ಮಕ್ಕಳೆ, ಕುಂಚ ಕೈಗೆತ್ತಿಕೊಳ್ಳಿ, ಕಲ್ಪನೆಗೆ ಬಣ್ಣ ತುಂಬಿ
ಬೆಂಗಳೂರು, ಜ. 30 : ಕೇವಲ 6 ವರ್ಷಗಳ ಕಾಲ ಬದುಕಿದ್ದರೂ ಆ ಅವಧಿಯಲ್ಲೇ ಅತ್ಯದ್ಭುತ ಚಿತ್ರಗಳನ್ನು ರಚಿಸಿ ಅಚ್ಚಳಿಯದ ಬಣ್ಣಗಳನ್ನು ಬಿಟ್ಟು ಹೋಗಿರುವ ವಂಡರ್ ಕಿಡ್ ಎಡ್ಮಂಡ್ ಥಾಮಸ್ ಕ್ಲಿಂಟ್ ನೆನಪಿನಲ್ಲಿ ಕೇರಳ ಪ್ರವಾಸೋದ್ಯಮ ಇಲಾಖೆ ಮಕ್ಕಳಿಗಾಗಿಯೇ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದೆ.
ಕ್ಲಿಂಟ್ನ 30ನೇ ಪುಣ್ಯತಿಥಿಯ ಪ್ರಯುಕ್ತ ಕ್ಲಿಂಟ್ ಮೆಮೋರಿಯಲ್ ಇಂಟರ್ನ್ಯಾಷನಲ್ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, 4ರಿಂದ 15 ವರ್ಷ ವಯಸ್ಸಿನೊಳಗಿನ ಮಕ್ಕಳು ಮಾತ್ರ ಭಾಗವಹಿಸಬಹುದಾಗಿದೆ. ಜನವರಿ 30ರಿಂದ ನೋಂದಾವಣಿ ಆರಂಭವಾಗಿದ್ದು, ಮೇ 31, 2014ರಂದು ಕೊನೆಗೊಳ್ಳುತ್ತದೆ.
ಈ ಸ್ಪರ್ಧೆಯಲ್ಲಿ ವಿಜೇತರಾಗುವ ಮಕ್ಕಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ. ಆಯ್ಕೆಯಾದ ಮೊದಲ ಐದು ಅತ್ಯುತ್ತಮ ಕಲಾಕೃತಿ ರಚಿಸಿದವರಿಗೆ ಕೇರಳದಲ್ಲಿ ಪ್ರವಾಸ ಕೈಗೊಳ್ಳುವ ಅವಕಾಶ ದೊರೆಯಲಿದೆ. ವಿದೇಶ ನಿವಾಸಿಗಳಿಗೂ ಈ ಅವಕಾಶ ನೀಡಲಾಗಿದ್ದು, ವಿಜೇತ ಮಕ್ಕಳೊಂದಿಗೆ ಪಾಲಕರು ಅಥವಾ ಪೋಷಕರು ಕೂಡ ಕೇರಳದ ಟೂರ್ ಹೊಡೆಯಬಹುದು.
ಈ ಸ್ಪರ್ಧೆಯ ವಸ್ತು ಕೇರಳ ಆಗಿದ್ದು, ಆನ್ ಲೈನ್ ಮುಖಾಂತರ ಚಿತ್ರಕಲೆಯನ್ನು ಸಲ್ಲಿಸಬಹುದು. ದೇವರ ನಾಡು ಕೇರಳದ ಬಗ್ಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಎಲ್ಲ ಸ್ಪರ್ಧಾಳುಗಳಿಗೆ ಎರಡು ಇ-ಬುಕ್ ಗಳನ್ನು ಕೇರಳ ಪ್ರವಾಸೋದ್ಯಮ ಕಳಿಸುತ್ತಿದೆ. ಒಂದರಲ್ಲಿ ಕ್ಲಿಂಟ್ ರಚಿಸಿದ್ದ 30 ಚಿತ್ರಕಲೆಗಳಿದ್ದರೆ, ಮತ್ತೊಂದರಲ್ಲಿ ಕೇರಳವನ್ನು ವರ್ಣಿಸುವ 100 ವರ್ಣಚಿತ್ರಗಳಿರುತ್ತವೆ.
