''ಪುದುಚೆರಿಗೂ ಬಂತು 'ಆಪರೇಷನ್ ಕಮಲ', ಎಲ್ಲ ಆಗಿದ್ದು ಕಿರಣ್ ಬೇಡಿಯಿಂದ''
ನವದೆಹಲಿ, ಫೆಬ್ರವರಿ 17: ಇಬ್ಬರು ಶಾಸಕರ ರಾಜೀನಾಮೆಯಿಂದ ಬಹುಮತ ಕಳೆದುಕೊಂಡು ಪತನಗೊಳ್ಳುವ ಭೀತಿಯಲ್ಲಿರುವ ಪುದುಚೆರಿಯ ಕಾಂಗ್ರೆಸ್ ಸರ್ಕಾರ ಗಟ್ಟಿಯಾಗಿ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಎನ್ ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎರಡು ದಿನದಲ್ಲಿ ರಾಜೀನಾಮೆ ನೀಡಿದ ಇಬ್ಬರು ಶಾಸಕರನ್ನು ಪಕ್ಷ ತೊರೆದು ಹೋಗದಂತೆ ಮನವೊಲಿಸಿಕೊಳ್ಳುತ್ತೇವೆ ಎಂದು ಭರವಸೆ ಹಂಚಿಕೊಂಡ ಅವರು, ನಮ್ಮ ಸರ್ಕಾರ ಅಲ್ಪಮತಕ್ಕೆ ಕುಸಿದಿಲ್ಲ ಎಂದಿದ್ದಾರೆ.
ಒಬ್ಬರ ಹಿಂದೆ ಒಬ್ಬರಂತೆ ಪಕ್ಷ ತೊರೆದ ಮಲ್ಲಾಡಿ ಕೃಷ್ಣ ರಾವ್ ಮತ್ತು ಜಾನ್ ಕುಮಾರ್ ಅವರ ರಾಜೀನಾಮೆಗಳನ್ನು ಅಂಗೀಕರಿಸಿಲ್ಲ. ಅವುಗಳನ್ನು ಸ್ಪೀಕರ್ ಇನ್ನೂ ಪರಿಶೀಲಿಸುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಜಾ ಬಗ್ಗೆ ಪುದುಚೇರಿ ಸಿಎಂ ಮಾತು?
ಇದೇ ಸಂದರ್ಭದಲ್ಲಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದು, ಮತ್ತೊಂದು ಆಪರೇಷನ್ ಕಮಲ ನಡೆಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಆಪರೇಷನ್ ಕಮಲವನ್ನು ಬಿಜೆಪಿಯವರು ಪುದುಚೆರಿಗೂ ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ. ಮುಂದೆ ಓದಿ.
ಕಿರಣ್ ಬೇಡಿ ಹಸ್ತಕ್ಷೇಪ
'ಮಲ್ಲಾಡಿ ಕೃಷ್ಣ ರಾವ್ ಅವರಿಗೆ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಅನೇಕ ಬಾರಿ ಕಿರುಕುಳ ನೀಡಿದ್ದರು. ಈ ಕಾರಣದಿಂದಲೇ ನಾವು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ್ದೆವು. ಮಲ್ಲಾಡಿ ಅವರನ್ನು ಕಿರಣ್ ಬೇಡಿ ಗುರಿಯನ್ನಾಗಿರಿಸಿಕೊಂಡಿದ್ದರು. ಅವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವ ಪ್ರಸ್ತಾಪ ಸಲ್ಲಿಸಿದರೂ ಬೇಡಿ ಅದನ್ನು ತಿರಸ್ಕರಿಸುತ್ತಿದ್ದರು.ಅವರಿಗಾಗಿ ಕನಿಷ್ಠ ನಾಲ್ಕು ವರ್ಷಗಳಿಂದ ನಾನು ಹೋರಾಡುತ್ತಿದ್ದೇನೆ. ನಮ್ಮ ಸರ್ಕಾರದ ದೈನಂದಿನ ಆಡಳಿತದಲ್ಲಿ ಕಿರಣ್ ಬೇಡಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಅದು ಪುದುಚೆರಿಯ ಜನರಿಗೂ ತಿಳಿದಿದೆ' ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಪುದುಚೇರಿ ಸರ್ಕಾರದ ಬಿಕ್ಕಟ್ಟಿನ ನಡುವೆ ರಾಜ್ಯಪಾಲೆ ಕಿರಣ್ ಬೇಡಿ ವಜಾ!
