ಸಾಮಾನ್ಯರಿಗೆ ಯಾವಾಗ ಸಿಗುತ್ತೆ ಕೊವಿಡ್-19 ಲಸಿಕೆ: ಇಲ್ಲಿದೆ ಉತ್ತರ
ನವದೆಹಲಿ, ನವೆಂಬರ್.08: ಕೊರೊನಾವೈರಸ್ ಸೋಂಕಿಗೆ ಲಸಿಕೆ ಯಾವಾಗ ಸಿಗುತ್ತದೆ ಎಂಬ ಪ್ರಶ್ನೆ ಇಂದಿಗೂ ಪ್ರಶ್ನೆಯಾಗಿ ಉಳಿದಿದೆ. ಒಂದು ತಿಂಗಳು, ಎರಡು ತಿಂಗಳು, ಮೂರು ತಿಂಗಳಿನಲ್ಲೇ ಕೊವಿಡ್-19 ಲಸಿಕೆ ಬಿಡುಗಡೆ ಆಗುತ್ತದೆ ಎಂದು ಜಾಗತಿಕ ವಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ಲಸಿಕೆ ಸಂಶೋಧಕರು ಹೇಳುತ್ತಿದ್ದಾರೆ.
ಭಾರತದಲ್ಲಿರುವ ಒಬ್ಬ ಸಾಮಾನ್ಯ ಪ್ರಜೆಯು ಕೊರೊನಾವೈರಸ್ ಸೋಂಕಿಗೆ ಲಸಿಕೆ ಪಡೆಯಬೇಕಾದಲ್ಲಿ 2022ರವರೆಗೂ ಕಾಯಲೇಬೇಕು ಎಂದು ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಸ್ಪಷ್ಟವಾಗಿ ತಿಳಿಸಿದ್ದಾರೆ. ಕೊರೊನಾವೈರಸ್ ನಿರ್ವಹಣಾ ರಾಷ್ಟ್ರೀಯ ಕಾರ್ಯಪಡೆ ಸದಸ್ಯರೂ ಆಗಿರುವ ಡಾ.ರಂದೀಪ್ ಗುಲೇರಿಯಾ, ಭಾರತೀಯ ಮಾರುಕಟ್ಟೆಗಳಲ್ಲಿ ಕೊವಿಡ್-19 ಲಸಿಕೆ ಸಾಮಾನ್ಯರಿಗೆ ಸಿಗಬೇಕಾದರೆ ಕನಿಷ್ಠ ಒಂದು ವರ್ಷವಾದರೂ ಕಾಯಲೇಬೇಕು ಎಂದು ತಿಳಿಸಿದ್ದಾರೆ.
ದೇಶದಲ್ಲಿ ಲಸಿಕೆ ಸಾಗಾಣಿಕೆಯದ್ದೇ ದೊಡ್ಡ ಸವಾಲು
ಕೊರೊನಾವೈರಸ್ ಸೋಂಕಿನ ಲಸಿಕೆಯನ್ನು ತಂಪಾದ ವಾತಾವರಣದಲ್ಲಿ ಇರಿಸಿ ದೇಶಕ್ಕೆ ತೆಗೆದುಕೊಂಡು ಬರಬೇಕಾಗುತ್ತದೆ. ದೇಶದಲ್ಲೇ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಿರಿಂಜ್ ಗಳಲ್ಲಿ ಲಸಿಕೆಯನ್ನು ಮತ್ತು ಮೊಣಚಾದ ಸೂಜಿಗಳನ್ನು ಸಾಗಿಸುವುದು ಕೂಡಾ ಸವಾಲಿನ ಕೆಲಸವಾಗುತ್ತದೆ. ಒಂದು ಲಸಿಕೆಯನ್ನು ಕಂಡು ಹಿಡಿದ ನಂತರದಲ್ಲಿ ಅದಕ್ಕಿಂತ ಉತ್ತಮ, ಸುರಕ್ಷಿತ ಹಾಗೂ ಪರಿಣಾಮಕಾರಿ ಲಸಿಕೆ ಸಂಶೋಧಿಸುವುದು ಕೂಡಾ ಸವಾಲಾಗುತ್ತದೆ.
ಕೊರಾನಾವೈರಸ್ ನಿವಾರಣೆಗೆ Antivirus ಇಡ್ಲಿ-ವಡಾ, ಸಮೋಸಾ!
A ಲಸಿಕೆ ಯಾರಿಗೆ B ಲಸಿಕೆ ನೀಡುವುದು ಯಾರಿಗೆ?
