ಪಂಜಾಬ್ನಲ್ಲಿ ಟೆಲಿಕಾಂ ಟವರ್ ಹಾನಿಯನ್ನು ತೀವ್ರವಾಗಿ ಖಂಡಿಸಿದ COAI
ನವದೆಹಲಿ, ಡಿಸೆಂಬರ್ 29: ಕೇಂದ್ರ ಕೃಷಿ ಕಾನೂನು ವಿರೋಧಿಸಿ ಪಂಜಾಬ್ ನಲ್ಲಿ ಪ್ರತಿಭಟನೆ ರೂಪವಾಗಿ 1500ಕ್ಕೂ ಹೆಚ್ಚು ಮೊಬೈಲ್ ಟವರ್ ಗಳನ್ನು ಮತ್ತು ಟೆಲಿಕಾಂ ನೆಟ್ ವರ್ಕ್ ಮೂಲಸೌಕರ್ಯ ನಾಶಗೊಳಿಸಿದ ಕ್ರಮವನ್ನು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಪ್ರಬಲವಾಗಿ ಖಂಡಿಸಿದೆ.
ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುವ ಮೂಲಕ ಪಂಜಾಬ್ನಲ್ಲಿ ಮುಖೇಶ್ ಅಂಬಾನಿ ನಿಯಂತ್ರಿತ ರಿಲಯನ್ಸ್ ಜಿಯೋ ಟವರ್ ಮೂಲಸೌಕರ್ಯದ ಮೇಲೆ ನಡೆದ ದಾಳಿಯನ್ನು ಖಂಡಿಸಿದೆ.
ಮಾತುಕತೆಗೆ ಮುನ್ನವೇ ಬೃಹತ್ ಹೋರಾಟಕ್ಕೆ ಸಿದ್ಧಗೊಳ್ಳುತ್ತಿದೆ ವೇದಿಕೆ
ಯಾವುದೇ ವಿಷಯದ ಬಗ್ಗೆ ಪ್ರತಿಭಟಿಸುವ ಜನರ ಹಕ್ಕನ್ನು ಅದು ಗೌರವಿಸುತ್ತದೆ ಎಂದು ಸಿಒಎಐ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಟೆಲಿಕಾಂ ನೆಟ್ವರ್ಕ್ ಮೂಲಸೌಕರ್ಯವನ್ನು ಹಾಳುಮಾಡುವುದು ಮತ್ತು ಟೆಲಿಕಾಂ ಸೇವೆಗಳನ್ನು ಅಡ್ಡಿಪಡಿಸುವುದನ್ನು ತೀವ್ರವಾಗಿ ಖಂಡಿಸಲಾಗಿದೆ.
''ಲಕ್ಷಾಂತರ ಗ್ರಾಹಕರ ಪಾಲಿಗೆ ಟೆಲಿಕಾಂ ಸೇವೆ ಜೀವನಾಡಿಇದ್ದಂತೆ ಎಂದಿರುವ ಸಿಒಎಐನ ಮಹಾ ನಿರ್ದೇಶಕ ಎಸ್.ಪಿ. ಕೊಚ್ಚರ್, ಟೆಲಿಕಾಂ ಸೇವೆ ವ್ಯತ್ಯಯದಿಂದಾಗಿ ಜನ ಸಾಮಾನ್ಯರಿಗೆ ಬಹಳ ಸಮಸ್ಯೆಯಾಗುತ್ತಿದೆ. ಇದು ಅಗತ್ಯ ಸೇವೆಗಳಲ್ಲಿ ಒಂದಾಗಿದೆ'' ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ)ದಲ್ಲಿ ರಿಲಯನ್ಸ್ ಜಿಯೋ, ಭಾರ್ತಿ ಏರ್ ಟೆಲ್ ಹಾಗೂ ವೊಡಾಫೋನ್ ಐಡಿಯಾದ ಸದಸ್ಯರು ಒಳಗೊಂಡಿದ್ದಾರೆ. ಕೇಂದ್ರದ ಹೊಸ ಕೃಷಿ ಕಾನೂನಿನ ವಿರುದ್ಧ ಪಂಜಾಬ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, 1500ಕ್ಕೂ ಹೆಚ್ಚು ಟೆಲಿಕಾಂ ಟವರ್ ಗಳಿಗೆ ಹಾನಿಯಾಗಿದೆ. ಕೆಲವು ಕಡೆ ಸೇವೆ ವ್ಯತ್ಯಯವಾಗಿದೆ.
ಟೆಲಿಕಾಂ ಸಿಗ್ನಲ್ ಗಳಿಗೆ ಪೂರಕವಾಗಿ ಆಗುವ ವಿದ್ಯುತ್ ಪೂರೈಕೆಗೆ ತಡೆಯಾಗಿದೆ ಮತ್ತು ಪಂಜಾಬ್ ನ ಹಲವು ಭಾಗಗಳಲ್ಲಿ ಕೇಬಲ್ ಕತ್ತರಿಸಲಾಗಿದೆ. ಕೇಂದ್ರ ಸರ್ಕಾರದ ಹೊಸ ಕಾನೂನಿನಿಂದ ಮುಕೇಶ್ ಅಂಬಾನಿಗೆ ಅನುಕೂಲ ಆಗುತ್ತದೆ ಎಂದು ಆರೋಪಿಸಿ, ಅವರ ಒಡೆತನದ ಜಿಯೋಗೆ ಸೇರಿದ ಮೂಲಸೌಕರ್ಯ ವ್ಯವಸ್ಥೆಗೆ ಹಾನಿ ಮಾಡಲಾಗುತ್ತಿದೆ. ಇದರ ಜತೆಗೆ ಗೌತಮ್ ಅದಾನಿ ಅವರನ್ನೂ ಪ್ರಮುಖ ಫಲಾನುಭವಿ ಎಂದು ಆರೋಪಿಸಲಾಗುತ್ತಿದೆ.
ಮೊಬೈಲ್ ಟವರ್ ಗಳನ್ನು ನಾಶಪಡಿಸಿ, ಟೆಲಿಕಾಂ ಸೇವೆ ವ್ಯತ್ಯಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಎಚ್ಚರಿಸಿದ್ದಾರೆ.