ಕಲ್ಲಿದ್ದಲು ಹಗರಣ: ಕಾಂಗ್ರೆಸ್ಸಿನ ಮಾಜಿ ಸಂಸದ ನವೀನ್ ಜಿಂದಾಲ್ ಗೆ ಸಮನ್ಸ್
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನ ಮಾಜಿ ಸಂಸದ ನವೀನ್ ಜಿಂದಾಲ್ ಸೇರಿದಂತೆ ಐವರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಹಾಕಿದ್ದು, ಎಲ್ಲರ ವಿರುದ್ಧ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ನವದೆಹಲಿ, ಮೇ 23: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನ ಮಾಜಿ ಸಂಸದ ನವೀನ್ ಜಿಂದಾಲ್ ಸೇರಿದಂತೆ ಐವರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಹಾಕಿದ್ದು, ಎಲ್ಲರ ವಿರುದ್ಧ ದೆಹಲಿ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಮಧ್ಯಪ್ರದೇಶದಲ್ಲಿ ಕಲ್ಲಿದ್ದಲು ಹಂಚಿಕೆಗೆ ಸಂಬಂಧಿಸಿದಂತೆ ಅವ್ಯವಹಾರ, ಸಂಚು ನಡೆಸಿದ ಆರೋಪದ ಮೇಲೆ ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ.ಜಿಂದಾಲ್ ಸ್ಟೀಲ್ ಮತ್ತು ಪವರ್ ಕಂಪೆನಿ ಸರ್ಕಾರದಿಂದ ಕಲ್ಲಿದ್ದಲು ನಿಕ್ಷೇಪಗಳನ್ನು ಪಡೆಯುವ ಸಂದರ್ಭದಲ್ಲಿ ಕಾನೂನು ನಿಯಮಗಳನ್ನು ಉಲ್ಲಂಘಿಸಿದೆ.
ಜಿಂದಾಲ್ ನಿಕ್ಷೇಪ ಪರವಾನಗಿ ಪಡೆಯಲು ಅಂದಿನ ರಾಜ್ಯ ಸಚಿವ ದಾಸರಿ ನಾರಾಯಣರಾವ್ ಅವರಿಗೆ ಕಿಕ್ ಬ್ಯಾಕ್ ಪಡೆದಿದ್ದಾರೆ. ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಮಧುಕೋಡಾ ಕೂಡಾ ಸಹ ಅರೋಪಿ. ಮಧ್ಯಪ್ರದೇಶವಲ್ಲದೆ, ಜಾರ್ಖಂಡಿನ ಅಮರಕೊಂಡಾ ಮುರ್ಗದಂಗಲ್ ನಲ್ಲಿ ಕಲ್ಲಿದ್ದಲ್ಲು ಗಣಿ ಹಂಚಿಕೆ ಅವ್ಯವಹಾರವೂ ಸೇರಿದೆ.
ಯುಪಿಎ ಸರ್ಕಾರದ ಆಡಳಿತ ಅವಧಿಯಲ್ಲಿ ಸುಮಾರು 85 ಸಾವಿರ ಕೋಟಿ ರು. ಮೊತ್ತದ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪವಿದೆ. 2006ರಿಂದ ಆರಂಭವಾಗಿ ನಾಲ್ಕು ವರ್ಷಗಳಲ್ಲಿ 51 ಲಕ್ಷ ಕೋಟಿ ಮೌಲ್ಯದ 17 ಶತಕೋಟಿ ಮೆಟ್ರಿಕ್ ಟನ್ ಕಲ್ಲಿದ್ದಲು ಹೊಂದಿರುವ 73 ಬ್ಲಾಕ್ ಗಳನ್ನೂ 143 ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿತ್ತು. ಹಾಗಾಗಿ 2006ರಲ್ಲಿ 51, 2007ರಲ್ಲಿ 19, 2008ರಲ್ಲಿ 41 ಮತ್ತು 2009ರಲ್ಲಿ 32 ಕಂಪನಿಗಳು ಗಣಿ ಗುತ್ತಿಗೆ ಪಡೆದಿದ್ದವು ಎಂದು ಆರೋಪಿಸಲಾಗಿದೆ.