗೂ ಸೋಂಕಿತರ ಜೊತೆಗೂ ಸಂಪರ್ಕ ಹೊಂದಿಲ್ಲ. ಹಾಗಾದರೆ ಇದು ಸಮುದಾಯ ಹಂತವಲ್ಲದಿದ್ದರೇ ಮತ್ತೇನು'' ಎಂದು ಶಾಹಿದ್ ಜಮೀಲ್ ಪ್ರಶ್ನಿಸಿದ್ದಾರೆ.
ಸಮುದಾಯ ಹಂತದಲ್ಲಿ ಮುಂಬೈ, ಚೆನ್ನೈ
'ಐಸಿಎಂಆರ್ ನಿರಾಕರಿಸುತ್ತಿರಬಹುದು, ಆದರೆ ದೆಹಲಿ, ಅಹಮದಾಬಾದ್ ಮತ್ತು ಮುಂಬೈ ಮುಂತಾದ ಸ್ಥಳಗಳಲ್ಲಿ ಸಮುದಾಯ ಪ್ರಸರಣ ನಡೆಯುತ್ತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ' ಎಂದು ಖ್ಯಾತ ಶ್ವಾಸಕೋಶದ ಶಸ್ತ್ರಚಿಕಿತ್ಸಕ ಡಾ.ಅರವಿಂದ ಕುಮಾರ್ ಹೇಳಿದ್ದಾರೆ. ''ಭಾರತ ವಿಶಾಲವಾದ ದೇಶ ಮತ್ತು ಪ್ರತಿ ರಾಜ್ಯವು ವಿಭಿನ್ನ ಸಮಯದಲ್ಲಿ ವೈರಸ್ ಎದುರಿಸುತ್ತಿದೆ. ಕೆಲವು ಕಡೆ ಸೋಂಕಿನ ಪ್ರಮಾಣ ಅಧಿಕವಾಗಿದೆ'' ಎಂದು ಡಾ.ಅರವಿಂದ ಕುಮಾರ್ ತಿಳಿಸಿದ್ದಾರೆ.
ಸೋಂಕಿತರ ಸಂಪರ್ಕ ಪತ್ತೆ ಹಚ್ಚುತ್ತಿಲ್ಲ
''ಸರ್ಕಾರವು ಸೋಂಕಿತರ ಸಂಪರ್ಕ ಪತ್ತೆಹಚ್ಚುವಿಕೆಯನ್ನು ನಿಲ್ಲಿಸಿದೆ. ಈ ಮೊದಲು ಸರ್ಕಾರ ಸೋಂಕಿತನ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಬಲವಾಗಿ ಮಾಡುತ್ತಿತ್ತು, ಆದರೆ ಕಳೆದ 7-10 ದಿನಗಳಲ್ಲಿ ದೆಹಲಿಯಲ್ಲಿ ಅಥವಾ ಎಲ್ಲಿಯೂ ಯಾವುದೇ ಸರ್ಕಾರ ಇದನ್ನು ಮಾಡುತ್ತಿಲ್ಲ. ಸಮುದಾಯ ಪ್ರಸರಣ ನಡೆಯುತ್ತಿದೆ ಎಂದು ಅವರಿಗೆ ತಿಳಿದಿದೆ, ಆದರೆ ಅದನ್ನು ಸ್ವೀಕರಿಸುತ್ತಿಲ್ಲ'' ಎಂದು ಫೋರ್ಟಿಸ್ ಎಸ್ಕೋರ್ಟ್ಸ್ ಫರಿದಾಬಾದ್ನ ಶ್ವಾಸಕೋಶಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವಿಶೇಖರ್ ಜಾ ಆರೋಪಿಸಿದ್ದಾರೆ.