ಸರ್ಕಾರ ನಡೆಸುವುದೇ ಕಷ್ಟವಾಗಿದೆ
ವಿರೋಧಪಕ್ಷಗಳು ನಮ್ಮನ್ನು ಗುರಿ ಮಾಡಿಕೊಂಡಿವೆ. ನಾಲ್ಕು ವರ್ಷ ಮತ್ತು ಒಂಬತ್ತು ತಿಂಗಳಿನಿಂದ ಇಲ್ಲಿ ಸರ್ಕಾರ ನಡೆಸುವುದು ನನಗೆ ಕಷ್ಟದ ಸವಾಲಾಗಿದೆ. ಅದರ ನಡುವೆಯೂ ನಮ್ಮ ಸರ್ಕಾರ ಜನರಿಗೆ ಸೇವೆಗಳನ್ನು ಒದಗಿಸುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ಬಗ್ಗೆ ಚೆನ್ನಾಗಿ ಗೊತ್ತು
'ಬಿಜೆಪಿಯು ಶಾಸಕರನ್ನು ಸೆಳೆದುಕೊಳ್ಳುತ್ತಿದೆ. ಅವರನ್ನು ಬೆದರಿಸುತ್ತಿದೆ. ಆದರೆ ನನಗೆ ಬಿಜೆಪಿ ಬಗ್ಗೆ ಚೆನ್ನಾಗಿ ಗೊತ್ತು. ಅವರು ಶಾಸಕರಿಗೆ ಆಮಿಷವೊಡ್ಡಲು ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಈ ಶಾಸಕನ ಖರೀದಿಯಾಗಿದೆ, ಈ ಸಚಿವರನ್ನು ಖರೀದಿ ಮಾಡಲಾಗಿದೆ ಎಂದು ಅದರ ಬಗ್ಗೆ ಜನರು ಮಾತನಾಡುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.
ಮನವೊಲಿಸುವ ವಿಶ್ವಾಸವಿದೆ
'ರಾವ್ ಅವರು ಕಿರಣ್ ಬೇಡಿ ಅವರ ಕಿರಿಕಿರಿಯಿಂದಾಗಿ ರಾಜೀನಾಮೆ ನೀಡಿದ್ದಾರೆ. ತಮ್ಮ ಯೋಜನೆಗಳಿಗೆ ಕಿರಣ್ ಬೇಡಿ ಅಡ್ಡಿಪಡಿಸುತ್ತಿದ್ದರಿಂದ ಅವರು ಸಂಕಟಕ್ಕೆ ಒಳಗಾಗಿದ್ದರು. ಅವರು ಈಗಲೂ ನನ್ನ ಜತೆ ಇದ್ದಾರೆ. ಅವರ ಮನವೊಲಿಕೆ ಮಾಡುತ್ತೇನೆ ಎಂಬ ವಿಶ್ವಾಸ ಇದೆ' ಎಂದು ತಿಳಿಸಿದ್ದಾರೆ.
ಪುದುಚೇರಿಯಲ್ಲಿ ಸರ್ಕಾರಕ್ಕೆ ಎದುರಾದ ಪತನದ ಭೀತಿ!
ಬಿಜೆಪಿಗೆ ನಾಚಿಕೆಯಾಗಬೇಕು
'ಇದು ಬಿಜೆಪಿ ಕಾರ್ಯನಿರ್ವಹಣೆ ಮಾಡುವ ಬಗೆ. ಅವರು ಶಾಸಕರನ್ನು ಕಳ್ಳಬೇಟೆಯಾಡಿ ಖರೀದಿ ಮಾಡುತ್ತಾರೆ. ಅದನ್ನು ಮಣಿಪುರ, ಕರ್ನಾಟಕ, ಅರುಣಾಚಲಪ್ರದೇಶ, ಗುಜರಾತ್, ಮಧ್ಯಪ್ರದೇಶಗಳಲ್ಲಿ ಮಾಡಿದ್ದರು. ಅವರು ಶಾಸಕರನ್ನು ಖರೀದಿ ಮಾಡುತ್ತಾರಷ್ಟೇ. ಚುನಾಯಿತ ಕಾಂಗ್ರೆಸ್ ಸರ್ಕಾರವನ್ನು ಗುರಿ ಮಾಡುತ್ತಿರುವುದಕ್ಕೆ ಬಿಜೆಪಿಗೆ ನಾಚಿಕೆಯಾಗಬೇಕು' ಎಂದು ಕಿಡಿಕಾರಿದ್ದಾರೆ.