ಕೊರೊನಾವೈರಸ್ ಮೊದಲ ಲಸಿಕೆ ನಂತರದಲ್ಲಿ ಮತ್ತೊಂದು ಲಸಿಕೆಯು ಮಾರುಕಟ್ಟೆಯಲ್ಲಿ ಬಿಡುಗಡೆ ಆಯಿತು ಎಂದೇ ಇಟ್ಟುಕೊಳ್ಳೋಣ. ಯಾವ ಲಸಿಕೆ ಎಷ್ಟು ಪರಿಣಾಮಕಾರಿ ಎಂದು ಅರಿತುಕೊಳ್ಳುವುದು ಹೇಗೆ. ಯಾವ ಕೊವಿಡ್-19 ಸೋಂಕಿತನಿಗೆ A ಅಥವಾ B ಲಸಿಕೆಯನ್ನು ನೀಡಬೇಕು ಎಂದು ಹೇಗೆ ತಾನೇ ನಿರ್ಧರಿಸಲಾಗುತ್ತದೆ ಎಂಬುದನ್ನು ಮೊದಲೇ ಕಂಡುಕೊಳ್ಳಬೇಕಾಗುತ್ತದೆ ಎಂದು ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಲಸಿಕೆ ಹಂಚಿಕೆ ಬಗ್ಗೆ ಸರ್ಕಾರದಿಂದ ನೀಲನಕ್ಷೆ
ಕೇಂದ್ರ ಸರ್ಕಾರವು ಕೊರೊನಾವೈರಸ್ ಲಸಿಕೆಯ ಉತ್ಪಾದನೆ ಮತ್ತು ವಿತರಣೆ ಕುರಿತಾದ ವ್ಯವಸ್ಥಿತ ನೀಲನಕ್ಷೆಯನ್ನು ಸಿದ್ಧಪಡಿಸಬೇಕಿದೆ. ಸರ್ಕಾರದ ಪ್ರಾಯೋಜಕತ್ವದಲ್ಲಿ ನಿಗದಿತ ಸಮಯದಲ್ಲಿ ನಿರ್ದಿಷ್ಟ ಮಾನದಂಡಗಳ ಪ್ರಕಾರ ಕೊವಿಡ್-19 ಲಸಿಕೆಯನ್ನು ವಿತರಿಸುವುದು ಸೂಕ್ತ ನಡೆ ಆಗುತ್ತದೆ ಎಂದು ಡಾ.ರಂದೀಪ್ ಗುಲೇರಿಯಾ ಸಲಹೆ ನೀಡಿದ್ದಾರೆ.
ಆರಂಭಿಕ ಹಂತದಲ್ಲಿ 30 ಲಕ್ಷ ಜನರಿಗೆ ಲಸಿಕೆ ವಿತರಣೆ
ಭಾರತದಲ್ಲಿ ಅತ್ಯಂತ ಅಗತ್ಯ ಎನಿಸಿದ 30 ಕೋಟಿ ಜನರನ್ನು ಗುರುತಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ ಕೊರೊನಾವೈರಸ್ ಲಸಿಕೆಯು ಬಿಡುಗಡೆಯಾದ ಬೆನ್ನಲ್ಲೇ ಪಟ್ಟಿ ಮಾಡಲಾಗಿರುವ ನಿಗದಿತ ವರ್ಗದ ಸಿಬ್ಬಂದಿ ಮತ್ತು ಜನರಿಗೆ ಮಾತ್ರ ಲಸಿಕೆಯನ್ನು ವಿತರಿಸಲಾಗುತ್ತದೆ ಎಂದು ನೀತಿ ಆಯೋಗದ ಸದಸ್ಯ ವಿನೋದ್ ಪೌಲ್ ಮಾಹಿತಿ ನೀಡಿದ್ದಾರೆ.
Recommended Video
ಲಸಿಕೆ ಪಡೆದ ಮೇಲೆ ಮೊಬೈಲ್ ಗೆ ಸಂದೇಶ
ದೇಶದ ಶಾಲೆಗಳು, ಸರ್ಕಾರಿ ಕಚೇರಿಗಳು, ಪಂಚಾಯತ್ ಕಚೇರಿಗಳಲ್ಲಿ ಕೊರೊನಾವೈರಸ್ ಸೋಂಕಿನ ಲಸಿಕೆಯನ್ನು ನೀಡಲಾಗುತ್ತದೆ. ಮೊದಲಿಗೆ ದೇಶದ ಪ್ರತಿಯೊಬ್ಬರ ಪ್ರತಿಕಾಯ ಸಾಮರ್ಥ್ಯದ ಕುರಿತು ಆಧಾರ್ ಸಂಖ್ಯೆಗೆ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಯಾವ ವ್ಯಕ್ತಿಗಳಿಗೆ ಕೊವಿಡ್-19 ಲಸಿಕೆಯು ತೀರಾ ಅತ್ಯವಶ್ಯಕ ಎನಿಸಿರುತ್ತದೆಯೋ ಅಂಥವರಿಗೆ ಮಾತ್ರ ಪ್ರಾಥಮಿಕ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ಹೀಗೆ ಲಸಿಕೆ ಪಡೆದ ಪ್ರತಿಯೊಬ್ಬರ ಮೊಬೈಲ್ ಸಂಖ್ಯೆಗೆ ಲಸಿಕೆ ಪಡೆದ ದಿನ, ಸಮಯ, ದಿನಾಂಕ ಸಹಿತವಾಗಿ ಸಂದೇಶವನ್ನು ಕಳುಹಿಸಲಾಗುತ್ತದೆ. ಅಲ್ಲದೇ ಆಧಾರ್ ಸಂಖ್ಯೆಯಲ್ಲಿ ಲಸಿಕೆ ಪಡೆದಿರುವ ಬಗ್ಗೆ ಮಾಹಿತಿ ಶೇಖರಣೆ ಆಗಿರುತ್ತದೆ.
ಒಬ್ಬ ವ್ಯಕ್ತಿಯು ಪದೇ ಪದೆ ಕೊವಿಡ್-19 ಲಸಿಕೆ ಪಡೆದುಕೊಳ್ಳುವುದು ಅಥವಾ ಪಡೆದ ಲಸಿಕೆಯನ್ನು ಹಣಕ್ಕಾಗಿ ಮಾರಾಟ ಸೇರಿದಂತೆ ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸುವ ದೃಷ್ಟಿಯಿಂದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ವ್ಯವಸ್ಥೆಯ ಮೂಲಕ ಲಸಿಕೆ ವಿತರಣೆಗೆ ಯೋಜನೆ ರೂಪಿಸಿಕೊಳ್ಳುತ್ತಿದೆ.