ತರಬೇತುದಾರನ ಯಡವಟ್ಟಿಗೆ ವಿದ್ಯಾರ್ಥಿನಿ ಬಲಿ: ಕಾಲೇಜು ಘಟನೆಯ ವೈರಲ್ ವಿಡಿಯೋ
ಕೊಯಮತ್ತೂರು, ಜುಲೈ 13: ವಿಪತ್ತು ನಿರ್ವಹಣೆಗೆ ನೀಡಲಾಗುತ್ತಿದ್ದ ತರಬೇತಿ ಯುವತಿಯೊಬ್ಬಳ ಜೀವ ಬಲಿತೆಗೆದುಕೊಂಡ ದಾರುಣ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಕೊಯಮತ್ತೂರಿನ ಹೊರವಲಯದ ನರಸಿಪುರಂನಲ್ಲಿರುವ ಕೊವೈ ಕಲೈಮಗಳ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಸಂಜೆ ವಿಪತ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ ಹಾಗೂ ನಮ್ಮ ಜೀವ ಉಳಿಸಿಕೊಳ್ಳುವುದು ಹೇಗೆ ಎಂಬ ತರಬೇತಿ ನೀಡಲಾಗುತ್ತಿತ್ತು.
ಅಗ್ನಿಶಾಮಕದಳ ಅಣಕು ಆಟಕ್ಕೆ ಯುವತಿ ಬಲಿ
ಈ ವೇಳೆ ಎರಡನೆ ವರ್ಷದ ಪದವಿ ವಿದ್ಯಾರ್ಥಿನಿ ಎನ್. ಲೋಕೇಶ್ವರಿ ಎರಡನೆಯ ಮಹಡಿಯಿಂದ ಹಾರುವ ಸಾಹಸಕ್ಕೆ ಮುಂದಾಗಿದ್ದರು.
ಕೆಳಗೆ ಉಳಿದ ವಿದ್ಯಾರ್ಥಿಗಳು ಬಲೆ ಹಿಡಿದುಕೊಂಡು ಆಕೆಯನ್ನು ಹಿಡಿಯಲು ನಿಂತಿದ್ದರು. ಆದರೆ, ಮೇಲಿನಿಂದ ಕೆಳಕ್ಕೆ ನೋಡಿದ್ದ ಲೋಕೇಶ್ವರಿ ಭಯದಿಂದಾಗಿ ಜಿಗಿಯಲು ಹಿಂದೇಟು ಹಾಕಿದ್ದರು.
ಅವರ ಜತೆಯಲ್ಲಿ ಇದ್ದ ತರಬೇತುದಾರ ಜಿಗಿದರೂ ಹಿಡಿದುಕೊಳ್ಳುತ್ತಾರೆ, ಯಾವ ಅಪಾಯವೂ ಆಗೊಲ್ಲ ಎಂದು ಧೈರ್ಯ ತುಂಬಿದರೂ ಲೋಕೇಶ್ವರಿ ಒಪ್ಪಲಿಲ್ಲ.
Innocent girl succumbed during national disaster management program held at private college campus in Coimbatore. Sheer negligence and irresponsible activity in the name of training program. pic.twitter.com/fiJxqqvV6z
— Aishwarya (@AishwaryaPT) 12 July 2018
ಆಗ ತರಬೇತುದಾರ ಏಕಾಏಕಿ ಅವರನ್ನು ಕೆಳಕ್ಕೆ ತಳ್ಳಿದ್ದಾನೆ. ಬೀಳುವ ವೇಳೆ ಕಟ್ಟಡದ ಮೊದಲ ಮಹಡಿಯ ಹೊರಭಾಗದ ಕಟ್ಟೆಗೆ ಆಕೆಯ ತಲೆಬಡಿದಿದೆ.
ಕೆಳಗಿದ್ದ ವಿದ್ಯಾರ್ಥಿಗಳು ಬಲೆಯಲ್ಲಿ ಆಕೆಯನ್ನು ಹಿಡಿದರೂ, ತಲೆಗೆ ತೀವ್ರ ಗಾಯವಾದ ಕಾರಣ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಯುವತಿಯ ತಲೆ ಮತ್ತು ಕುತ್ತಿಗೆಯ ಸೂಕ್ಷ್ಮ ಭಾಗಗಳಿಗೆ ಪೆಟ್ಟಾಗಿತ್ತು. ತುರ್ತು ದ್ವಾರದ ಮೂಲಕ ಜಿಗಿಯುವ ತರಬೇತಿಗೆ 20 ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿತ್ತು.
ಪೊಲೀಸರು ತರಬೇತುದಾರ ಆರ್ಮುಗಂ ಮತ್ತು ಕಾಲೇಜಿನ ಪ್ರಿನ್ಸಿಪಾಲ್ ಮಾಲಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.