ಕಲ್ಲಿದ್ದಲು ಕೊರತೆ ಇಲ್ಲದಿದ್ದರೆ ವಿದ್ಯುತ್ ಸ್ಥಾವರಗಳ ಬಾಗಿಲಿಗೆ ಏಕೆ ಬೀಗ?
ನವದೆಹಲಿ, ಅಕ್ಟೋಬರ್ 12: ಭಾರತದಾದ್ಯಂತ ಉಷ್ಟ ವಿದ್ಯುತ್ ಸ್ಥಾವರಗಳು ಸ್ಥಗಿತಗೊಳ್ಳುತ್ತಿರುವುದರ ನಡುವೆ ಕಲ್ಲಿದ್ದಲು ಕೊರತೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಕಿಡಿ ಕಾರಿದ್ದಾರೆ.
"ಕೇಂದ್ರ ಸರ್ಕಾರವು ಕಲ್ಲಿದ್ದಲು ಕೊರತೆ ಸೃಷ್ಟಿಯಾಗಿಲ್ಲ ಎಂದು ಹೇಳುತ್ತಿದೆ, ಇನ್ನೊಂದು ಕಡೆಯಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳು ಬಾಗಿಲು ಮುಚ್ಚುತ್ತಿವೆ. ಸುಳ್ಳು ಭರವಸೆ ಮತ್ತು ಮಾತುಗಳನ್ನು ಏಕೆ ಆಡಬೇಕು, ಈ ನಡುವೆ ಕಲ್ಲಿದ್ದಲು ಆಮದನ್ನು ಸಹ ನಿಲ್ಲಿಸಲಾಗಿದೆ. ಇದು ವಿದ್ಯುತ್ ಸರಬರಾಜಿನ ಮೇಲೂ ಪರಿಣಾಮ ಬೀರಲಿದ್ದು, ಕೇಂದ್ರ ಸರ್ಕಾರ ಏನು ಮಾಡಲು ಹೊರಟಿದೆ," ಎಂದು ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಪ್ರಶ್ನೆ ಮಾಡಿದ್ದಾರೆ.
ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಹಿಂದಿದೆಯಾ ಇಲಾಖೆ ಖಾಸಗೀಕರಣದ ಹುನ್ನಾರ?
"ಛತ್ತೀಸ್ಗಢಕ್ಕೆ ಸಂಬಂಧಿಸಿದಂತೆ ಕಲ್ಲಿದ್ದಲು ಪೂರೈಕೆಯ ಕುರಿತು ಸೌತ್ ಈಸ್ಟರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ (ಎಸ್ಇಸಿಎಲ್) ಹಾಗೂ ವಿದ್ಯುತ್ ಮತ್ತು ರೈಲ್ವೇ ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ಕಲ್ಲಿದ್ದಲು ಪೂರೈಕೆಯ ಕೊರತೆಯಿಲ್ಲ ಎಂದು ಅವರು ನನಗೆ ಭರವಸೆ ನೀಡಿದ್ದಾರೆ" ಎಂದು ಬಾಘೆಲ್ ಹೇಳಿದ್ದಾರೆ.
ದೆಹಲಿಯಲ್ಲಿ ಕಲ್ಲಿದ್ದಲು ದಾಸ್ತಾನು ಅರ್ಧಕ್ಕರ್ಧ ಕಡಿಮೆ
ರಾಷ್ಟ್ರ ರಾಜಧಾನಿಯಲ್ಲಿ ಕಲ್ಲಿದ್ದಲು ಪೂರೈಕೆ ಮತ್ತು ದಾಸ್ತಾನು ಪ್ರಮಾಣವನ್ನು ಮೊದಲಿಗೆ ಹೋಲಿಸಿದರೆ ಅರ್ಧದಷ್ಟು ಕಡಿಮೆಯಾಗಿದೆ ಎಂದು ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. "ದೆಹಲಿಯು 4,000 ಮೆಗಾವ್ಯಾಟ್ ವಿದ್ಯುತ್ ಬಳಕೆ ಮಾಡುತ್ತಿದ್ದು, ಈಗ ಅದರ ಅರ್ಧದಷ್ಟು ಪಡೆಯಲು ಸಾಧ್ಯವಾಗುತ್ತಿಲ್ಲ. ಬಹುಪಾಲು ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಸೃಷ್ಟಿಯಾಗಿದೆ. ಯಾವುದೇ ವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ದಾಸ್ತಾನು 15 ದಿನಗಳಿಗಿಂತ ಕಡಿಮೆಯಾಗಬಾರದು. ಆದರೆ ಪ್ರಸ್ತುತ ಸಂಗ್ರಹವಿರುವ ದಾಸ್ತಾನು ಮುಂದಿನ ಎರಡರಿಂದ ಮೂರು ದಿನಕ್ಕೆ ಸಾಕಾಗುತ್ತದೆ. ಎನ್ಟಿಪಿಸಿ ತನ್ನ ಸ್ಥಾವರಗಳ ಉತ್ಪಾದನಾ ಸಾಮರ್ಥ್ಯವನ್ನು ಶೇಕಡಾ 50-55ಕ್ಕೆ ಸೀಮಿತಗೊಳಿಸಿದೆ "ಎಂದು ಜೈನ್ ತಿಳಿಸಿದ್ದಾರೆ.