ವೆಬ್ ಸೈಟಿನಲ್ಲಿ 3 ಸಾವಿರಕ್ಕೂ ಹೆಚ್ಚು ವಿಡಿಯೋ ಮತ್ತು 2 ಸಾವಿರಕ್ಕೂ ಹೆಚ್ಚು ಫೋಟೋಗಳು ಉಚಿತವಾಗಿ ಲಭ್ಯವಿದ್ದು, ಅವುಗಳಿಂದ ಸ್ಫೂರ್ತಿ ಪಡೆದು ಮಕ್ಕಳು ಚಿತ್ರಗಳನ್ನು ರಚಿಸಬಹುದು. 15 ವರ್ಷಕ್ಕಿಂತ ಮೇಲಿನವರು ಸ್ವಯಂಸೇವಕರಾಗಿ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಅವರಿಗೆ ಕೂಡ ಕೇರಳವನ್ನು ಉಚಿತವಾಗಿ ನೋಡುವ ಅವಕಾಶ ದೊರೆಯಲಿದೆ.
ಕ್ಲಿಂಟ್ ಯಾರು : ಎಂಟಿ ಥಾಮಸ್ ಮತ್ತು ಚಿನ್ನಮ್ಮ ಜೋಸೆಫ್ ಅವರ ಏಕೈಕ ಮಗನಾಗಿ ಎಡ್ಮೆಂಡ್ ಥಾಮಸ್ ಕ್ಲಿಂಟ್ ಹುಟ್ಟಿದ್ದು 1976ರಲ್ಲಿ. ದೇವರ ನಾಡಿನಲ್ಲಿ ಹುಟ್ಟಿದ್ದರೂ ಪ್ರತಿಭಾವಂತನಾಗಿದ್ದ ಕ್ಲಿಂಟ್ ನಿಗೆ ದೇವರು ಹೆಚ್ಚಿನ ಆಯಸ್ಸು ಕರುಣಿಸಲಿಲ್ಲ. ಎರಡು ವರ್ಷವಾಗಿದ್ದಾಗಲೇ ಮೂತ್ರಕೋಶಗಳು ಕೈಕೊಟ್ಟವು. ಆದರೆ, ಪ್ರತಿಭೆ ಆತನ ಕೈಬಿಡಲಿಲ್ಲ.
ಏಳನೇ ವರ್ಷಕ್ಕೆ ಕೇವಲ ಒಂದು ತಿಂಗಳ ಮಾತ್ರ ಬಾಕಿಯಿದ್ದಾಗ ದೇವರು ಆತನನ್ನು ತನ್ನ ಬಳಿ ಕರೆದುಕೊಂಡುಬಿಟ್ಟ. ಆತ ಬದುಕಿದ್ದು ಕೇವಲ 2522 ದಿನಗಳು ಮಾತ್ರ. ಆದರೆ, ರಚಿಸಿದ್ದು 25 ಸಾವಿರಕ್ಕೂ ಹೆಚ್ಚು ಅತ್ಯದ್ಭುತ ಕೃತಿಗಳನ್ನು. ಅವುಗಳಲ್ಲಿ ಜೀವನ, ಸಾವು, ಪ್ರೀತಿಯುಕ್ತ ಭಾವನೆಗಳು ಬಿಂಬಿತವಾಗಿದ್ದವು.
ಆತನ ಕೃತಿಗಳಿಗೆ ವಿಶ್ವದಾದ್ಯಂತ ಪ್ರಶಂಸೆ ವ್ಯಕ್ತವಾಗಿತ್ತು. ಕ್ಲಿಂಟ್ ನ ಜೀವನ ಮತ್ತು ಕೆಲಸವನ್ನು ಆಧರಿಸಿ ಏಳು ಪುಸ್ತಕಗಳನ್ನು ಬರೆಯಲಾಗಿದ್ದು, ಎರಡು ಡಾಕ್ಯುಮೆಂಟರಿಗಳನ್ನು ತಯಾರಿಸಲಾಗಿದೆ. ಚಿತ್ರ ಬರೆಯಲು ಆತನ ಜೀವನವೇ ಮಕ್ಕಳಿಗೆ ಸ್ಫೂರ್ತಿಯ ಚಿಲುಮೆ. ಮಕ್ಕಳೇ, ಕುಂಚವನ್ನು ಕೈಗೆತ್ತಿಕೊಳ್ಳಿ, ನಿಮ್ಮ ಕಲ್ಪನೆಗಳಿಗೆ ಬಣ್ಣ ತುಂಬಿರಿ.
ಹೆಚ್ಚಿನ
ಮಾಹಿತಿಗಾಗಿ
ಸಂಪರ್ಕಿಸಿ
ಜಯನ್
ಪಿ.
ನಾಯರ್
ಇನ್ವಿಸ್
ಮಲ್ಟಿಮೀಡಿಯಾ
ಪಂಡಿತ್ಸ್
ಕಾಲೋನಿ
ಕೌಡಿಯಾರ್,
ತಿರುವನಂತಪುರ
ಕೇರಳ
695003,
ಭಾರತ
ಮೊಬೈಲ್
:
+91
94464
06749
ಈಮೇಲ್
:
[email protected]
ವೆಬ್
ಸೈಟ್
:
www.invismultimedia.com