ಕಲ್ಲಿದ್ದಲು ಪೂರೈಕೆ; ಗೂಡ್ಸ್ ರೈಲಿಗಾಗಿ ಪ್ರಯಾಣಿಕ ರೈಲುಗಳು ರದ್ದು
ನವದೆಹಲಿ, ಏಪ್ರಿಲ್ 29; ಕಲ್ಲಿದ್ದಲು ಸಾಗಣೆ ಮಾಡುವ ಗೂಡ್ಸ್ ರೈಲುಗಳ ಸಂಚಾರಕ್ಕಾಗಿ ಭಾರತೀಯ ರೈಲ್ವೆ ಹಲವು ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ದೇಶದ ವಿವಿಧ ರಾಜ್ಯಗಳು ಕಲ್ಲಿದ್ದಲು ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬೇಸಿಗೆಯ ಬಿಸಿಯ ನಡುವೆ ವಿವಿಧ ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತಿದೆ. ಕಲ್ಲಿದ್ದಲು ಸಹಾಯದಿಂದ ದೇಶದಲ್ಲಿ ಶೇ 70ರಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳಿಗೆ ಭಾರತೀಯ ರೈಲ್ವೆ ಕಲ್ಲಿದ್ದಲು ಪೂರೈಕೆ ಮಾಡುತ್ತದೆ.
ಕಲ್ಲಿದ್ದಲು ಪೂರೈಕೆ ಕಟ್: ದೆಹಲಿ ಮೆಟ್ರೋ, ಆಸ್ಪತ್ರೆಗಳಲ್ಲಿ ಪವರ್ ಕಟ್!
ಹಲವು ರಾಜ್ಯಗಳು ಈಗಾಗಲೇ ವಿದ್ಯುತ್ ಕೊರತೆ ಹಿನ್ನಲೆಯಲ್ಲಿ ಪವರ್ ಕಟ್ ಜಾರಿಗೆ ತಂದಿವೆ. ಇದರಿಂದಾಗಿ ಕೈಗಾರಿಕೆಗಳು ಸಹ ಸಂಕಷ್ಟಕ್ಕೆ ಸಿಲುಕಿವೆ. ವಿದ್ಯುತ್ ಕೊರತೆಯಿಂದಾಗಿ ಆರ್ಥಿಕ ಪರಿಸ್ಥಿತಿ ಮೇಲೆ ಸಹ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.
ಕಲ್ಲಿದ್ದಲು ಕೊರತೆ ಆತಂಕ: ಜಾರ್ಖಂಡ್ನಲ್ಲಿ ಜೋಶಿ ಸಭೆ
ಭಾರತೀಯ ರೈಲ್ವೆ ಕಾರ್ಯಕಾರಿ ನಿರ್ವಾಹಕ ಗೌರವ್ ಕುಮಾರ್ ಬನ್ಸಾಲ್ ಮಾತನಾಡಿ, "ಕಲ್ಲಿದ್ದಲು ಸಾಗಣೆ ಮಾಡುವ ಗೂಡ್ಸ್ ರೈಲುಗಳ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ. ಗೂಡ್ಸ್ ರೈಲು ಸಂಚಾರದ ಬಳಿಕ ಪ್ರಯಾಣಿಕರ ರೈಲುಗಳ ಸಂಚಾರ ಪುನಃ ಆರಂಭವಾಗಲಿದೆ" ಎಂದು ಹೇಳಿದ್ದಾರೆ.
ಭಾರತದಲ್ಲಿ ಕಲ್ಲಿದ್ದಲು ಬೇಡಿಕೆ ಶೇ 63ರಷ್ಟು ಏರಿಕೆಯಾಗಲಿದೆ
ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದಕ್ಕೆ ಭಾರತೀಯ ರೈಲ್ವೆಯನ್ನು ದೂರಲಾಗುತ್ತಿದೆ. ಅದರಲ್ಲೂ ದೂರದ ಪ್ರದೇಶಗಳಿಗೆ ಸಂಚಾರ ನಡೆಸುವ ರೈಲುಗಳು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗೂಡ್ಸ್ ರೈಲುಗಳ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ.
ರೈಲ್ವೆ ಕಲ್ಲಿದ್ದಲು ಪೂರೈಕೆಗಾಗಿ 100,000 ಕ್ಕೂ ಹೆಚ್ಚು ವ್ಯಾಗನ್ಗಳನ್ನು ಸೇರಿಸಿಕೊಂಡಿದೆ. ಲಭ್ಯವಿರುವ ಮಾರ್ಗದಲ್ಲಿ ಗೂಡ್ಸ್ ರೈಲು ಸಂಚಾರಕ್ಕೆ ನೇರ ಮಾರ್ಗವನ್ನು ನೀಡಲಿದೆ. ಈ ತಿಂಗಳ ಆರಂಭದಲ್ಲಿ ಕಲ್ಲಿದ್ದಲಿಗೆ ಬೇಡಿಕೆ ಕಡಿಮೆ ಆಗಿತ್ತು. ಆದರೆ ಈಗ ವಿದ್ಯುತ್ ಕೊರತೆಯಿಂದಾಗಿ ಬೇಡಿಕೆ ಹೆಚ್ಚಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ಉಷ್ಣಾಂಶ ಏರಿಕೆಯಾಗಿದ್ದು, ವಿದ್ಯುತ್ಗಾಗಿ ಬೇಡಿಕೆ ಹೆಚ್ಚಾಗಿದೆ. ಭಾರತೀಯ ಹವಾಮಾನ ಇಲಾಖೆ ಇನ್ನೂ ಐದು ದಿನಗಳ ಕಾಲ ಉಷ್ಣಾಂಶ ಹೀಗೆ ಇರಲಿದೆ, ಬಿಸಿಗಾಳಿ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ.
ಮಾರ್ಚ್ನಲ್ಲಿ ದೇಶದ ಸಾಮಾನ್ಯ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈಗ 40 ಡಿಗ್ರಿ ಸೆಲ್ಸಿಯಸ್ಗಿಂತ ಅಧಿಕ ತಾಪಮಾನ ದಾಖಲಾಗುತ್ತಿದೆ. ದೆಹಲಿಯಲ್ಲಿ ಬುಧವಾರ, ಗುರುವಾರ ತಾಪಮಾನ 42 ಡಿಗ್ರಿಗಿಂತಲೂ ಅಧಿಕ ದಾಖಲಾಗಿದೆ.