ಕಲ್ಲಿದ್ದಲು ಅಭಾವದ ಬಗ್ಗೆ ಸಿಎಂ ನಿತೀಶ್ ಕುಮಾರ್ ಅಸಮಾಧಾನ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಕಲ್ಲಿದ್ದಲು ಕೊರತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕಲ್ಲಿದ್ದಲು ಕೊರತೆಯ ಸಮಸ್ಯೆ ಇರುವುದು ನಿಜ. ನಮ್ಮ ಅಗತ್ಯಕ್ಕೆ ತಕ್ಕಂತೆ, ನಾವು ಅದನ್ನು NTPC ಯಿಂದ ಅಥವಾ ಖಾಸಗಿ ಕಂಪನಿಗಳಿಂದ ಪಡೆಯುತ್ತೇವೆ. ಆದರೆ ಈಗ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದೆ. ಇಂತಹ ಪರಿಸ್ಥಿತಿ ಉದ್ಭವಿಸಲು ಹಲವು ಕಾರಣಗಳಿವೆ. ಇದು ಬಿಹಾರಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ದೇಶಾದ್ಯಂತ ಇಂಥದೊಂದು ಸಮಸ್ಯೆ ಸೃಷ್ಟಿಯಾಗಿದೆ," ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಪ್ರಧಾನಿಗೆ ಪಂಜಾಬ್, ಆಂಧ್ರ, ದೆಹಲಿ ಸಿಎಂಗಳಿಂದ ಪತ್ರ
ಕಲ್ಲಿದ್ದಲು ಮತ್ತು ಅನಿಲ ಪೂರೈಕೆ ಪ್ರಮಾಣವನ್ನು ಹೆಚ್ಚಿಸುವಂತೆ ಕೋರಿ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಕಲ್ಲಿದ್ದಲು ಕೊರತೆ ಸಮಸ್ಯೆ ಬಗೆಹರಿಸುವುದಕ್ಕೆ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಲೈವ್ ಹಿಂದೂಸ್ತಾನ್ ವರದಿ ಪ್ರಕಾರ, ಪಂಜಾಬಿನಲ್ಲಿ ಮೂರು ಉಷ್ಣ ವಿದ್ಯುತ್ ಸ್ಥಾವರ, ಕೇರಳದಲ್ಲಿ ನಾಲ್ಕು ಹಾಗೂ ಮಹಾರಾಷ್ಟ್ರದಲ್ಲಿ 13 ಉಷ್ಟ ವಿದ್ಯುತ್ ಸ್ಥಾವರಗಳು ಸ್ಥಗಿತಗೊಂಡಿವೆ.
ಭಾರತದಲ್ಲಿ ಕತ್ತಲು ಕವಿಸುತ್ತಾ ಕಲ್ಲಿದ್ದಲು ಕೊರತೆ?
ಕಲ್ಲಿದ್ದಲು ಕೊರತೆ ಕುರಿತು ಚರ್ಚೆಗೆ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿದರು. ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್, ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಮತ್ತು ಉತ್ತರ ವಿಭಾಗದಲ್ಲಿ ಎರಡೂ ಸಚಿವಾಲಯಗಳ ಉನ್ನತ ಅಧಿಕಾರಿಗಳೊಂದಿಗೆ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಿದರು. ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ದಾಸ್ತಾನು ಬಳಕೆಯನ್ನು ಮೀರಿದೆ ಎಂದು ಕೇಂದ್ರ ವಿದ್ಯುತ್ ಸಚಿವರು ಭರವಸೆ ನೀಡಿದ ಒಂದು ದಿನದ ನಂತರ ಉನ್ನತ ಮಟ್ಟದ ಸಭೆ ಕರೆಯಲಾಯಿತು, ಇದು ಕ್ರಮೇಣ ಇಂಧನ ದಾಸ್ತಾನು ಸ್ಥಿತಿ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಕೊರತೆ ಸೃಷ್ಟಿಯಾಗಲಿದೆ ಎಂದ ಆರೋಪವನ್ನು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ತಳ್ಳಿ ಹಾಕಿದ್ದಾರೆ. ತಜ್ಞರ ತಂಡವು ವಾರದಲ್ಲಿ ಎರಡು ಬಾರಿ ಕಲ್ಲಿದ್ದಲು ನಿಕ್ಷೇಪಗಳ ವಸ್ತುಸ್ಥಿತಿ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಕಲ್ಲಿದ್ದಲು ಸಚಿವಾಲಯ ಪ್ರತಿಪಾದಿಸಿದೆ.